ವಿರಾಜಪೇಟೆ, NEWS DESK ಸೆ.05:ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡಿ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳುವ ಜವಬ್ದಾರಿ ಎಲ್ಲರ ಮೇಲಿದೆ ಎಂದು ಬೇಟೋಳಿ ಗ್ರಾಮ ಪಂಚಾಯತಿ ಸಿಬ್ಬಂದಿ ಬಿ.ಎಸ್. ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಕಾರ್ಯಾನುಭವ ಶಿಬಿರದ ಪ್ರಯುಕ್ತ ಶಿಬಿರಾರ್ಥಿಗಳು, ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ, ಬೇಟೋಳಿ ಗ್ರಾಮ ಪಂಚಾಯಿತಿಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಗ್ರಾಮ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಛತೆಯೆಂಬುದು ಇತರರಿಂದ ಹೇಳಿಸಿ ಕೊಂಡು ಕಲಿಯುವಂತಹದಲ್ಲ . ಮನೆಯಿಂದಲೆ ಕಸವನ್ನು ಹೇಗೆ ವಿಲೇವಾರಿ ಮಾಡಬೇಕೆಂಬುದನ್ನು ತಿಳಿದವರು ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಸೆದು ಪ್ರಕೃತಿಯನ್ನು ಹಾಳು ಮಾಡುವ ಕೆಲಸ ಎಂದಿಗೂ ಮಾಡುವುದಿಲ್ಲ ಆದಷ್ಟು ರಸ್ತೆಯ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸವನ್ನು ಎಸೆಯದೆ ಕಸದ ಬುಟ್ಟಿಯಲ್ಲಿ ಹಾಕುವ ಮನಸ್ಥಿತಿ ರೂಢಿಸಿಕೊಳ್ಳಿ. ನಿಮ್ಮಿಂದ ಸಾಧ್ಯವಾದಷ್ಟು ಸ್ವಚ್ಚತೆ ವಿಚಾರವನ್ನು, ಸ್ವಚ್ಚತೆಯ ಮಹತ್ವವನ್ನು ಸುತ್ತಮುತ್ತಲಿನ ಜನರಲ್ಲಿ ಜಾಗೃತಿಯನ್ನು ಮೂಡಿಸಿ ಎಂದರು.
ನಂತರ ಶಿಬಿರಾರ್ಥಿಗಳು ಮಾಯಿಲ ಮಕ್ಕಿ ಜಂಕ್ಷನ್ ನಿಂದ ಮೂಲೆ ಅಂಗಡಿ ಜಂಕ್ಷನ್ ವರೆಗೆ ಸುಮಾರು ನಾಲ್ಕು ಕಿ.ಮೀ ರಸ್ತೆ ಯ ಇಕ್ಕೆಲಗಳಲ್ಲಿ ಇದ್ದ ಕಸ, ಪ್ಲಾಸ್ಟಿಕ್ , ನೀರಿನ ಬಾಟಲ್ , ಮಧ್ಯದ ಬಾಟಲಿ , ತಿಂಡಿ ತಿನಿಸುಗಳ ಕವರ್ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಕಸದ ವಾಹನಕ್ಕೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವಸಂತ ಕಟ್ಟಿ , ಶೈಲೇಶ್ , ರಕ್ಷಿತ್ ಉಪಸ್ಥಿತರಿದ್ದರು.







