Advertisement
3:05 AM Saturday 2-December 2023

ಕುಶಾಲನಗರ : ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ವಂಚನೆ : ಮೂವರು ಆರೋಪಿಗಳ ಬಂಧನ

28/02/2023

ಮಡಿಕೇರಿ ಫೆ.28 : ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ಚಿನ್ನವನ್ನು ಕರಗಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ರಾಜಕುಮಾರ(29), ಪ್ರವೀಣ್ ಕುಮಾರ(32) ಹಾಗೂ ಲಲನ್ ಕುಮಾರ್(26) ಬಂಧಿತ ಆರೋಪಿಗಳು. 15 ಗ್ರಾಂ ಚಿನ್ನ ಮತ್ತು ಪಾಲಿಶ್ ಮಾಡಲು ಬಳಸುತ್ತಿದ್ದ ಸಾಮಾಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಪಾಲಿಶ್ ಮಾಡುವ ನೆಪದಲ್ಲಿ ಮನೆ ಮನೆಗಳಿಗೆ ತೆರಳಿ ಆ್ಯಸಿಡ್ ಹಾಗೂ ಪಾಲಿಶ್ ಸಾಮಾಗ್ರಿಗಳ್ನು ಬಳಸಿ ಸ್ವಲ್ಪ ಮಟ್ಟಿನ ಚಿನ್ನವನ್ನು ಕರಗಿಸಿ ಮೋಸ ಮಾಡುತ್ತಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಡಿ.ಎಸ್.ಪುನೀತ್, ದಿನೇಶ್ ಕುಮಾರ್ ಹಾಗೂ ಸಿಬ್ಬಂದಿಗಳನ್ನು ಒಳಗೊಂಡು ಒಂದು ತಂಡ ರಚಿಸಲಾಗಿತ್ತು.
ಫೆ.25ರಂದು ಕುಶಾಲನಗರದ ಹೆಬ್ಬಾಲೆ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ 3 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಪಾಲಿಶ್ ನೆಪದಲ್ಲಿ ಸಾರ್ವಜನಿಕರಿಗೆ ವಂಚಿಸಿ ಸ್ವಲ್ಪ ಪ್ರಮಾಣದ ಚಿನ್ನ ಕಳವು ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳಿಂದ 15 ಗ್ರಾಂ ಚಿನ್ನ ಹಾಗೂ ಪಾಲಿಶ್ ಮಾಡುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
::: ಎಚ್ಚರ ಅಗತ್ಯ :::
ಮನೆ ಮನೆಗೆ ಆಗಮಿಸಿ ಚಿನ್ನಾಭರಣ ಪಾಲಿಶ್ ಮಾಡುವುದಾಗಿ ಹೇಳುವ ವ್ಯಕ್ತಿಗಳ ಬಗ್ಗೆ ಎಚ್ಚರ ವಹಿಸಬೇಕು. ಪಾಲಿಶ್ ಹಾಗೂ ಇತರೆ ಕಾರ್ಯಗಳಿಗೆ ಸ್ಥಳೀಯ ಅಧಿಕೃತ ಜ್ಯುವೆಲ್ಲರಿ ಅಂಗಡಿಗಳಲ್ಲಿ ಮಾಡಿಸುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಚಿನ್ನಾಭರಣಗಳನ್ನು ಪಡೆದು ಪಾಲಿಶ್ ಮಾಡುವ ನೆಪದಲ್ಲಿ ಚಿನ್ನ ಕರಗಿಸಿ ವಂಚಿಸುವ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಸಹಕರಿಸುವಂತೆ ಇಲಾಖೆ ಪ್ರಕಟಣೆ ನೀಡಿದೆ.