ಮಡಿಕೇರಿ ಡಿ.16 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಮಹಾ ಮೃತ್ಯುಂಜಯ ಮಹದೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ಡಿ.23 ರಿಂದ 29 ರವರೆಗೆ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಅವರು ಈ ಕುರಿತು ಮಾಹಿತಿ ನೀಡಿ, ಗ್ರಾಮಸ್ಥರು ಮತ್ತು ದಾನಿಗಳ ಸಹಕಾರದಿಂದ ಕಟ್ಟೆಮಾಡು ಗ್ರಾಮದ 3.80 ಏಕರೆ ಪ್ರದೇಶದಲ್ಲಿ ಶ್ರೀ ಮಹಾ ಮೃತ್ಯುಂಜಯ ಮಹದೇಶ್ವರ ದೇಗುಲವನ್ನು ನಿರ್ಮಿಸಲಾಗಿದೆ. ದೇವಸ್ಥಾನದಲ್ಲಿ ಶಿವಲಿಂಗದೊಂದಿಗೆ ತೀರ್ಥಮಂಟಪ, ಶ್ರೀ ವಿಷ್ಣುವಿನ ಗುಡಿ, ಶ್ರೀಗಣಪತಿ ಗುಡಿ, ನಾಗನಕಟ್ಟೆ, 46 ಅಡಿಯ ಧ್ವಜಸ್ತಂಭವನ್ನು ನಿರ್ಮಿಸಲಾಗಿದೆಯೆಂದು ತಿಳಿಸಿದರು.
ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿ ಮತ್ತು ಬ್ರಹ್ಮಶ್ರೀ ಇರುವೈಲು ಕೃಷ್ಣದಾಸ ತಂತ್ರಿಗಳವರ ನೇತೃತ್ವದಲ್ಲಿ ದೇವಸ್ಥಾನದ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದೆ. ಡಿ.23 ರಂದು ಸಂಜೆ ಕ್ಷೇತ್ರದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ಕಾರ್ಯಕ್ರಮ ನಡೆಯಲಿದೆ. ಡಿ.24 ರಂದು ಬೆಳಗ್ಗೆ ಮಹಾಗಣಪತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು, ಮಧ್ಯಾಹ್ನ ಅನ್ನದಾನ ನಡೆಯಲಿದೆ. ಅಂದು ಸಂಜೆ ಅಂಕುರ ಪೂಜೆ, ದುರ್ಗಾನಮಸ್ಕಾರ ನಡೆಯಲಿದೆಯೆಂದರು.
ಸಂಜೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಶಕ್ತಿ ಪತ್ರಿಕೆಯ ಉಪ ಸಂಪಾದಕರಾದ ಸಂತೋಷ್ ಕುಡೆಕಲ್ಲು ಧಾರ್ಮಿಕ ಭಾಷಣ ಮಾಡಲಿದ್ದು, ರಾತ್ರಿ 7 ಗಂಟೆಗೆ ಬಾಯಾರಿನ ಹಂಸಧ್ವನಿ ಮೆಲೋಡಿಸ್ ಅವರಿಂದ ರಸಮಂಜರಿ ನಡೆಯಲಿದೆಯೆಂದು ಮಾಹಿತಿ ನೀಡಿದರು.
ಡಿ.25 ರಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆಯಲಿದ್ದು, ಸಂಜೆ 7 ಗಂಟೆಗೆ ಚಿ.ನಾ. ಸೋಮೇಶ್ ಅವರಿಂದ ಧಾರ್ಮಿಕ ಭಾಷಣ ನಡೆಯಲಿದೆ. ಡಿ.26 ರಂದು ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಮಡಿಕೇರಿ ಆಕಾಶವಾಣಿ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಅವರಿಂದ ಧಾರ್ಮಿಕ ಭಾಷಣ ನಡೆಯಲಿದೆಯೆಂದು ಹೇಳಿದರು.ಡಿ.27 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ ಶೋಭಾ ಸುಬ್ಬಯ್ಯ ಅವರಿಂದ ಧಾರ್ಮಿಕ ಭಾಷಣ ನಡೆಯಲಿದೆ.
ಡಿ.28 ರಂದು ಬೆಳಗ್ಗೆ ಪುನರ್ವಸು ನಕ್ಷತ್ರ 7.26 ರ ಶುಭ ಮುಹೂರ್ತದಲ್ಲಿ ದೇವರ ಪ್ರತಿಷ್ಠಾ ಕಾರ್ಯಗಳು ನಡೆಯಲಿದೆ. ಸಂಜೆ ಸಾಹಿತಿ ನಾಗೇಶ್ ಕಾಲೂರು ಅವರಿಂದ ಧಾರ್ಮಿಕ ಭಾಷಣವನ್ನು ಏರ್ಪಡಿಸಲಾಗಿದೆ. ಕೊನೆಯ ದಿನವಾದ ಡಿ.29 ರಂದು ಮಹಾದೇವ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ವಾರದ ಕಾಲ ನಡೆಯುವ ಧಾರ್ಮಿಕ ಪೂಜಾ ಕಾರ್ಯಗಳ ಸಂದರ್ಭ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಕಳ್ಳೀರ ಗಣಪತಿ, ಕೋಶಾಧಿಕಾರಿ ಪೂಣಚ್ಚ ತೋರೇರ, ಪದಾಧಿಕಾರಿಗಳಾದ ಅಪ್ಪೆಯಂಡ್ರ ಮಣಿ ಉತ್ತಪ್ಪ, ತೋರೇರ ಕಾಶಿ ಕಾರ್ಯಪ್ಪ ಹಾಗೂ ನಂದೇಟಿರ ಗಣಪತಿ ಉಪಸ್ಥಿತರಿದ್ದರು.








