ಮಡಿಕೇರಿ ಜ.19 : ವಿಕೆ3 ಪಿಕ್ಚರ್ಸ್ ಬ್ಯಾನರ್ ನಡಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಿಸಿರುವ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಚಿತ್ರಕ್ಕೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತಿವೆ.
ಅಸ್ಸಾಂನ ವಿಂಗ್ಸ್ ಇಂಟರ್ ನ್ಯಾಷನಲ್ ಕ್ರಿಟಿಕ್ಸ್ ಫಿಲಂ ಫೆಸ್ಟಿವಲ್ (WICFF-2022 )ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ (ಬೆಸ್ಟ್ ಫೀಚರ್ ಫಿಲಂ), ಉತ್ತಮ ಚಿತ್ರ ವಿಮರ್ಶಕರ ಪ್ರಶಸ್ತಿ (ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್), ಉತ್ತಮ ಸಂಭಾಷಣೆ ಪ್ರಶಸ್ತಿ (ಬೆಸ್ಟ್ ಡೈಲಾಗ್ ರೈಟರ್ ಅವಾರ್ಡ್)ಗಳಿಸಿದೆ.
ದೆಹಲಿಯ 7ನೇ ವಾಲೆಟ್ ಅಂತರರಾಷ್ಟ್ರೀಯ ಚಿತ್ರೋತ್ಸವ( WIFF -2022 )ದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ (ಬೆಸ್ಟ್ ಡೈರೆಕ್ಟರ್ ಅವಾರ್ಡ್) ಅತ್ಯುತ್ತಮ ಚಿತ್ರ ಪ್ರಶಸ್ತಿ (ಬೆಸ್ಟ್ ಫೀಚರ್ ಫಿಲಂ ಅವಾರ್ಡ್)ಯನ್ನು ಕೂಡ ತನ್ನದಾಗಿಸಿಕೊಂಡಿದೆ.
“ನಾಡ ಪೆದ ಆಶಾ” ಗೆ ಪ್ರಶಸ್ತಿಗಳು ದೊರೆಯುತ್ತಿರುವ ಬಗ್ಗೆ ಚಿತ್ರದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಹರ್ಷ ವ್ಯಕ್ತಪಡಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಆಯ್ಕೆಗೊಂಡು ಪ್ರಶಸ್ತಿ ಗಳಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಇದೊಂದು ಮಹಿಳಾ ಪ್ರಧಾನ ಸಾಂಸಾರಿಕ ಚಿತ್ರವಾಗಿದ್ದು, ಇಂಪಾದ ಹಾಡುಗಳಿವೆ ಮತ್ತು ಉತ್ತಮ ಸಾಮಾಜಿಕ ಸಂದೇಶವನ್ನು ನೀಡಿದೆ. ಕೊಡವ ಸಂಸ್ಕೃತಿ, ಉಡುಗೆ ತೊಡುಗೆ, ಆಚಾರ ವಿಚಾರವನ್ನು ಪ್ರತಿಬಿಂಬಿಸಲಾಗಿದೆ. ಇದುವರೆಗೆ ಪಾಲ್ಗೊಂಡ ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಇದೇ ಕಾರಣಕ್ಕೆ ಹಲವು ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಗಿದೆ ಎಂದರು.
ಚಿತ್ರದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹಾಗೂ ಸಹ ನಿರ್ಮಾಪಕಿ ಯಶೋಧ ಪ್ರಕಾಶ್ ಅವರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಮತ್ತೋರ್ವ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಹಾಗೂ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಾತನಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ “ನಾಡ ಪೆದ ಆಶಾ”ಗೆ ಮನ್ನಣೆ ದೊರೆಯುತ್ತಿರುವುದು ಹೆಮ್ಮೆಯ ವಿಚಾರ. ಕೊಡವ ಸಿನಿಮಾಗಳ ಮೂಲಕ ಕೊಡವ ಭಾಷೆ ಮತ್ತು ಸಂಸ್ಕೃತಿಯ ಸೊಗಡು ವಿಶ್ವಕ್ಕೆ ಪರಿಚಯಿಸಲ್ಪಡುತ್ತಿದೆ. ಮತ್ತಷ್ಟು ಉತ್ತಮ ಚಿತ್ರಗಳನ್ನು ನಿರ್ಮಿಸಲು ಪ್ರಶಸ್ತಿಗಳು ಸ್ಫೂರ್ತಿಯನ್ನು ತುಂಬುತ್ತಿವೆ ಎಂದರು.
ಚಿತ್ರದ ನಾಯಕ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಚಿತ್ರ ತಮಗೆ ಕೂಡ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ಹಲವು ಪ್ರಶಸ್ತಿಗಳು ಚಿತ್ರವನ್ನು ಹುಡುಕಿಕೊಂಡು ಬರುತ್ತಿರುವುದು ಶ್ಲಾಘನೀಯವೆಂದು ಹರ್ಷ ವ್ಯಕ್ತಪಡಿಸಿದರು.
ದೆಹರಾಡುನ್, ಚಂಢೀಗಡ್, ಕೊಲ್ಕತ್ತ, ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಹೈದರಬಾದ್, ಮುಂಬೈಗಳಲ್ಲಿ ನಡೆದ ಪ್ರತಿಷ್ಠಿತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ನಾಡ ಪೆದ ಆಶಾ” ವಿವಿಧ ವಿಭಾಗಗಳಲ್ಲಿ 16 ಪ್ರಶಸ್ತಿಗಳನ್ನು ಗಳಿಸಿದೆ. ಮತ್ತಷ್ಟು ಪ್ರಶಸ್ತಿಗಳು ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಚಿತ್ರತಂಡ, ಕೊಡವ ಭಾಷಾ ಚಲನಚಿತ್ರವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಕೊಡಗಿಗೆ ಹೆಗ್ಗಳಿಕೆಯ ವಿಚಾರವಾಗಿದೆ ಎಂದು ಹರ್ಷವನ್ನು ಹಂಚಿಕೊಂಡಿದೆ.










