
ಚೆಟ್ಟಳ್ಳಿ, ಆ.27 NEWS DESK : ಕೊಡಗಿನ ಸಾಂಪ್ರದಾಯಿಕ ಕೈಲ್ ಪೊವ್ದ್ ಹಬ್ಬದ ಅಂಗವಾಗಿ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದಲ್ಲಿ ಕೈಲ್ ಪೊವ್ದ್ ಧಾರೆ ಪೂಜೆಯನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಯಿತು. ತಕ್ಕ ಮುಖ್ಯಸ್ಥರು ಹಾಗೂ ಊರಿನವರ ಸಮ್ಮುಖದಲ್ಲಿ ನಡೆದ ಪೂಜಾ ವಿಧಿವಿಧಾನಗಳಲ್ಲಿ ಪುರಾತನ ಕಾಲದಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ಮುಂದುವರಿಸಲಾಯಿತು. ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಸೆಪ್ಟೆಂಬರ್ 3ರಂದು ಕೊಡಗಿನಾದ್ಯಂತ ಸಾಂಪ್ರದಾಯಿಕವಾಗಿ ಕೈಲ್ ಪೊವ್ದ್ ಹಬ್ಬ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ನಾಡಿನ ಜನತೆಗೆ ಒಳಿತಾಗಲಿ, ಸುಖ-ಸಮೃದ್ಧಿ ನೆಲೆಸಲಿ ಎಂದು ಕುಲದೇವರಾದ ಇಗ್ಗುತಪ್ಪ, ಕಾವೇರಮ್ಮೆ ಹಾಗೂ ಗ್ರಾಮ ದೇವರಲ್ಲಿ ಹಿರಿಯರಾದ ಬಟ್ಟಿರ ಕಾವೇರಪ್ಪ ಅವರು ಪ್ರಾರ್ಥಿಸಿದರು. ಪೂಜೆಯ ಬಳಿಕ ಮಹಾಮಂಗಳಾರತಿ ನೆರವೇರಿಸಲಾಯಿತು. ನಂತರ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಹಿರಿಯರು, ತಕ್ಕ ಮುಖ್ಯಸ್ಥರು ಹಾಗೂ ಊರಿನವರು ಸೇರಿದಂತೆ ಹಲವು ಮಂದಿ ಧಾರೆ ಪೂಜೆಯಲ್ಲಿ ಪಾಲ್ಗೊಂಡು ಸಾಂಪ್ರದಾಯಿಕ ಆಚರಣೆಗೆ ಸಾಕ್ಷಿಯಾದರು.









