
ಮಡಿಕೇರಿ ಆ.28 NEWS DESK : ಮಹಾನ್ ಚೇತನಗಳ ಜಯಂತಿಯನ್ನು ಆಚರಿಸುವುದರಿಂದ ದೇಶದ ಶ್ರೀಮಂತ ಇತಿಹಾಸ ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಹಾಗೂ ಮಾನವೀಯ ಮೌಲ್ಯಗಳನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದ ಮಕ್ಕಂದೂರು ಸಾಧ್ಯ ಟ್ರಸ್ಟಿ ಆಫ್ ಸೋಶಿಯಲ್ ಡೆವಲಪ್ಮೆಂಟ್ ಟ್ರಸ್ಟಿ ಬಿ.ಎನ್.ರಮೇಶ್ ಅವರು ಸಮಾಜದಲ್ಲಿ ಜಾತಿ, ಅಸ್ಪೃಶ್ಯತೆ ಹಾಗೂ ಅಸಮಾನತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಜನರಲ್ಲಿ ಆತ್ಮವಿಶ್ವಾಸ, ಶಿಕ್ಷಣ, ಸಂಘಟನೆ ಮತ್ತು ಸಾಮಾಜಿಕ ಸಮಾನತೆಯ ಅರಿವು ಮೂಡಿಸಿದ ಮಹಾನ್ ಸಮಾಜ ಸುಧಾರಕರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರಮುಖರಾಗಿದ್ದಾರೆ ಎಂದರು. ದೇಶದ ಕೋಟ್ಯಾಂತರ ಜನರಲ್ಲಿ ಕೆಲವರು ಮಾತ್ರ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮಹಾನ್ ವ್ಯಕ್ತಿಗಳಾಗುತ್ತಾರೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ದೈವಾಂಶ ಸಂಭೂತರಾಗಿ ಗುರುತಿಸಿಕೊಂಡವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಅವರು ಬಣ್ಣಿಸಿದರು. ಸಾಮಾಜಿಕ ಅನ್ಯಾಯದ ವಿರುದ್ಧ ಬ್ರಹ್ಮಶ್ರೀ ನಾರಾಯಣ ಗುರುಗಳು ಅಹಿಂಸೆಯ ಮಾರ್ಗವನ್ನು ಅನುಸರಿಸಿ ಹೋರಾಟ ನಡೆಸಿದರು. ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲದವರಿಗೆ ದೇವಾಲಯವನ್ನೇ ಅವರ ಬಳಿಗೆ ತರುವ ಉದ್ದೇಶದಿಂದ ಅರುವಿಪ್ಪುರಂನಲ್ಲಿ ಶಿವಾಲಯವನ್ನು ಸ್ಥಾಪಿಸಿ, ಶಿವಲಿಂಗ ಪ್ರತಿಷ್ಠಾಪನೆ ಮಾಡಿದರು. ಪೂಜೆ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂಬ ಸಂದೇಶವನ್ನು ಸಾರಿದರು. ಭಾರತ ಮತ್ತು ಶ್ರೀಲಂಕಾದಲ್ಲಿ ಸುಮಾರು 79 ದೇವಾಲಯಗಳ ನಿರ್ಮಾಣಕ್ಕೆ ಕಾರಣರಾದ ನಾರಾಯಣ ಗುರುಗಳು ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗಿರದೆ, ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಯ ಕೇಂದ್ರಗಳಾಗಬೇಕು ಎಂದು ಪ್ರತಿಪಾದಿಸಿದರು. ಶಿವಗಿರಿಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿ ಶಾಲೆ, ಸಂಸ್ಕೃತ ಪಾಠಶಾಲೆ ಹಾಗೂ ರಾತ್ರಿ ಶಾಲೆಗಳನ್ನು ಆರಂಭಿಸುವ ಮೂಲಕ ಹಿಂದುಳಿದ ವರ್ಗದ ಜನರು ಶಿಕ್ಷಣದ ಮೂಲಕ ಸಾಮಾಜಿಕವಾಗಿ ಮೇಲೆ ಬರಬೇಕು ಎಂಬ ಆಶಯವನ್ನು ಹೊಂದಿದ್ದರು. ಮಂಗಳೂರಿನ ಕುದ್ರೋಳಿಯಲ್ಲಿ ಗೋಕರ್ಣನಾಥೇಶ್ವರ ದೇವಸ್ಥಾನದ ಪ್ರತಿಷ್ಠಾಪನೆ ಯಲ್ಲಿಯೂ ನಾರಾಯಣ ಗುರುಗಳ ಪಾತ್ರ ಮಹತ್ವದ್ದಾಗಿದೆ. ಅವರ ಪ್ರಯತ್ನಗಳಿಂದ ಬಿಲ್ಲವ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಜನರಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿ ಹೆಚ್ಚಾಯಿತು ಎಂದು ತಿಳಿಸಿದರು. ನಾರಾಯಣ ಗುರುಗಳ ಚಿಂತನೆಯ ಪ್ರಮುಖ ಅಂಶಗಳಲ್ಲಿ ವಿದ್ಯೆಯಿಂದ ಸ್ವತಃ ತನ್ನನ್ನು ಅರಿಯಬೇಕು ಎಂಬ ಸಂದೇಶವೂ ಒಂದಾಗಿದೆ. ಮೊದಲು ನಮ್ಮಲ್ಲಿರುವ ತಪ್ಪುಗಳನ್ನು ಗುರುತಿಸಿ, ಆತ್ಮಪರಿಶೀಲನೆ ಮಾಡಿಕೊಂಡು ನಂತರ ಸಮಾಜವನ್ನು ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಅವರು ಪ್ರತಿಪಾದಿಸಿದ್ದರು. ಅದೇ ರೀತಿ ಸಂಘಟನೆಯಿಂದ ಬಲಿಷ್ಠರಾಗಿ ಎಂಬ ಸಂದೇಶವನ್ನು ಸಾರಿದ ಅವರು, ಸಾಮಾಜಿಕ ಪ್ರಬಲರಾಗಲು ಸಂಘಟನೆ ಅತ್ಯಗತ್ಯ ಎಂದು ತಿಳಿಸಿದ್ದರು. ಈ ಉದ್ದೇಶದಿಂದ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ಸೇರಿದಂತೆ ಸಂಘಟನಾ ವ್ಯವಸ್ಥೆಗೆ ಬಲ ತುಂಬಿದ್ದಾರೆ ಎಂದು ಹೇಳಿದರು. ಶ್ರಮವಹಿಸಿ ದುಡಿದು ಸಮೃದ್ಧಿಯನ್ನು ಪಡೆಯಿರಿ ಎಂಬುದು ನಾರಾಯಣ ಗುರುಗಳ ಮತ್ತೊಂದು ಪ್ರಮುಖ ಸಂದೇಶವಾಗಿತ್ತು. ಅದೃಷ್ಟವನ್ನು ನಂಬಿ ಕೂರುವ ಬದಲು ನಿರಂತರ ಪರಿಶ್ರಮದ ಮೂಲಕ ಬದುಕಿನಲ್ಲಿ ಪ್ರಗತಿ ಸಾಧಿಸಬೇಕು ಎಂದು ಅವರು ಕರೆ ನೀಡಿದ್ದರು. ಮಹಿಳೆಯರೂ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಅವರಿಗೆ ಶಿಕ್ಷಣ ಹಾಗೂ ಗುಡಿ ಕೈಗಾರಿಕೆಗಳ ತರಬೇತಿಗೂ ಉತ್ತೇಜನ ನೀಡಿದ್ದರು. ನಾರಾಯಣ ಗುರುಗಳ ತತ್ವಚಿಂತನೆಯ ಸಾರವೇ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶ. ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸದೆ ಮಾನವ ಜಾತಿಯೊಂದೇ ಎಂಬ ಅರಿವು ಮೂಡಿಸಬೇಕು. ವಿವಿಧ ಮತಗಳು ಬೇರೆ ಬೇರೆ ಪಥಗಳಾಗಿದ್ದರೂ ಅಂತಿಮವಾಗಿ ಎಲ್ಲರೂ ಒಂದೇ ಪರಮಾತ್ಮನತ್ತ ಸಾಗುತ್ತಾರೆ ಎಂಬ ಸಮಾನತೆಯ ಸಂದೇಶವನ್ನು ಅವರು ಸಾರಿದರು. ನಾರಾಯಣ ಗುರುಗಳು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಸಮಾನತೆ, ಶಿಕ್ಷಣ, ಸಂಘಟನೆ, ಶ್ರಮ ಮತ್ತು ಆಧ್ಯಾತ್ಮಿಕತೆಯನ್ನು ಸಮಾಜದ ಅಭಿವೃದ್ಧಿಯ ಸಾಧನಗಳನ್ನಾಗಿ ಬಳಸಿದರು. ಅವರ ತತ್ವಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ಶಿವಗಿರಿಯಲ್ಲಿ ಅವರ ಸಮಾಧಿ ಹಾಗೂ ಶಿಕ್ಷಣ ಪರಂಪರೆ ಇಂದಿಗೂ ಅವರ ವಿಚಾರಧಾರೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಜಾತಿ-ಮತಗಳ ಎಲ್ಲೆಗಳನ್ನು ಮೀರಿ ಮಾನವೀಯತೆ ಮತ್ತು ಸಮಾನತೆಯನ್ನು ಬೆಳೆಸುವ ನಾರಾಯಣ ಗುರುಗಳ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಿ.ಎನ್.ರಮೇಶ್ ಅವರು ಕರೆ ನೀಡಿದರು. ಸೋಮವಾರಪೇಟೆ ಸೆಂಟ್ ಜೋಸೆಫರ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಜ್ಯೋತಿ ಅರುಣ್ ಕುಮಾರ್ ಅವರು ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಅವರ ಕುರಿತು ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಬಸವಣ್ಣನವರ ಕಾಯಕ ತತ್ವ ಹಾಗೂ ಸಮಾನತೆಯ ಸಂದೇಶದಿಂದ ಪ್ರೇರಣೆಗೊಂಡು, ದುಡಿಮೆಯನ್ನೇ ಆರಾಧನೆಯನ್ನಾಗಿಸಿಕೊಂಡು ಬದುಕಿದ ಶಿವಶರಣ ನುಲಿಯ ಚಂದಯ್ಯನವರ ಜೀವನ ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು. ತನು ಕರಗಬೇಕು, ಮನ ಬಳಲಬೇಕು ಎಂಬ ನುಲಿಯ ಚಂದಯ್ಯನವರ ಕಾಯಕದ ಪರಿಕಲ್ಪನೆ, ದುಡಿಮೆಯ ನಿಷ್ಠೆಯನ್ನು ಪ್ರತಿಬಿಂಬಿಸುತ್ತದೆ. ಶ್ರಮಪಟ್ಟು ಗಳಿಸಿದ ಸಂಪಾದನೆಯಿಂದಲೇ ದೇವರಿಗೆ ನೈವೇದ್ಯ ಸಲ್ಲಬೇಕು ಎಂಬುದು ಅವರ ನಿಲುವಾಗಿತ್ತು. ಅನ್ಯಾಯದ ಮೂಲಕ ಅಥವಾ ಸುಲಭವಾಗಿ ದೊರೆತ ಸಂಪತ್ತನ್ನು ದೇವರಿಗೆ ಅರ್ಪಿಸುವುದನ್ನು ಅವರು ಒಪ್ಪುತ್ತಿರಲಿಲ್ಲ ಎಂದು ಹೇಳಿದರು. ನುಲಿಯ ಚಂದಯ್ಯನವರ ಭಕ್ತಿಯನ್ನು ಪರೀಕ್ಷಿಸಲು ಶಿವಲಿಂಗವೇ ಮಾನವ ರೂಪ ತಾಳಿ ಅವರೊಂದಿಗೆ ಕಾಯಕದಲ್ಲಿ ತೊಡಗಿಸಿಕೊಂಡಿತೆಂಬ ಪ್ರಸಂಗವನ್ನು ಅವರು ವಿವರಿಸಿದರು. ನುಲಿಯ ಚಂದಯ್ಯನವರ ಕುರಿತು ಹಲವು ವಚನಗಳು ಹಾಗೂ ಸಾಹಿತ್ಯ ಕೃತಿಗಳಲ್ಲಿ ಉಲ್ಲೇಖಗಳಿದ್ದು, ಅವರ ಬದುಕು ಕೇವಲ ಭಕ್ತಿಯ ಕಥೆಯಲ್ಲ ದುಡಿಮೆ, ಪ್ರಾಮಾಣಿಕತೆ, ತ್ಯಾಗ ಮತ್ತು ದಾಸೋಹದ ಸಂದೇಶವನ್ನು ಸಾರುವ ಜೀವನಗಾಥೆಯಾಗಿದೆ ಎಂದು ಹೇಳಿದರು. ಇಂದಿನ ಪೀಳಿಗೆಗೆ ದುಡಿಮೆಯ ಮಹತ್ವವನ್ನು ತಿಳಿಸುವ ಅಗತ್ಯವಿದೆ. 11–12ನೇ ಶತಮಾನದಲ್ಲಿಯೇ ನುಲಿಯ ಚಂದಯ್ಯನವರಂತಹ ಮಹನೀಯರು ಕಾಯಕಕ್ಕೆ ನೀಡಿದ ಮಹತ್ವವನ್ನು ನಾವು ಸ್ಮರಿಸಿಕೊಳ್ಳಬೇಕು. ಅವರ ಜೀವನದಿಂದ ಪ್ರಾಮಾಣಿಕ ಪರಿಶ್ರಮ, ಸ್ವಾವಲಂಬನೆ ಹಾಗೂ ಸಮಾಜಮುಖಿ ಬದುಕಿನ ಪಾಠವನ್ನು ಕಲಿಯಬೇಕು ಎಂದು ಜ್ಯೋತಿ ಅರುಣ್ ಕುಮಾರ್ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು, ಇಂತಹ ಮಹಾನ್ ಚೇತನಗಳ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ನಿವೃತ್ತ ಪೊಲೀಸ್ ಉಪ ಅಧೀಕ್ಷರಾದ ಬಿ.ಆರ್.ಲಿಂಗಪ್ಪ ಅವರು, ನಾರಾಯಣ ಗುರುಗಳು ನೀಡಿದ ಸಂಘಟಿತರಾಗಿ, ವಿದ್ಯಾವಂತರಾಗಿ ಎಂಬ ಬೋಧನೆಯನ್ನು ಇಂದಿನ ಸಮಾಜ ಸ್ಮರಿಸಬೇಕಾಗಿದೆ. ಶಿಕ್ಷಣ ಹಾಗೂ ಸಂಘಟನೆಗೆ ಆದ್ಯತೆ ನೀಡಿದಾಗ ಮಾತ್ರ ಸಮುದಾಯ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ. ಗುರುಗಳು ತೋರಿಸಿಕೊಟ್ಟ ಮಾರ್ಗದಲ್ಲಿ ಸಾಗಲು ಹಾಗೂ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನಾವು ಇನ್ನಷ್ಟು ಪ್ರಯತ್ನಿಸಬೇಕಾಗಿದೆ ಎಂದರು. ಗುರುಗಳ ಆದರ್ಶಗಳನ್ನು ಕೇವಲ ಜಯಂತಿ ಆಚರಣೆಗೆ ಸೀಮಿತಗೊಳಿಸದೆ, ದೈನಂದಿನ ಬದುಕಿನಲ್ಲಿ ಅನುಷ್ಠಾನಗೊಳಿಸುವ ಅಗತ್ಯವಿದೆ. ಮಕ್ಕಳಿಗೆ ಹಾಗೂ ಮುಂದಿನ ಪೀಳಿಗೆಗೆ ನಾರಾಯಣ ಗುರುಗಳ ವಿಚಾರಧಾರೆ, ಸಾಮಾಜಿಕ ಸಮಾನತೆಯ ಸಂದೇಶ ಮತ್ತು ಶಿಕ್ಷಣದ ಮಹತ್ವವನ್ನು ಪರಿಚಯಿಸುವ ನಿಟ್ಟಿನಲ್ಲಿ ಸಮಾಜದ ಮುಖಂಡರು ಹಾಗೂ ಪೋಷಕರು ಶ್ರಮಿಸಬೇಕು ಎಂದು ಕರೆ ನೀಡಿದರು. ನಾರಾಯಣ ಗುರುಗಳ ಚಿಂತನೆಗಳಲ್ಲಿ ಕಾಯಕಕ್ಕೆ ವಿಶೇಷ ಸ್ಥಾನವಿದೆ. ಶ್ರಮಪಟ್ಟು ದುಡಿದು ಬದುಕಬೇಕು ಎಂಬ ಸಂದೇಶವನ್ನು ಅವರು ನೀಡಿದ್ದರು. ದೈಹಿಕವಾಗಿ ಶ್ರಮಿಸಿದಾಗ ದೇಹಕ್ಕೆ ಆಯಾಸವಾಗುತ್ತದೆ. ವಿಶ್ರಾಂತಿಯ ಬಳಿಕ ಹೊಸ ಚೈತನ್ಯ ಹಾಗೂ ಲವಲವಿಕೆ ಮೂಡುತ್ತದೆ. ಅದೇ ರೀತಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನಿರಂತರ ಪರಿಶ್ರಮ ಅಗತ್ಯ ಎಂದು ಲಿಂಗಪ್ಪ ಅವರು ಹೇಳಿದರು.
ಸಮಾಜದ ಅಭಿವೃದ್ಧಿ ಹಾಗೂ ಬಲವರ್ಧನೆಗೆ ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ಶ್ರಮಿಸಬೇಕು. ಸಮುದಾಯದ ವಿಚಾರಗಳಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಶಕ್ತಿ ಮತ್ತು ಸಾಮಥ್ರ್ಯವನ್ನು ಪ್ರದರ್ಶಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವ ಸಮಾಜದ ಬಾಂಧವರು ಪರಸ್ಪರ ಸಂಪರ್ಕದಲ್ಲಿದ್ದು, ಒಗ್ಗಟ್ಟನ್ನು ಪ್ರದರ್ಶಿಸಬೇಕು. ಸಮಾಜದ ವಿವಿಧ ತಾಲೂಕು ಹಾಗೂ ಹೋಬಳಿ ಮಟ್ಟದ ಸಂಘಟನೆಗಳನ್ನು ಮತ್ತಷ್ಟು ಬಲಪಡಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಕರೆ ನೀಡಿದರು.
ನಾರಾಯಣ ಗುರು ಜಯಂತಿ ಆಚರಣೆಯನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ನಡೆಸುವ ಕುರಿತು ಸಮಾಜದ ಬಾಂಧವರೊಂದಿಗೆ ಚರ್ಚಿಸಿ, ಸರ್ಕಾರ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸುವ ನಿಟ್ಟಿನಲ್ಲಿ ಮುಂದಾಳತ್ವ ವಹಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷರಾದ ಎಚ್.ಎಲ್.ದಿವಾಕರ ಅವರು ಮಾತನಾಡಿ, ಮಹನೀಯರು ಯಾವುದೇ ಒಂದು ಜಾತಿಗೆ ಸೀಮಿತವಾಗಿರದೆ, ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಆದ್ದರಿಂದ ಒಂದು ಸಮುದಾಯದ ಗಣ್ಯ ವ್ಯಕ್ತಿಗಳ ಜಯಂತಿಯನ್ನು ಆಚರಿಸುವಾಗ ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಇಡೀ ಸಮಾಜವನ್ನು ಒಗ್ಗೂಡಿಸಬೇಕು. ಆ ಮೂಲಕ ಮಹನೀಯರ ಜಯಂತಿಯ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮತ್ತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವಂತಾಗಬೇಕು ಎಂದು ಹೇಳಿದರು. ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಸ್.ಡಿ.ವಿಜೇತ್ ಮಾತನಾಡಿ, ಮಹನೀಯರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು. ಮಡಿಕೇರಿ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಸಮಾಜದ ಪ್ರಮುಖರಾದ ಚೆನ್ನಪ್ಪ, ಗಂಗಾಧರ್, ರಂಜನ್, ಪ್ರತೀಪ, ಸುಧೀರ್, ಕುಸುಮಾವತಿ, ಚಂದ್ರಹಾಸ್, ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು. ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ಸಾಹಿತಿ ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.










