ಹಿಂದೂ ಕ್ರಿಕೆಟ್ ಕಪ್ : ಶಾಂತಿನಿಕೇತನ ಯೂತ್ ಕ್ಲಬ್ ಚಾಂಪಿಯನ್

ಮಡಿಕೇರಿ ಮಾ.7 : ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತಗೊಂಡಿದ್ದ ಹಿಂದೂ ಕ್ರಿಕೆಟ್ ಕಪ್ನಲ್ಲಿ ಮಡಿಕೇರಿಯ ಶಾಂತಿನಿಕೇತನ ಯೂತ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಮ್ಯಾಕ್ಸ್ವೆಲ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಟಾಸ್ ಗೆದ್ದ ಶಾಂತಿನಿಕೇತನ ಫೀಲ್ಡಿಂಗ್ ಆಯ್ದುಕೊಂಡು ಮ್ಯಾಕ್ಸ್ವೆಲ್ಗೆ ಬ್ಯಾಟ್ ಮಾಡುವ ಅವಕಾಶ ಮಾಡಿಕೊಟ್ಟಿತು. ನಿಗದಿತ 5 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 50 ರನ್ ಪೇರಿಸಿ 51 ರನ್ಗಳ ಗುರಿ ಎದುರಾಳಿ ತಂಡ ಮ್ಯಾಕ್ಸ್ವೆಲ್ಗೆ ನೀಡಿತು.
ಗುರಿ ಬೆನ್ನತ್ತಿದ ಶಾಂತಿನಿಕೇತನ 4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 51 ರನ್ ಪೂರೈಸಿ ಗೆಲುವಿನ ನಗೆ ಬೀರಿತು.
ಸೆಮಿಫೈನಲ್ನಲ್ಲಿ ಪರಭಾವಗೊಂಡ ಎಂ.ಸಿ.ಸಿ. ಮಕ್ಕಂದೂರು ಹಾಗೂ ಸನ್ನು ಕಾಫಿ ಮೂರನೇ, ನಾಲ್ಕನೇ ಬಹುಮಾನಕ್ಕೆ ಸೆಣಸಾಡಿದವು. ಎಂ.ಸಿ.ಸಿ ನೀಡಿದ 24 ರನ್ಗಳ ಗುರಿಯನ್ನು ಸಾಧಿಸಲು ವಿಫಲವಾದ ಸನ್ನು ಕಾಫಿ ನಾಲ್ಕನೇ ಸ್ಥಾನ ಪಡೆದುಕೊಂಡರೇ, ಎಂಸಿಸಿ 3ನೇ ಸ್ಥಾನ ತನ್ನದಾಗಿಸಿಕೊಂಡಿತು.
ವಿಜೇತ ತಂಡಕ್ಕೆ ರೂ.55,555 ರನ್ನರ್ ಅಪ್ ತಂಡಕ್ಕೆ ರೂ.33,333 ತೃತೀಯ ಸ್ಥಾನಕ್ಕೆ ರೂ.11,111 ಹಾಗೂ 4ನೇ ಸ್ಥಾನಕ್ಕೆ ರೂ.5,555 ನಗದಿನೊಂದಿಗೆ ತ್ರಿಶೂಲ ಹಾಗೂ ಡಮರುಗ ಹೊಂದಿರುವ ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ನೀಡಲಾಯಿತು.
ವೈಯಕ್ತಿಕ ಬಹುಮಾನ : ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಮ್ಯಾಕ್ಸ್ವೆಲ್ ತಂಡದ ರಾಕೇಶ್, ಉತ್ತಮ ಬ್ಯಾಟ್ಸ್ಮೆನ್ ಮ್ಯಾಕ್ಸ್ವೆಲ್ ತಂಡದ ರಾಮಣ್ಣ, ಉತ್ತಮ ಬೌಲರ್ ಶಾಂತಿನಿಕೇತನದ ಸನ್ನು, ಉತ್ತಮ ಕ್ಷೇತ್ರ ರಕ್ಷಣೆ ಪ್ರಶಸ್ತಿಯನ್ನು ಸನ್ನು ಕಾಫಿ ಲಿಂಕ್ಸ್ ತಂಡದ ವಿಷ್ಣು ತಮ್ಮದಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಬಿ.ಬಿ.ಭರತೀಶ್ ಮಾತನಾಡಿ, ಕೊಡಗು ಕೊಡಗಾಗಿ ಉಳಿಸುವ ನಿಟ್ಟಿನಲ್ಲಿ ಹಿಂದೂ ಸಮಾಜ ಒಂದುಗೂಡಬೇಕು, ಬಾಂಗ್ಲಾದಿಂದ ಭಾರತ ದೇಶದ ಪ್ರಜೆಗಳಂತೆ ನುಸುಳಿ ಜಿಲ್ಲೆಯನ್ನು ಪ್ರವೇಶಿಸಿ ಇಲ್ಲಿನ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತವರಿಂದ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದ್ದು, ಈ ರೀತಿ ಮರುಕಳಿಸಬಾರದು. ಇದನ್ನು ತಡೆಯುವ ನಿಟ್ಟಿನಲ್ಲಿ ಮುಂದಾಗಬೇಕು ಮತ್ತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಈ ಸಂದರ್ಭ ಬಂಟರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ರೈ, ಹಿಂದೂ ಕ್ರಿಕೆಟ್ ಕಪ್ ಅಧ್ಯಕ್ಷ ಕೆ.ಆರ್.ಪವನ್, ಹಿಂದೂ ಜಾಗರಣಾ ವೇದಿಕೆ ಸಹಸಂಚಾಲಕ ಚೇತನ್, ನಗರಸಭಾ ಸದಸ್ಯ ಅರುಣ್ ಶೆಟ್ಟಿ, ಉದ್ಯಮಿ ರಾಜೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
