ಮಡಿಕೇರಿ ಅ.4 : ಮಡಿಕೇರಿ ದಸರಾ ಉತ್ಸವಕ್ಕೆ ಸರ್ಕಾರದಿಂದ ಬರುವ ಅನುದಾನಲದಲ್ಲಿ ದಶಮಂಟಪಗಳಿಗೆ ಅನ್ಯಾಯವಾಗದಂತೆ ಉತ್ತಮ ಅನುದಾನ ನೀಡಲು ಕ್ರಮ ಕೈಗೊಳ್ಳುವುದಾಗಿ ಶಾಸಕ ಡಾ.ಮಂತರ್ ಗೌಡ ಭರವಸೆ ನೀಡಿದರು.
ನಗರದ ರಾಜ್ದರ್ಶನ್ ಸಭಾಂಗದಣಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ದಶಮಂಟಪ ಸಮಿತಿಗಳ ವಿವಿಧ ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸಿ ಬಳಿಕ ಅವರು, ಮಾತನಾಡಿದರು.
ದಶಮಂಟಪಗಳು ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಅವುಗಳಿಗೆ ಪ್ರಾಮುಖ್ಯತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಬಾಕಿ ಇರುವ ಅನುದಾನದೊಂದಿಗೆ ಈ ಬಾರಿಯೂ ಉತ್ತಮ ಅನುದಾನವನ್ನು ದಶಮಂಟಪಗಳಿಗೆ ನೀಡುವ ನಿಟ್ಟಿನಲ್ಲಿ ಅತ್ಯ ಕ್ರಮ ಕೈಗೊಳ್ಳುವುದಾಗಿ ಮಂತರ್ ಗೌಡ ಆಶ್ವಾಸನೆ ನೀಡಿದರು.
ಹಾಲಿ ಜನಪ್ರತಿನಿಧಿಗಳು ಹಾಗೂ ಮಾಜಿ ಜನಪ್ರತಿನಿಧಿಗಳೆಲ್ಲರನ್ನು ಉತ್ಸವಕ್ಕೆ ಆಹ್ವಾನಿಸುವ ಕೆಲಸವಾಗಬೇಕೆಂದು ದಸರಾ ಸಮಿತಿಗೆ ಸೂಚಿಸಿದ ಶಾಸಕರು, ನಗರದ ರಸ್ತೆ ಕಾರ್ಯವನ್ನು ಕಡ್ಡಾಯವಾಗಿ ದಸರಾ ಉತ್ಸವಕ್ಕೂ ಮುನ್ನ ನಿರ್ವಹಿಸುವಂತೆ ನಗರಸಭಾಧ್ಯಕ್ಷರಿಗೆ ನಿರ್ದೇಶ ನೀಡಿದರು.
ದಸರಾ ಹಿನ್ನೆಲೆ ವಿವಿಧ ಇಲಾಖೆಗಳಿಂದ ಆಗಬೇಕಾಗಿರುವ ಪೂರ್ವ ತಯಾರಿ ಬಗ್ಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಕೆಪಿಸಿಸಿ ಪ್ರಮುಖ ಚಂದ್ರಮೌಳಿ ಮಾತನಾಡಿ, ಮಡಿಕೇರಿ ದಸರಾ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಆಚರಿಸಲ್ಪಡಬೇಕು ಎಂದು ಅಭಿಪ್ರಾಯಪಟ್ಟರು.
ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಮಡಿಕೇರಿ ನಗರದ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದಶಮಂಟಪಗಳು ಸಹಕಾರ ನೀಡಬೇಕು ಎಂದರಲ್ಲದೇ ವಿಜಯದಶಮಿಯಂದು ಹೆಚ್ಚು ಪ್ರದರ್ಶನ ನೀಡುವ ಮಂಟಪಕ್ಕೆ ದಸರಾ ಸಮಿತಿಯಿಂದ ವಿಶೇಷ ಬಹುಮಾನ ನೀಡಲಾಗುವುದು ಎಂದರು.
ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಮಂಟಪಗಳಿಗೆ ಹೆಚ್ಚಿನ ಅನುದಾನ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದರು.
ದಶಮಂಟಪ ಸಮಿತಿ ಅಧ್ಯಕ್ಷ ಮಂಜುನಾಥ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ವೈ.ರಾಜೇಶ್, ದಶಮಂಟಪ ಸಮಿತಿ ಗೌರವಾಧ್ಯಕ್ಷ ಮನು ಮಂಜುನಾಥ್, ನಿರಂಜನ್, ಕೋದಂಡರಾಮ ಮಂಟಪ ಸಮಿತಿ ಅಧ್ಯಕ್ಷ ಗೋಪಿನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಹಾಜರಿದ್ದರು. ದಶಮಂಟಪ ಸಮಿತಿ ಪ್ರಧಾನ ಕಾರ್ಯದರ್ಶಿ ಜಗದೀಶ್ ನಿರೂಪಿಸಿ ಸ್ವಾಗತಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕ ಮಂತರ್ ಗೌಡ ಅವರನ್ನು ಸನ್ಮಾನಿಸಲಾಯಿತು.







