
ಮಡಿಕೇರಿ NEWS DESK ಸೆ.8 : ಇತ್ತೀಚೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟ ವಿಶೇಷ ಸಭೆ ನಡೆಸಿ ಕೊಡವರ ಸಂವಿಧಾನಬದ್ಧ ಹಕ್ಕುಗಳ ವಿರುದ್ಧ ನಿರ್ಣಯ ಕೈಗೊಂಡಿರುವುದು ಖಂಡನೀಯ. ಕೊಡವರ ಹಕ್ಕುಗಳಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲವೆಂದು ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅನಾದಿ ಕಾಲದಿಂದಲೂ ಕಾವೇರಿ ತಾಯಿಯ ಈ ಪುಣ್ಯಭೂಮಿಯಲ್ಲಿ ಕೊಡವರು ಶಾಂತಿಯುತವಾಗಿ ಜೀವನ ಸಾಗಿಸುತ್ತಾ ಬಂದಿದ್ದಾರೆ. ತಮ್ಮ ಹಕ್ಕುಗಳಿಗಾಗಿ ನ್ಯಾಯಯುತ ಹೋರಾಟ ನಡೆಸಿದ್ದಾರೆಯೇ ಹೊರತು ಇತರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವನ್ನು ಎಂದಿಗೂ ಮಾಡಿಲ್ಲ. ಸ್ವಾಭಿಮಾನಿ ಕೊಡವರ ತ್ಯಾಗಮಯ ಗುಣವನ್ನೇ ದೌರ್ಬಲ್ಯವೆಂದು ತಿಳಿದುಕೊಂಡಿರುವ ಕೆಲವರು ಕೊಡವರ ಹಕ್ಕುಗಳ ಮೇಲೆ ಸವಾರಿ ಮಾಡುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.
ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೊಡವರು ಮಾತ್ರವಲ್ಲದೆ ಎಲ್ಲಾ ಜಾತಿ ಜನಾಂಗದವರು ಸೌಹಾರ್ದತೆಯಿಂದ ಬದುಕು ಕಟ್ಟಿಕೊಂಡಿದ್ದಾರೆ. ಕೊಡವರು ಎಲ್ಲರೊಂದಿಗೂ ಅತ್ಯಂತ ಗೌರವ ಮತ್ತು ಅನ್ಯೋನ್ಯತೆಯಿಂದ ಇದ್ದು, ಯಾರೊಂದಿಗೂ ಭಿನ್ನಮತವನ್ನು ಹೊಂದಿಲ್ಲ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಕೊಡಗು ಮಾದರಿಯಾಗಿದೆ. ಆದರೆ ಕೆಲವರು ಕೊಡವರ ಸಂವಿಧಾನಬದ್ಧ ಹಕ್ಕುಗಳನ್ನೇ ತಪ್ಪಾಗಿ ಅರ್ಥೈಸಿಕೊಂಡು ಒಡಕು ಮೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅತ್ಯಂತ ವಿಶಿಷ್ಟ ಮತ್ತು ಸೂಕ್ಷö್ಮ ಜನಾಂಗವಾಗಿರುವ ಕೊಡವರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಗತ್ಯವಿರುವ ಹಕ್ಕುಗಳನ್ನು ಮಂಡನೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಹಕ್ಕುಗಳನ್ನು ಮಂಡಿಸುವ ಸಂದರ್ಭ ಇತರ ಜನಾಂಗಗಳ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನಗಳನ್ನು ಕೊಡವ ಸಂಘಟನೆಗಳು ಮಾಡುತ್ತಿಲ್ಲ. ಕೊಡವರ ಭೂಮಿ, ಭಾಷೆ, ಸಾಂಪ್ರದಾಯಿಕ ಕೋವಿ ಹಕ್ಕಿನ ರಕ್ಷಣೆ, ರಾಜಕೀಯ ಬಲ ಮತ್ತು ಕೊಡವ ಜನಾಂಗಕ್ಕೆ ಸಂವಿಧಾನದ ಭದ್ರತೆಗಾಗಿ ನಿರಂತರ ಹೋರಾಟಗಳು ನಡೆಯುತ್ತಿದೆ. ಇನ್ನು ಮುಂದೆಯೂ ನಡೆಯಲಿದೆ, ಈ ಎಲ್ಲಾ ಹೋರಾಟಗಳಿಗೆ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಕೊಡವರ ಹೋರಾಟಕ್ಕೆ ಅನಗತ್ಯವಾಗಿ ಅಡ್ಡಿ ಪಡಿಸುವುದು ಅಥವಾ ಬೇರೆಯದ್ದೇ ಅರ್ಥ ಕಲ್ಪಿಸುವುದನ್ನು ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ. ಕೊಡವರು, ಗೌಡರು ಸೇರಿದಂತೆ ಎಲ್ಲಾ ಜಾತಿ ಜನಾಂಗದವರು ಒಗ್ಗಟ್ಟಿನಿಂದ ಜೀವನ ಸಾಗಿಸುವುದನ್ನು ಸಹಿಸದ ಕೆಲವರು ವರ್ಷದಲ್ಲಿ ಒಂದೆರಡು ಬಾರಿ ಈ ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಸಮಾಜದಲ್ಲಿ ಒಡಕು ಮೂಡಿಸುವ ಇಂತಹ ವ್ಯಕ್ತಿಗಳು ತಮ್ಮ ಚಾಳಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಮನು ಮುದ್ದಪ್ಪ ಒತ್ತಾಯಿಸಿದ್ದಾರೆ.









