ನಾಪೋಕ್ಲು ಡಿ.14 : ಸ್ಕೌಟ್ಸ್ ಮತ್ತು ಗೈಡ್ಸ್ ಸನಿವಾಸ-2023 ಶಿಬಿರವು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎರಡು ದಿನಗಳ ಕಾಲ ನಡೆಯಿತು.
ಶಾಲೆಯ ಸಭಾಂಗಣದಲ್ಲಿ ನಡೆದ ಶಿಬಿರವನ್ನು ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ಎಂ.ಎಸ್.ಶಿವಣ್ಣ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಮಕ್ಕಳು ಬಾಲ್ಯದಲ್ಲಿಯೇ ಶಿಸ್ತು ಮತ್ತು ಮೌಲ್ಯಗಳನ್ನು ರೂಪಿಸಿಕೊಳ್ಳಲು ಶಿಬಿರ ಸಹಕಾರಿಯಾಗಿದೆ. ಬೌದ್ಧಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ, ಪ್ರತಿ ಮಗುವು ಉತ್ತಮ ನಾಗರೀಕನಾಗಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಕೌಟ್ಸ್ ಮತ್ತು ಗೈಡ್ಸ್ ಸಂಪಾಜೆ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಧನಂಜಯ, ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಜೀವನ ಕೌಶಲ್ಯಗಳನ್ನು ತಿಳಿದುಕೊಂಡು ಬಾಳಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ಸಿಗುವಂತಾಗುತ್ತದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ಶುಭ ಹಾರೈಸಿ, ದ್ವಿತೀಯ ಸೋಪಾನ ಮತ್ತು ತೃತೀಯ ಸೋಪಾನ ಪರೀಕ್ಷೆಗಳ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ ಎ.ಡಿ.ಸಿ.ಹಾರಿಸ್, ಸ್ಕೌಟ್ ಮತ್ತು ಗೈಡ್ ನಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಸುಲೋಚನಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಚಂದ್ರಕಲಾ, ಎಸ್. ಡಿ. ಎಂ. ಸಿ ಸದಸ್ಯೆ ಜ್ಯೋತಿ,ಜಿಲ್ಲಾ ಸ್ಕೌಟ್ ತರಬೇತಿ ಆಯುಕ್ತ ಮತ್ತು ಶಿಬಿರದ ನಾಯಕ ರಂಜಿತ್ ಕೆ. ಯು. ಕಾರ್ಯದರ್ಶಿ ಉಷಾರಾಣಿ ಕೆ. ಬಿ. ಉಪಸ್ಥಿತರಿದ್ದ ಸ್ಥಳೀಯ ಸಂಸ್ಥೆ ಸಂಪಾಜೆಗೆ ಒಳಪಟ್ಟ ಕೆ. ಪಿ. ಎಸ್. ಪ್ರೌಢ ಮತ್ತು ಪ್ರಾಥಮಿಕ ವಿಭಾಗ,ಶ್ರೀ ರಾಮ ಟ್ರಸ್ಟ್ ಶಾಲೆ,ಅಂಕುರ್ ಶಾಲೆ,ಎಕ್ಸೆಲ್ ಶಾಲೆಯ 125 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿ ಗಳು ಭಾಗವಹಿಸಿದ್ದರು.
ವೀರ ಮರಣವನ್ನಪ್ಪಿದ ಕ್ಯಾ.ಪ್ರಾಂಜಲ್, ಕಾಡಾನೆ ಕಾರ್ಯಚರಣೆಯಲ್ಲಿ ಮೃತಪಟ್ಟ ಅರ್ಜುನ ಆನೆ ಹಾಗೂ ಹಿರಿಯ ನಟಿ ಲೀಲಾವತಿಯವರಿಗೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.
ಶಿಬಿರಾಗ್ನಿ: : ಶಿಬಿರಾಗ್ನಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಶಿಬಿರದ ಎರಡನೇ ದಿನ ಬಿ. ಪಿ. ಸಿಕ್ಸ್ ವ್ಯಾಯಾಮ, ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ನಂತರ ಮಕ್ಕಳಿಂದಲೇ ಅಡುಗೆ ತಯಾರಿಸುವ ಕಾರ್ಯಕ್ರಮ ನಡೆಯಿತು. ನಂತರ ಮಕ್ಕಳು ಮನೋರಂಜನ ಆಟಗಳು ಮತ್ತು ಸಾಹಸಮಯ ಕ್ರೀಡೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು. ನಾಯಕರಿಂದ ಧ್ವಜದ ನಿಯಮ, ಸಮವಸ್ತ್ರ, ಬ್ಯಾಡ್ಜ್ ಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಮಾರೋಪ: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ.ಡಿ.ಸಿ.ಸ್ಕೌಟ್ ಮತ್ತು ಎಸ್.ಡಿ. ಎಂ.ಸಿ ಉಪಾಧ್ಯಕ್ಷ ಕೆ.ಎ.ಹಾರಿಸ್ ವಹಿಸಿ ಶಿಬಿರದಲ್ಲಿ ನಡೆದ ಚಟುವಟಿಕೆಗಳ ಮಹತ್ವ, ಅವುಗಳನ್ನು ಅಳವಡಿಸಿಕೊಳ್ಳುವ ರೀತಿ, ಬದುಕಿನ ಪಾಠದ ಬಗ್ಗೆ ಮಾತನಾಡಿದರು. ಶಿಬಿರದ ನಾಯಕರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ನಾಯಕ ರಂಜಿತ್ ಶಿಬಿರದ ವರದಿ ಮಂಡಿಸಿದರು. ಸಹ ನಾಯಕ ಸ್ಕೌಟ್ ಮಾಸ್ಟರ್ ಕುಮಾರಸ್ವಾಮಿ ಮತ್ತು ಗೈಡ್ ಕ್ಯಾಪ್ಟನ್ ಜಾಜಿ ಅನಿಸಿಕೆ ನುಡಿಯಾಡಿದರು. ಉಪಸ್ಥಿತರಿದ್ದ ಶಿವಣ್ಣ ಅವರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ಶಿಬಿರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರಾದ ಸರಿತ, ಅಮಿತ, ಸೀತಮ್ಮ, ಸೋನಿಯಾ, ಚಂದ್ರಕಲಾ, ಗೀತ ಮತ್ತು ಖಜಾಂಚಿ ಬಿ.ಕೆ.ಗಂಗಮ್ಮ ಹಾಜರಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಧ್ವಜಾವರೋಹಣದೊಂದಿಗೆ ಶಿಬಿರ ಸಂಪನ್ನಗೊಂಡಿತ್ತು.
ಕಾರ್ಯದರ್ಶಿ ಉಷಾರಾಣಿ ಕಾರ್ಯಕ್ರಮ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ವರದಿ : ದುಗ್ಗಳ ಸದಾನಂದ






