ಮಡಿಕೇರಿ ಜ.30 NEWS DESK : 2023-24 ಸಾಲಿನ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಪ್ರಯುಕ್ತ ನಗರದ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಯಿತು.
ಸ್ಕೌಟ್ ಗೈಡ್ ಭವನ ಸಭಾಂಗಣದಲ್ಲಿ ನಡೆದ “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಜಿಲ್ಲಾ ಗೈಡ್ ಆಯುಕ್ತರಾದ ರಾಣಿ ಮಾಚಯ್ಯ ಉದ್ಘಾಟಿಸಿ ಹೆಣ್ಣು ಮಕ್ಕಳು ಹೆಚ್ಚಾಗಿ ವಿದ್ಯಾವಂತರಾಗಬೇಕು ಎಂದು ಕಿವಿಮಾತು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕರಾದ ಸದಾಶಿವಯ್ಯ ಪಲ್ಲೆದ್ ಅವರು ಮಾತನಾಡಿ ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಧೈರ್ಯವಂತರಾಗಿ ಇದ್ದರೆ ಒಂದು ಸಮಾಜವು ಉನ್ನತ ಮಟ್ಟಕ್ಕೆ ಹೋಗಲು ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯು ಅವರು ಮಾತನಾಡಿ ಈಗ ಹೆಣ್ಣು ಮಕ್ಕಳು ಎಲ್ಲಾ ಉನ್ನತ ಹುದ್ದೆಯನ್ನು ಪಡೆದು ಅಧಿಕಾರ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿರುವ ನಮಿತಾ ರಾವ್ ಮಾತನಾಡಿ ಮಕ್ಕಳ ಕಲ್ಯಾಣ ಸಮಿತಿಯು ನಿರ್ವಹಿಸುವ ಕಾರ್ಯಗಳ ಬಗ್ಗೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜ ಅವರು ಮಾತನಾಡಿ ಹೆಣ್ಣು ಮಕ್ಕಳಿಗೆ ಸರಕಾರವು ಈಗ ಬಹಳಷ್ಟು ಸೌಲಭ್ಯ ಒದಗಿಸುತ್ತಿದೆ. ಇಲಾಖೆಯಿಂದ ಸಿಗುವ ಪ್ರಯೋಜನಗಳನ್ನು ಮಕ್ಕಳು/ ವಿದ್ಯಾರ್ಥಿ ಪಡೆದುಕೊಳ್ಳಬೇಕು. ಪೌಷ್ಟಿಕತೆಯಿಂದ, ಬೆಳವಣಿಗೆಯಾಗಬೇಕು ಅದರಲ್ಲೂ ಮಾನಸಿಕ, ಭೌತಿಕ, ದೈಹಿಕವಾಗಿ ಆರೋಗ್ಯದ ಬೆಳವಣಿಗೆ ಆಗಬೇಕು ಎಂದು ತಿಳಿಸಿದರು.
ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.
ವೇದಿಕೆಯಲ್ಲಿ ಗೈಡ್ ವಿಭಾಗದ ಸಹ ಕಾರ್ಯದರ್ಶಿ ಹರಿಣಿ ವಿಜಯ, ಗೈಡ್ ವಿಭಾಗದ ಮಾಜಿ ತರಬೇತಿದಾರರಾದ ಸಗಾಯ ಮೇರಿ, ನಗರದ ವಿವಿಧ ಶಾಲೆಗಳಿಂದ ಆಗಮಿಸಿದ ಗೈಡ್ ವಿದ್ಯಾರ್ಥಿನಿಯರು ಶಿಕ್ಷಕರು ಶಿಕ್ಷಕಿಯರು ಭಾಗವಹಿಸಿದ್ದರು.
ಸ್ಥಾನಿಕ ಆಯುಕ್ತರಾದ ಎಚ್.ಆರ್.ಮುತ್ತಪ್ಪ ಅವರು ಸ್ವಾಗತಿಸಿದರು. ಗೈಡ್ ವಿಭಾಗದ ಜಿಲ್ಲಾ ಸಹಾಯಕ ಆಯುಕ್ತರಾದ ಸುಲೋಚನಾ ಅವರು ವಂದಿಸಿದರು. ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕರಾದ ದಮಯಂತಿ ನಿರೂಪಿಸಿದರು.







