ಮಡಿಕೇರಿ ಮೇ 7 : ಹನುಮಾನ್ ವಿರೋಧಿಗಳನ್ನು ಸೋಲಿಸಿ, ಅಪ್ಪಚ್ಚು ರಂಜನ್ ಅವರನ್ನು ಗೆಲ್ಲಿಸಿ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ಜನರಲ್ ವಿ.ಕೆ.ಸಿಂಗ್ ಕರೆ ನೀಡಿದ್ದಾರೆ.
ಕುಶಾಲನಗರ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಅವರ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿ.ಕೆ.ಸಿಂಗ್, ಕಾಂಗ್ರೆಸ್ನಿoದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ, ಅದು ಯಾವಾಗಲೂ ದೇಶವನ್ನು ತುಚ್ಛ ರೀತಿಯಲ್ಲಿ ಬಿಂಬಿಸುವ ಕೆಲಸವನ್ನೇ ಮಾಡುತ್ತಾ ಬಂದಿದೆ ಎಂದು ವಿ.ಕೆ. ಸಿಂಗ್ ಟೀಕಿಸಿದರು.
ಈ ಬಾರಿ ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿ, ಅಭಿವೃದ್ಧಿ ಕೆಲಸ-ಕಾರ್ಯಗಳು ನಿರಂತರವಾಗಿ ಮುಂದುವರೆಯಬೇಕಿದೆ ಎಂದು ಜನರಲ್ ವಿ.ಕೆ.ಸಿಂಗ್ ಆಶಯ ವ್ಯಕ್ತಪಡಿಸಿದರು.
ಕೊಡಗಿನ ಮಣ್ಣಿಗೆ ಅಪಾರ ಶಕ್ತಿಯಿದೆ. ಆ ಶಕ್ತಿಯ ಬಲದಿಂದ ಹನುಮನನ್ನು ಮಾನ್ಯ ಮಾಡದವರನ್ನು ಸೋಲಿಸುವ ಮೂಲಕ ನಮ್ಮ ಬಲ ಪ್ರದರ್ಶಿಸುವ ಕಾಲ ಕೂಡಿ ಬಂದಿದೆ ಎಂದು ಹೇಳಿದರು.
ನನಗೆ ಕೊಡಗಿನ ಬಗ್ಗೆ ಮೊದಲಿನಿಂದಲೂ ಭಾರೀ ಗೌರವವಿದೆ. ಭಾರತೀಯ ಸೇನೆಯ ಮೊತ್ತಮೊದಲ ಮುಖ್ಯಸ್ಥ ಜನರಲ್ ಕಾರ್ಯಪ್ಪ ಈ ಮಣ್ಣಿನ ಮಗ, ಅದಲ್ಲದೆ ರಜಪೂತ್ ರಿಜಿಮೆಂಟಿನವರು. 23ನೇ ಸೇನಾ ಮುಖ್ಯಸ್ಥನಾಗಿದ್ದ ನಾನೂ ಕೂಡ ರಾಜಪೂತ್ ರೆಜಿಮೆಂಟಿನವನು. ಇದು ವೀರಪುತ್ರರ ಭೂಮಿ. ಇಲ್ಲಿನ ಅಸಂಖ್ಯಾತ ಸೇನಾನಿಗಳು ಭಾರತೀಯ ಸೇನೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ ಎಂದು ಹೆಮ್ಮೆಯ ನುಡಿಯಾಡಿದರು. ಈ ಬಾರಿ ಅಪ್ಪಚ್ಚು ರಂಜನ್ ಕೂಡ ಗೆದ್ದು ಸಚಿವರಾಗಿ ಈ ನೆಲದ ಅಭಿವೃದ್ಧಿಗಾಗಿ ಇನ್ನಷ್ಟು ಕೆಲಸ ಮಾಡಲಿದ್ದಾರೆ. ಆದರಿಂದ ಅವರನ್ನು ಆರಿಸಿ ಕಳುಹಿಸಿ ಎಂದು ಕರೆ ನೀಡಿದರು.
ಪ್ರಚಾರ ಸಭೆಯನ್ನು ಉದ್ದೇಶಿಸಿ ಶಾಸಕ, ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್, ಬಿಜೆಪಿ ಪ್ರಮುಖರಾದ ಭಾರತೀಶ್, ಅನಂತ್ ಕುಮಾರ್ ಮುಂತಾದವರು ಮಾತನಾಡಿದರು.








