ಮಡಿಕೇರಿ ಜ.21 : ಗಡಿ ಜಿಲ್ಲೆ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದಲ್ಲಿ ಪ್ರಸಕ್ತ ಸಾಲಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ವೈಭವದ ಸಾಂಸ್ಕೃತಿಕ ಮೆರವಣಿಗೆ, ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯುವ ಮೂಲಕ ಗಮನ ಸೆಳೆೆಯಿತು.
ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಪಂಚಾಯ್ತಿಯ ಪುಟ್ಟ ಗ್ರಾಮ ಆರ್ಜಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಒಳಗೊಂಡಂತೆ ಶನಿವಾರ ಬೆಳಗ್ಗೆ ನಡೆದ ಭವ್ಯ ಸಾಂಸ್ಕೃತಿಕ ಮೆರವಣಿಗೆ, ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸಿತಾದರೆ, ಗ್ರಾಮದುದ್ದಕ್ಕೂ ಕನ್ನಡ ಧ್ವಜ ರಾರಾಜಿಸುವ ಮೂಲಕ ಕನ್ನಡದ ಅಂತಃಸತ್ವ, ಅದರೆಡೆಗಿನ ಅಭಿಮಾನಕ್ಕೆ ಸಾಕ್ಷಿಯಾಯಿತು.
ಬೇಟೋಳಿ ಪಂಚಾಯ್ತಿಯಿಂದ ಆರ್ಜಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಸಮ್ಮೇಳನದ ಸಭಾಂಗಣದ ವರೆಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು, ಸಮ್ಮೇಳನಾಧ್ಯಕ್ಷ ಡಾ.ಎಸ್.ವಿ. ನರಸಿಂಹನ್, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ತಾಲ್ಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ಅವರನ್ನು ಒಳಗೊಂಡ ಅಲಂಕೃತ ವಾಹನ ಮೆರವಣಿಗೆಯ ಕೇಂದ್ರಬಿಓದುವಾಗಿದ್ದುದು ವಿಶೇಷ. ಸಮ್ಮೇಳನಾಧ್ಯಕ್ಷರು ಮತ್ತು ಕಲಾತಂಡಗಳ ಮೆರವಣಿಗೆÉಗೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಉಪೇಂದ್ರ ಅವರು ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿದರು.
ವಿವಿಧ ಮಂಗಳವಾದ್ಯಗಳು, ಸ್ತಬ್ಧಚಿತ್ರಗಳು, ವಿವಿಧ ಕಲಾತಂಡಗಳು, ಡೊಳ್ಳು ಕುಣಿತ, ವೀರಗಾಸೆ, ಕೋಲಾಟ, ಚಂಡೆ, ಕಂಸಾಳೆ, ಪೂಜಾ ಕುಣಿತ, ನಂದಿ ಧ್ವಜ, ದಫ್, ಕೊಡಗಿನ ವಾಲಗ ಮೆರವಣಿಗೆಗೆ ಮೆರುಗನ್ನು ನೀಡಿದವಾದರೆ, ಕನ್ನಡ ಧ್ವಜಗಳು ಮೆರವಣಿಗೆಯುದ್ದಕ್ಕೂ ರಾರಾಜಿಸುವ ಮೂಲಕ ಗ್ರಾಮದಲ್ಲಿ ಕನ್ನಡ ಹಬ್ಬದ ವಾತಾವರಣ ಮನೆ ಮಾಡಿತು.
ಮೆರವಣಿಗೆಗೆ ಮುನ್ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಬೆಳಗ್ಗೆ ರಾಷ್ಟç ಧ್ವಜಾರೋಹಣವನ್ನು ಆರ್ಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹೆಚ್.ಬಿ. ಪಾರ್ವತಿ ಹಾಗೂ ಬೇಟೋಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಬಿ.ಜೆ. ಯಶೋಧ ನೆರವೇರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ತಾಲ್ಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ ಹಾಗೂ ಕನ್ನಡ ಧ್ವಜಾರೋಹಣವನ್ನು ಜಿಲ್ಲಾಧ್ಯಕ್ಷ ಎಂಪಿ ಕೇಶವ ಕಾಮತ್ ಮಾಡಿದರು.
ಕನ್ನಡ ಸಮ್ಮೇಳನದ ಪ್ರಯುಕ್ತ ಸ್ಥಾಪಿಸಲಾಗಿದ್ದ ಲೆಫ್ಟಿನೆಂಟ್ ಜನರಲ್ ಕೋದಂಡ ನಂಜಪ್ಪ ಸೋಮಣ್ಣ ದ್ವಾರ, ಮೇಜರ್ ಜನರಲ್ ಸೋಮೆಯಂಡ ಕಾಳಪ್ಪ ಕಾರ್ಯಪ್ಪ(ಪೆರುಂಬಾಡಿ ಚೆಕ್ಪೋಸ್ಟ್)ಬಳಿ ದ್ವಾರ, ಕೊಡಗಿನ ಗೌರಮ್ಮ ದ್ವಾರ, ಕೊಡಗಿನ ಪ್ರಥಮ ಮಹಿಳಾ ಸಾಹಿತಿ (ಕಂಡಿಮಕ್ಕಿ ದೇವಸ್ಥಾನಕ್ಕೆ ಹೋಗುವ ದಾರಿ) ದ್ವಾರ, ಹರದಾಸ ಅಪ್ಪಚ್ಚ ಕವಿ ದ್ವಾರ (ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮುಖ್ಯ ದ್ವಾರ)ವನ್ನು ಗಣ್ಯರು ಉದ್ಘಾಟಿಸಿದರು. ಹಿರಿಯ ಸಾಹಿತಿ ಐ. ಮಾ. ಮುತ್ತಣ್ಣ ಸಭಾಂಗಣವನ್ನು ಪಂಚಾಯ್ತಿ ಸದಸ್ಯರಾದ ಸುನೀತಾ, ರಂಜಿತ್ ಉದ್ಘಾಟಿಸಿದರು. ರಘುನಾಥ್ ನಾಯಕ್ ವೇದಿಕೆಯನ್ನು ಪಂಚಾಯ್ತಿ ಸದಸ್ಯರಾದ ಸುಧೀಶ್, ಬೋಪಣ್ಣ ಉದ್ಘಾಟಿಸಿದರು.
ಉದ್ಘಾಟನೆ- ರಘನಾಥ್ ನಾಯಕ್ ವೇದಿಕೆಯಲ್ಲಿ ಆಯೋಜಿತ ಸಮ್ಮೇಳನವನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ.ಎಸ್.ವಿ. ನರಸಿಂಹನ್ ಅವರು ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆಗೆ ಪ್ರತಿಯೊಬ್ಬರು ಕೈಜೋಡಿಸುವಂತೆ ಕರೆ ನೀಡಿದರು.
ಸಮ್ಮೇಳನದ ಪ್ರಯುಕ್ತ ಕವಿಗೋಷ್ಠಿ, ವಿಚಾರಗೋಷ್ಠಿ ಸೇರಿದಂತೆ ಪುಸ್ತಕ ಪ್ರದರ್ಶನಗಳು ನಡೆದವು.








