ಮಡಿಕೇರಿ, NEWS DESK ಆ.27 : ಗ್ರಾಮೀಣ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಆತಂಕವನ್ನು ಸೃಷ್ಟಿಸಿರುವ ಕಸ್ತೂರಿ ರಂಗನ್ ವರದಿ ಇದೀಗ ಮಡಿಕೇರಿ ನಗರಸಭೆಯನ್ನು ಕೂಡ ಕಾಡಿದೆ. ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಪಿ. ಕಲಾವತಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು.
ಕಸ ವಿಲೇವಾರಿಗಾಗಿ 2ನೇ ಮೊಣ್ಣಂಗೇರಿ ಗ್ರಾಮ ವ್ಯಾಪ್ತಿಯಲ್ಲಿ ಗುರುತಿಸಿರುವ 10 ಎಕರೆ ಪ್ರದೇಶವು ಕಸ್ತೂರಿ ರಂಗನ್ ವರದಿಯಲ್ಲಿ ಸೇರ್ಪಡೆಗೊಂಡಿರುವುದರಿಂದ ನಗರಸಭೆ ಪರ್ಯಾಯ ಜಾಗದಲ್ಲಿ ಕಸ ವಿಲೇವಾರಿಗೆ ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ನಗರಸಭೆಯ ವಿರೋಧ ಪಕ್ಷದ ನಾಯಕ ಅಮಿನ್ ಮೊಹಿಸಿನ್ ಮಾತನಾಡಿ, 2ನೇ ಮೊಣ್ಣಂಗೇರಿಯಲ್ಲಿ ಕಸ ವಿಲೇವಾರಿ ಘಟಕಕ್ಕಾಗಿ ಗುರುತಿಸಲಾಗಿದ್ದ 10 ಎಕರೆ ಜಾಗಕ್ಕೆ ಈಗಾಗಲೇ ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಆದರೆ ಇದೀಗ ಆ ಜಾಗವನ್ನು ಕೈಬಿಟ್ಟು ಕಾಟಗೇರಿಯಲ್ಲಿ 5 ಎಕರೆ ಜಾಗ ಗುರುತಿಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಕಾಳಚಂಡ ಅಪ್ಪಣ್ಣ ಮಾತನಾಡಿ, 2ನೇ ಮೊಣ್ಣಂಗೇರಿ ಜಾಗಕ್ಕೆ ಬದಲಿಯಾಗಿ ಕಾಟಗೇರಿಯಲ್ಲಿ 5 ಎಕರೆ ಜಾಗವನ್ನು ಜಿಲ್ಲಾಧಿಕಾರಿಗಳು ಕಾಯ್ದಿರಿಸಿದ್ದಾರೆ. ಆದರೆ ಕಸ ವಿಲೇವಾರಿಗೆ ಅಗತ್ಯವಿರುವಷ್ಟು ಸಮತಟ್ಟಾದ ಪ್ರದೇಶ ಅಲ್ಲಿ ಲಭ್ಯವಿಲ್ಲ ಎಂದು ಸಭೆಯ ಗಮನಕ್ಕೆ ತಂದರು.
ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, 2ನೇ ಮೊಣ್ಣಂಗೇರಿಯಲ್ಲಿ ಈಗಾಗಲೇ ಗುರುತಿಸಿರುವ 10 ಎಕರೆ ಜಾಗವನ್ನು ನಗರಸಭೆಗೆ ಒದಗಿಸಲು ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿತ್ತು. ಅಲ್ಲದೆ, 3 ಎಕರೆ ಜಾಗದ ಆರ್ಟಿಸಿಯೂ ನಗರಸಭೆಗೆ ದೊರೆತಿದೆ. ಹೀಗಾಗಿ ಅದೇ ಜಾಗವನ್ನು ಕಸ ವಿಲೇವಾರಿಗೆ ಬಳಸಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ನಗರಸಭಾ ಆಯುಕ್ತ ಹೆಚ್. ಆರ್. ರಮೇಶ್ ಮಾತನಾಡಿ, ಪ್ರಸ್ತುತ ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿರುವ ಕಸವನ್ನು ವಿಲೇವಾರಿ ಮಾಡಲು ಸ್ವಲ್ಪವೂ ಜಾಗವಿಲ್ಲ. ಆದ್ದರಿಂದ ಅಗತ್ಯ ಜಾಗವನ್ನು ಪಡೆಯಲು ಸರ್ವ ಸದಸ್ಯರ ಸಭೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನಗರಸಭಾ ಇಂಜಿನಿಯರ್ ಮಾಹಿತಿ ನೀಡಿ, 2ನೇ ಮೊಣ್ಣಂಗೇರಿ ಗ್ರಾಮವು ಕಸ್ತೂರಿ ರಂಗನ್ ವರದಿಯ ಸೂಕ್ಷ್ಮ ಪರಿಸರ ವಲಯದ ಗ್ರಾಮಗಳ ಪಟ್ಟಿಯಲ್ಲಿ ಬರುವುದರಿಂದ ಪರಿಸರ ಇಲಾಖೆಯ ಒಪ್ಪಿಗೆ ಪಡೆಯುವುದು ಕಠಿಣವಾಗಲಿದೆ ಎಂದರು.
ಸುದೀರ್ಘ ಚರ್ಚೆಯ ನಂತರ ಸಮಸ್ಯೆ ಬಗೆಹರಿಸುವ ಸಲುವಾಗಿ ಜಿಲ್ಲಾಧಿಕಾರಿ ಹಾಗೂ ಅರಣ್ಯ ಸಚಿವರನ್ನು ಭೇಟಿಯಾಗಲು ಸಭೆ ನಿರ್ಧರಿಸಿತು.
ಎಸ್ಡಿಪಿಐ ಅಸಮಾಧಾನ
“ಅಧ್ಯಕ್ಷರೇ–ಉಪಾಧ್ಯಕ್ಷರೇ, ಕುರ್ಚಿ ಬಿಟ್ಟು ತೊಲಗಿ” ಎಂಬ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಎಸ್ಡಿಪಿಐ ಸದಸ್ಯರು ಬಿಜೆಪಿ ನೇತೃತ್ವದ ನಗರಸಭೆಯ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಎಸ್ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಮಾತನಾಡಿ, ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ನಗರಸಭೆಯ ಆಡಳಿತಾವಧಿ ಅ. 28ರಂದು ಮುಕ್ತಾಯಗೊಳ್ಳಲಿದ್ದು, ಇಷ್ಟು ವರ್ಷ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಇನ್ನೊಂದು ತಿಂಗಳಲ್ಲಿ ಹೇಗೆ ಪೂರ್ಣಗೊಳಿಸುತ್ತೀರಿ ಎಂದು ಪ್ರಶ್ನಿಸಿದರು.
ಎಸ್ಡಿಪಿಐ ಸದಸ್ಯರಾದ ಮನ್ಸೂರ್, ನೀಮಾ ಅರ್ಷದ್, ಮೇರಿ ವೆಗಾಸ್ ಹಾಗೂ ಬಷೀರ್ ಅಹಮದ್ ಅವರು ಪ್ರತಿಭಟನೆ ನಡೆಸಿದರು.
ಸಭೆ ಸಮರ್ಪಕವಾಗಿ ನಡೆಯದಿರುವುದಕ್ಕೆ ಎಸ್ಡಿಪಿಐ ಸದಸ್ಯರೇ ಕಾರಣ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯ ರಾಜೇಶ್ ಯಲ್ಲಪ್ಪ ಹಾಗೂ ನಾಮನಿರ್ದೇಶಿತ ಸದಸ್ಯರು ಸಭಾತ್ಯಾಗ ಮಾಡಿದರು.
ಉಪಾಧ್ಯಕ್ಷ ಮಹೇಶ್ ಜೈನಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.







