ವಿರಾಜಪೇಟೆ : ಕೈವಾರ ತಾತಯ್ಯ ಕಾಲ ಜ್ಞಾನಿ : ಟಿ.ಎಲ್.ಶ್ರೀನಿವಾಸ್

ವಿರಾಜಪೇಟೆ ಮಾ.7 : ಸಮಾಜ ಚಿಂತಕರು, ದಾಸ ಸಾಹಿತ್ಯದ ಹರಿಕಾರರು, ಸಮಾಜ ಸುಧಾರಕರು ಕಾಲ ಜ್ಞಾನಿಗಳು ಶ್ರೀ ಕೈವಾರ ತಾತಯ್ಯ ಎಂದು ಜಿಲ್ಲಾಧ್ಯಕ್ಷ ಟಿ.ಎಲ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಶ್ರೀ ಕೈವಾರ ತಾತಯ್ಯನವರ 297ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದ ದಾರ್ಶನಿಕ ಮಹಾನಿಯರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಕೈವಾರ ತಾತಯ್ಯ ನವರು ಬಲಿಜ ಸಮಾಜದಲ್ಲಿ ಜನಿಸಿ ತನ್ನ ದಾಸ ಸಾಹಿತ್ಯದ ಮೂಲಕ ನಾಡಿಗೆ ಚಿರಪರಿಚಿತವಾದ ಮಹಾನ್ ವ್ಯಕ್ತಿಗಳು. 1726 ರಲ್ಲಿ ಜನಿಸಿದ ಕೈವಾರ ತಾತಯ್ಯ ತಮ್ಮ ಬದುಕಿನುದ್ದಕ್ಕೂ ಸಮಾಜ ಮುಖಿಯಾಗಿ ಬಾಳಿದವರು. ಅಂತಹ ಅಪ್ರತಿಮ ಸಾಧಕರ ಜಯಂತಿ ಆಚರಣೆ ಮಾಡುವುದು ನಮ್ಮ ಪುಣ್ಯ. ಇಂದಿನ ಯುವಕರಿಗೆ ಅವರ ಸಾಧನೆಗಳು ಸಾಹಿತ್ಯಗಳು ಅವಿಸ್ಮರಣೀಯ ಎಂದು ತಿಳಿಸಿದರು.
ವಿರಾಜಪೇಟೆ ಬಳೆ ವರ್ತಕ ಹಾಗೂ ಕೊಡಗು ಬಲಿಜ ಸಮಾಜ ಉಪಾಧ್ಯಕ್ಷ ಯತಿರಾಜ್ ಹಾಗೂ ಹಂಸವೇಣಿ ತಾತಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ್ ಪ್ರದೀಪ್ ಕುಮಾರ್, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಮಂಜುನಾಥ್, ಕಂದಾಯ ಪರಿವೀಕ್ಷಕ ಹರೀಶ್, ಭೂ ಮಾಪನ ಇಲಾಖೆಯ ಶಿವಾನಂದ ರೆಡ್ಡಿ, ಸಣ್ಣ ಜವರಯ್ಯ, ಸಿಬ್ಬಂದಿ ನಿಶಾನ್ ಇದ್ದರು.
