ತಲಕಾವೇರಿ ವನ್ಯಜೀವಿ ವಲಯದಲ್ಲಿ ಬೇಟೆ : ಓರ್ವನ ಬಂಧನ, ಮೂವರು ಪರಾರಿ

ಮಡಿಕೇರಿ ಮಾ.6 : ಕೇರಳ ರಾಜ್ಯದ ಗಡಿಯಿಂದ ಅಕ್ರಮವಾಗಿ ನಾಡಬಂದೂಕಿನೊoದಿಗೆ ತಲಕಾವೇರಿ ವನ್ಯಜೀವಿ ವಲಯದಲ್ಲಿ ಬೇಟೆಗೆಂದು ಬಂದಿದ್ದ ನಾಲ್ವರು ಆರೋಪಿಗಳಲ್ಲಿ ಓರ್ವನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾರ್ಯಾಚರಣೆ ಸಂದರ್ಭ ಮೂವರು ತಲೆ ಮರೆಸಿಕೊಂಡಿದ್ದಾರೆ.
ತಲಕಾವೇರಿ ವನ್ಯಜೀವಿ ವಲಯದ ಪದಿನಾಲ್ಯನಾಡು ಮೀಸಲು ಅರಣ್ಯದಲ್ಲಿ ಬೇಟೆಗಾರರು ಇರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆ ಚಾಂದೆಟ್ಟುಕೊಲ್ಲಿ ಗಸ್ತು ಹಾಗೂ ಉಪವಲಯದ ಸಿಬ್ಬಂದಿಗಳು ದಾಳಿ ನಡೆಸಿದರು. ಒಂಟಿ ನಳಿಕೆಯ ಎರಡು ನಾಡ ಬಂದೂಕು ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದರು. ತಲೆ ಮರೆಸಿಕೊಂಡಿರುವ ಮೂವರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಹಾಗೂ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ನಾಯಕ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳಾದ ಕೆ.ಕೊಟ್ರೇಶ, ಆನಂದ ಕೆ.ಕೆ, ಗಸ್ತು ವನಪಾಲಕ ಯತೀಶ್ ಬಿ.ಎಂ, ಸುಬ್ರಮಣಿ ಕೆ.ಎಂ ಹಾಗೂ ಕಳ್ಳ ಬೇಟೆ ತಡೆ ಶಿಬಿರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
