ಮಡಿಕೇರಿ, NEWS DESK ಸೆ.5 : ಕೊಡವ ಕೂಟಾಳಿಯಡ ಕೂಟ ಸಂಘಟನೆಯ 2025–26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯು ಶನಿವಾರ ಪೊನ್ನಂಪೇಟೆ ಜೋಡುಬಿಟ್ಟಿಯಲ್ಲಿರುವ ಇಗ್ಗುತ್ತಪ್ಪ ಕೊಡವ ಸಂಘದ ಸಭಾಂಗಣದಲ್ಲಿ ಸಂಘಟನೆಯ ಅಧ್ಯಕ್ಷರಾಗಿದ್ದ ಚೊಟ್ಟಂಡ ಪ್ರಭು ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘಟನೆಯ ನೂತನ ಅಧ್ಯಕ್ಷರಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಉಪಾಧ್ಯಕ್ಷರಾಗಿ ಆಚೆಯಡ ಗಗನ್ ಗಣಪತಿ, ಕಾರ್ಯದರ್ಶಿಯಾಗಿ ಮಾಚಿಮಾಡ ಡಿಂಪಲ್ ಮುತ್ತಣ್ಣ ಹಾಗೂ ಖಜಾಂಚಿಯಾಗಿ ಪಾಂಡಿರ ದಿವ್ಯಾ ಉತ್ತಪ್ಪ, ನಿರ್ದೇಶಕರುಗಳಾಗಿ ಅಜ್ಜಮಾಡ ಸಾವಿತ್ರಿ, ಚೆಕ್ಕೆರ ಧನ್ಯ ಅಶ್ವಥ್ ಹಾಗೂ ಕಾಡ್ಯಮಾಡ ಸುಮನ್ ಅವರು ಆಯ್ಕೆಯಾದರು.
ನೂತನ ಅಧ್ಯಕ್ಷೆ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಅವರು ಮಾತನಾಡಿ, ಕಳೆದ ಆರು ವರ್ಷಗಳಿಂದ ಸಂಘಟನೆಯು ಕೊಡವ ಜನಾಂಗದ ಹಿತದೃಷ್ಟಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ ಸಂಘಟನೆಯ ಎಲ್ಲಾ ಸದಸ್ಯರ ಸಲಹೆ ಹಾಗೂ ಸಹಕಾರದೊಂದಿಗೆ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.
ಸಂಘಟನೆಯ ಸ್ಥಾಪಕ ಅಧ್ಯಕ್ಷೆ ಚಿಮ್ಮಚ್ಚಿರ ಪವಿತ ರಜನ್, ಗೌರವಾಧ್ಯಕ್ಷ ಚಂಗುಲಂಡ ಸೂರಜ್, ಸದಸ್ಯರುಗಳಾದ ಕೊಟ್ಟಂಗಡ ಕವಿತಾ ವಾಸುದೇವ, ಬೊಜ್ಜಂಗಡ ಭವ್ಯ ದೇವಯ್ಯ,ಇಟ್ಟಿರ ಭವ್ಯ ಈಶ್ವರ್, ಅಜ್ಜಮಾಡ ಸಾವಿತ್ರಿ, ಕರ್ತುರ ರನ್ನು ಪೆಮ್ಮಯ್ಯ, ಅಣ್ಣಳಮಾಡ ಕಾಂತಿ, ಮೊಣ್ಣಂಡ ವಿನು ಕಾರ್ಯಪ್ಪ, ಪಂದ್ಯಂಡ ರೇಣುಕಾ ಸೋಮಯ್ಯ, ಮಾಚಿಮಂಡ ತನುಜಾ, ದೇಯಂಡ ಕುಸುಮಾ ಅಶೋಕ್, ಕಳ್ಳೇಂಗಡ ಶೋಭಾ ಕಿರಣ್, ಮಣವಟ್ಟಿರ ಸಂಗೀತ್ ಈರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಂಘಟನೆಯ ಸದಸ್ಯೆ ಚೋವಂಡ ಜಮುನಾ ಸುರೇಶ್ ಪ್ರಾರ್ಥಿಸಿದರು. ಕಾರ್ಯದರ್ಶಿ ಕಬ್ಬಚ್ಚಿರ ಕಾರ್ಯಪ್ಪ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಮಾಚಿಮಾಡ ಡಿಂಪಲ್ ಲೆಕ್ಕಪತ್ರ ಮಂಡಿಸಿದರು. ಕೂಟದ ಉಪಾಧ್ಯಕ್ಷ ಚೆಕ್ಕೆರ ರಾಜೇಶ್ ವಂದಿಸಿದರು.








