ಕುಶಾಲನಗರ ಜ.26 NEWS DESK : ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ನಾಯಕತ್ವ, ಧೈರ್ಯ, ವೃತ್ತಿಪರ ಜ್ಞಾನ, ನಿಷ್ಠೆ, ಸ್ವಯಂ ಶಿಸ್ತು ಮತ್ತು ಆತ್ಮವಿಶ್ವಾಸದೊಂದಿಗೆ ಸಂವಹನ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಭವಿಷ್ಯದ ನಾಯಕರಾಗಲು ತಯಾರಾಗಿ ಎಂದು ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಹೇಳಿದರು.
ಕೊಡಗು ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಹಾಗೂ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಗಳ ಅಂತಿಮ ಪಥಸಂಚಲನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಸೈನಿಕ ಶಾಲೆ ಕೊಡಗು ಭಾರತೀಯ ಸೇನೆಗೆ ಅಧಿಕಾರಿಯಲ್ಲಿರಬೇಕಾದ ಗುಣಗಳನ್ನು ವೃದ್ಧಿಸುವಲ್ಲಿ ಅವಿರತವಾಗಿ ಪ್ರಯತ್ನಿಸುತ್ತಿದೆ.ಇದರೊಂದಿಗೆ ವಿದ್ಯಾರ್ಥಿಗಳು ಕೊಡಗಿನ ಸ್ಥಳೀಯ ಸಂಸ್ಕೃತಿಯನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕೆಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲು ಬೇಕಾದ ಸಮಗ್ರ ಪೂರ್ವ ತಯಾರಿಯನ್ನು ಮಾಡಿಕೊಳ್ಳುವಂತೆ ಕರೆ ನೀಡಿದರು.
ಶಾಲೆಯ ಅಶ್ವದಳದೊಂದಿಗೆ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ.ಪ್ರಕಾಶ್ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಶಾಲೆಯಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಗುಚ್ಛವನ್ನು ಅರ್ಪಿಸುವುದರ ಮೂಲಕ ಗೌರವ ಸಮರ್ಪಿಸಿದ ನಂತರ ಜನರಲ್ ತಿಮ್ಮಯ್ಯ ಪೆರೇಡ್ ಮೈದಾನದಲ್ಲಿ ತ್ರಿವರ್ಣ ಧ್ವಜವನ್ನು ಅನಾವರಣಗೊಳಿಸಿ, ರಾಷ್ಟ್ರ ಗೀತೆಯ ಗಾಯನದೊಂದಿಗೆ ಗೌರವ ಸಮರ್ಪಿಸಿದರು.
ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ಪ್ರದರ್ಶಿಸುವುದರೊಂದಿಗೆ, 12ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಪಥಸಂಚಲನವನ್ನು ಪ್ರದರ್ಶಿಸಿದರು. ಈ ಪಥಸಂಚಲನವು ಶಾಲೆಯಲ್ಲಿ 12ನೇ ತರಗತಿಯ ವಿದ್ಯಾರ್ಥಿಗಳ ತಮ್ಮ 7 ವರ್ಷಗಳ ವಿದ್ಯಾಭ್ಯಾಸದ ಅಂತಿಮ ಪಥಸಂಚಲನವಾಗಿತ್ತು.
ಶಾಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಂಪ್ಯೂಟರ್ ಶಿಕ್ಷಕರಾದ ಕೆ.ಗೋವಿಂದರಾಜ ಹಾಗೂ ಸಾಮಾನ್ಯ ಸಿಬ್ಬಂದಿ ವರ್ಗದ ಶ್ರೀ ಮಂಜುನಾಥ್ ರವರಿಗೆ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷರ ಪ್ರಶಂಸನಾ ಪ್ರಮಾಣ ಪತ್ರವನ್ನು ವಿತರಿಸಿ ಗೌರವಿಸಲಾಯಿತು.
ನಂತರ ಶಾಲೆಯ ಕುವೆಂಪು ವಿವಿದೋದ್ದೇಶ ಸಭಾಂಗಣದಲ್ಲಿ ದೇಶದ ಸಂಸ್ಕೃತಿಯ ವೈಶಿಷ್ಠ್ಯವನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು. ಶಾಲೆಯ ಪ್ರಥಮ ಮಹಿಳೆ ದಿವ್ಯಾ ಸಿಂಗ್ರವರು ಸಮಾರಂಭದಲ್ಲಿ ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೆಡೆಟ್ ದೀಪ್ತಿ ಮತ್ತು ತಂಡದವರಿಂದ ಸ್ವಾಗತ ನೃತ್ಯ, ಕೆಡೆಟ್ ಸಂಪ್ರೀತ್ ಶಿಂಧೆಯವರ ನೇತೃತ್ವದಲ್ಲಿ “ಇನ್ಕ್ರೆಡಿಬಲ್ ಇಂಡಿಯಾ” ಎಂಬ ಶಿರೋನಾಮೆಯ ಆತ್ಮಸ್ಥೈರ್ಯ ತುಂಬುವ ಸಮೂಹ ಗೀತೆ ಗಾಯನ ಹಾಗೂ ಕೆಡೆಟ್ ಪ್ರಗತಿ ಮತ್ತು ತಂಡ ಪ್ರದರ್ಶಿಸಿದರು.
ಸಮಾರಂಭದಲ್ಲಿ ಅಂತರ ನಿಲಯ ಡ್ರಿಲ್ ಸ್ಪರ್ಧೆಯ ವಿಜೇತ ತಂಡವಾಗಿ ಶಾಲೆಯ ಸುಬ್ರತೋ ನಿಲಯವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಶಾಲೆಯ ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮನ್ ಪ್ರೀತ್ ಸಿಂಗ್, ಬೋಧಕ-ಬೋಧಕೇತರ ವರ್ಗ, ಸುಮಾರು 200 ಕ್ಕೂ ಹೆಚ್ಚು ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.







