ಮಡಿಕೇರಿ ಜ.17 : ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರಲ್ ಕಮಿಟಿ(ಎಐಕೆಎಂಸಿಸಿ)ಯ ಕೊಡಗು ಜಿಲ್ಲಾ ಘಟಕದಿಂದ 12 ವರ್ಷ ವಯೋಮಿತಿಯೊಳಗಿನ ಮಕ್ಕಳಿಗಾಗಿ ಉಚಿತ ಹೃದ್ರೋಗ ತಪಾಸಣೆ ಮತ್ತು ಹೃದಯ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಘಟಕದ ನಿರ್ದೇಶಕ ಖಲೀಲ್ ಬಾಷಾ, ಶಿಬಿರದ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದರು.
ಹೃದ್ರೋಗದಿಂದ ಬಳಲುತ್ತಿರುವ ಯಾವುದೇ ಸಮುದಾಯದ ಮಕ್ಕಳಿಗೆ ಅಗತ್ಯ ಚಿಕಿತ್ಸಾ ಸೌಲಭ್ಯ ಒದಗಿಸಬೇಕೆನ್ನುವ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಲ್ಲಿ ಹೆಚ್ಚಿನ ಚಿಕಿತ್ಸೆ ಇಲ್ಲವೆ ಶಸ್ತ್ರ ಚಿಕಿತ್ಸೆಯ ಅಗತ್ಯವಿರುವವರಿಗೆ ಅದನ್ನು ಕೇರಳದ ಕೋಝಿಕೋಡ್ನ ಮೆಟ್ರೋಮಡ್ ಇಂಟರ್ನ್ಯಾಷನಲ್ ಕಾರ್ಡಿಯಾಕ್ ಸೆಂಟರ್ನಲ್ಲಿ ಉಚಿತವಾಗಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಕುಶಾಲನಗರ ವಿಭಾಗದವರಾದರೆ ಮೊ.9731138438, 8861225651, ಮಡಿಕೇರಿ ಮೊ.9964813083, 7907455887, ವಿರಾಜಪೇಟೆ ಮೊ.9916265123, 9972068760 ಮೂಲಕ ಹೆಸರನ್ನು ಜ.30ರ ಒಳಗಾಗಿ ನೋಂದಾಯಿಸಿಕೊಳ್ಳಬಹದು. ಎಲ್ಲಿ ಹೆಚ್ಚಿನ ನೋಂದಣಿ ಇರುತ್ತದೊ ಅಲ್ಲಿ ಶಿಬಿರವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಹೃದ್ರೋಗ ನಿರ್ಣಯ ಶಿಬಿರವನ್ನು ಕೇರಳದ ಕೋಝಿಕೋಡ್ನ ಮೆಟ್ರೋಮಡ್ ಇಂಟರ್ನ್ಯಾಷನಲ್ ಕಾರ್ಡಿಯಾಕ್ ಸೆಂಟರ್ನ ವೈದ್ಯರ ತಂಡ ನಡೆಸಿಕೊಡಲಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಎಐಕೆಎಂಸಿಸಿಯ ಶಿಹಾಬ್ ತಂಞಳ್ ಸೆಂಟರ್ ಫಾರ್ ಹ್ಯುಮಾನಿಟಿ ಮೂಲಕ ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಸುಮಾರು 750 ಮಂದಿಗೆ ಸಂಘಟನೆ ನಿರಂತರವಾಗಿ ಅಗತ್ಯ ನೆರವನ್ನು ನೀಡುತ್ತಾ ಬರುತ್ತಿರುವುದಾಗಿ ಖಲೀಲ್ ಬಾಷಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಐಕೆಎಂಸಿಸಿ ಕೊಡಗು ಘಟಕದ ಅಧ್ಯಕ್ಷ ಅಬ್ದುಲ್ ಗಫೂರ್, ಉಪಾಧ್ಯಕ್ಷ ರಿಯಾಜ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಕೆ.ಕೆ., ಜಂಟಿ ಕಾರ್ಯದರ್ಶಿಗಳಾದ ಮೊಯಿದ್ದೀನ್ ಹಾಗೂ ಸಮೀರ್ ಉಪಸ್ಥಿತರಿದ್ದರು.










