ಮಡಿಕೇರಿ ಏ.26 : ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯಲ್ಲಿ ಕುಶಾಲನಗರದ ಕೂರ್ಗ್ ಕಾಂಬ್ಯಾಟ್ ಕ್ಲಬ್ನ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ.
ದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ನಲ್ಲಿ ಚಿನ್ನ ಪದಕ ಗೆದ್ದುಕೊಂಡಿದ್ದ ಕೂರ್ಗ್ ಕಾಂಬ್ಯಾಟ್ ಕ್ಲಬ್ ವಿಜಯಪುರದಲ್ಲಿ ನಡೆದ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯಲ್ಲಿ ನವೀನ್ ಹಾಗೂ ಪ್ರಜ್ವಲ್ ಇಬ್ಬರು ಭಾಗವಹಿಸಿ ಗೆಲುವು ಸಾಧಿಸಿ ಕೊಡಗಿಗೆ ಕೀರ್ತಿ ತಂದಿದ್ದಾರೆ.
ಅಲ್ಲದೆ ಇತ್ತೀಚಿಗೆ ಗೋವಾದಲ್ಲಿ ನಡೆದ ರಾಷ್ಟ್ರಮಟ್ಟದ ಕೆ1 ಕಿಕ್ ಬಾಕ್ಸಿಂಗ್ ಹಾಗೂ ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಕ್ರೀಡಾ ಕೂಟದಲ್ಲಿ ಡಿ.ವಿ.ವರುಣ್, ಮೊಹಮ್ಮದ್ ಶಾಫಿ ಹಾಗೂ ಎಸ್.ಜಿ.ನವೀನ್ ಜಯ ಸಾಧಿಸುವ ಮೂಲಕ ಉತ್ತಮ ತಂಡ ಎಂದು ಹೆಸರು ಪಡೆದಿದೆ.
ಡಿ.ವಿ.ವರುಣ್ ಕೆ1 ಕಿಕ್ ಬಾಕ್ಸಿಂಗ್ನಲ್ಲಿ ಮೂರನೇ ರೌಂಡ್ನಲ್ಲಿ ಎದುರಾಳಿಯನ್ನು ನಾಕೌಟ್ ಮಾಡುವ ಮೂಲಕ ಜಯ ಸಾಧಿಸಿದ್ದು, ಮೊಹಮ್ಮದ್ ಶಾಫಿ ಉತ್ತಮವಾದ ರಸ್ಲಿಂಗ್ ಪ್ರದರ್ಶಿಸಿ ಎದುರಾಳಿಯನ್ನು ಮಣಿಸಿ ಏಕೀಕೃತ ನಿರ್ಧಾರದಿಂದ ಜಯ ಸಾಧಿಸಿದ್ದಾರೆ.
ಎಸ್.ಜಿ.ನವೀನ್ ಉತ್ತಮವಾದ ಹಣಾಹಣಿ ನಡೆಸಿ ಎದುರಾಳಿಯನ್ನು ತಲ್ಲಣಗೊಳಿಸಿ ವಿಜಯ ಶಾಲಿಯಾಗಿ ಹೊರಹೊಮ್ಮಿದ್ದಾರೆ.
ಎಲ್ಲಾ ಕ್ರೀಡಾಪಟುಗಳು ಕುಶಾಲನಗರದ ಕೂರ್ಗ್ ಕಾಂಬ್ಯಾಟ್ ಕ್ಲಬ್ನ ತರಬೇತುದಾರ ಅಮಿತ್ ವಿಶ್ವನಾಥ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ಬಾಕ್ಸಿಂಗ್, ಕಿಕ್ಬಾಕ್ಸಿಂಗ್, ಕುಸ್ತಿ, ಮುವಾಯ್ ತಾಯ್ ಹಾಗೂ ಜ್ಯುಜೆತ್ಸು ಎಂಬ ಎಲ್ಲಾ ಕ್ರೀಡೆಗಳ ಮಿಶ್ರಣಗೊಂಡ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಇಂತಹ ಕ್ರೀಡೆಯಲ್ಲಿ ಜಿಲ್ಲೆಗೆ ಕೀರ್ತಿ ತಂದಿರುವ ಕ್ರೀಡಾಪಟುಗಳನ್ನು ಗುರುತಿಸಿ ಸರಿಯಾದ ಮನ್ನಣೆಯೊಂದಿಗೆ ಪ್ರೋತ್ಸಾಹಿಸಬೇಕಾಗಿ ಕ್ಲಬ್ನ ತರಬೇತಿದಾರ ಅಮಿತ್ ವಿಶ್ವನಾಥ್ ಮನವಿ ಮಾಡಿದ್ದಾರೆ.






