
ಮಡಿಕೇರಿ ಜೂ.10 NEWS DESK : ಸೌಹಾರ್ದತೆಯ ಸಮಾಜ ನಿರ್ಮಾಣ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದು ಸೇವ್ ದಿ ಡ್ರೀಮ್ಸ್ ಮುಖ್ಯಸ್ಥ ಜಾಬಿರ್ ನಿಝಾಮಿ ಅಭಿಪ್ರಾಯಪಟ್ಟರು.
ಕಂಡಕರೆಯಲ್ಲಿ ನಡೆದ ಗಾಂಧಿ ಯುವಕ ಸಂಘ ಹಾಗೂ ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿ ವತಿಯಿಂದ ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಮೊದಲ ಹಂತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಭಾರತ ದೇಶವು ಎಲ್ಲಾ, ಜಾತಿ ಧರ್ಮಗಳನ್ನೊಳಗೊಂಡ ದೇಶವಾಗಿದೆ. ಸಮಾಜದಲ್ಲಿ ಸೌಹಾರ್ದತೆ ಸ್ಥಾಪಿಸಲು ಎಲ್ಲರೂ ಶ್ರಮಿಸಬೇಕಾಗಿದೆ.
“ಸೌಹಾರ್ದ ನಮ್ಮ ಉದ್ದೇಶ, ಸೌಹಾರ್ದತೆ ನಮ್ಮ ಸಂದೇಶ” ಎಂಬ ಅಮೂಲ್ಯವಾದ ಧ್ಯೇಯವಾಕ್ಯದೊಂದಿಗೆ ಗಾಂಧಿ ಯುವಕ ಸಂಘವು ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ.
ವೈಯಕ್ತಿಕವಾಗಿ ನಾನು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ವಿರೋಧಿಸುವವನು.ಆದರೆ ಗಾಂಧಿ ಯುವಕ ಸಂಘವು ಬಡ, ಅನಾಥ ಹೆಣ್ಣುಮಗಳನ್ನು ಗುರುತಿಸಿ, ಅರ್ಹರಿಗೆ ಸಹಾಯ ಮಾಡುವ ಮೂಲಕ ಸಾಮೂಹಿಕ ವಿವಾಹ ಯಾವ ರೀತಿಯಲ್ಲಿ ನಡೆಸಬೇಕೆಂದು ಎಲ್ಲರಿಗೂ ಮಾರ್ಗದರ್ಶನವಾಗಿದ್ದಾರೆ.
ಸೌಹಾರ್ದ ಸಮಾಜವನ್ನು ಸೃಷ್ಟಿಸಲು ಸಮಾಜದಲ್ಲಿ ಯುವಕ ಸಂಘಗಳ ಪಾತ್ರ ಬಹುಮುಖ್ಯವಾಗಿದೆ.
ಮುಂದಿನ ದಿನಗಳಲ್ಲಿ ಗಾಂಧಿ ಯುವಕ ಸಂಘದ ಎಲ್ಲಾ ಸಾಮಾಜಿಕ ಚಟುವಟಿಕೆಗಳಿಗೆ ಸೇವ್ ದಿ ಡ್ರೀಮ್ಸ್ ಕೈ ಜೋಡಿಸಲಿದೆ ಎಂದು ಸೇವ್ ದಿ ಡ್ರೀಮ್ಸ್ ಮುಖ್ಯಸ್ಥ ಜಾಬಿರ್ ನಿಝಾಮಿ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅಂತರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಹಾಗೂ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಗಾಂಧಿ ಯುವಕ ಸಂಘದ ಯುವಕರು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಸಂಘದ ಮುಖಾಂತರ ಇಡೀ ಜಿಲ್ಲೆಯಲ್ಲಿ ಮಾದರಿ ಕಾರ್ಯಕ್ರಮ ಆಯೋಜಿಸಿದ್ದು, ಕೊಡಗಿನ ಯುವ ಜನರಿಗೆ ಮಾದರಿಯಾಗಿದೆ. ಜಿಲ್ಲೆ ಹಾಗೂ ರಾಜ್ಯದಲ್ಲಿ ಕಂಡಕರೆ ಎಂಬ ಗ್ರಾಮ ಇದೆ ಎಂದು ತಿಳಿದಿದ್ದು, ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಅವರ ಕಾರಣದಿಂದಾಗಿ. ಪ್ರಸ್ತುತ ಇಸ್ಮಾಯಿಲ್ ಕಂಡಕರೆ ಮುಖಾಂತರ ಇಡೀ ರಾಜ್ಯದಲ್ಲಿ ಕಂಡಕರೆ ಗ್ರಾಮ ಹೆಸರುವಾಸಿಯಾಗುತ್ತಿದೆ. ಇಸ್ಮಾಯಿಲ್ ಕಂಡಕರೆ ನೇತೃತ್ವ ಗಾಂಧಿ ಯುವಕ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ನನ್ನ ಎಲ್ಲಾ ರೀತಿಯ ಸಹಕಾರ, ಬೆಂಬಲ ಇರಲಿದೆ ಎಂದು ಅಂತರರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಹಾಗೂ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಸಲಹೆಗಾರ ಹಾಗೂ ಎಸ್.ಎನ್.ಡಿ.ಪಿ ಮಡಿಕೇರಿ ಶಾಖಾ ಅಧ್ಯಕ್ಷ ಟಿ.ಆರ್.ವಾಸುದೇವ್ ಮಾತಾನಾಡಿ, ಜನಸೇವೆಯೇ ಜನಾರ್ದನ ಸೇವೆ. ಬಡಕುಟುಂಬದಲ್ಲಿ ಒಂದು ಹೆಣ್ಣುಮಗಳಿಗೆ ಮದುವೆ ನಡೆಸಿಕೊಡಲು, ಪೋಷಕರ ಕಷ್ಟವನ್ನು ಅರಿತುಕೊಂಡು ಗಾಂಧಿ ಯುವಕ ಸಂಘ ಬಡಹೆಣ್ಣುಮಕ್ಕಳ ವಿವಾಹವನ್ನು ನಡೆಸಿಕೊಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಸಮಾಜದಲ್ಲಿ ನೈಜ ಬಡವರಿಗೆ ಸಹಾಯ ಮಾಡಬೇಕಾಗಿದೆ. ಮುಂದಿನ ದಿನಗಳಲ್ಲಿ ಗಾಂಧಿ ಯುವಕ ಸಂಘದ ಎಲ್ಲಾ ರೀತಿಯ ಕಾರ್ಯಕ್ರಮಗಳಿಗೆ ಕೈ ಜೋಡಿಸುತ್ತೇನೆಂದು ಟಿ.ಆರ್ ವಾಸುದೇವ್ ಭರವಸೆ ನೀಡಿದರು.
ಕಂಡಕರೆ ಗಾಂಧಿ ಯುವಕ ಸಂಘ ಹಾಗೂ ಸರ್ವಧರ್ಮೀಯ ಬಡಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಆಚರಣಾ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್ ಕಂಡಕರೆ ಪ್ರಾಸ್ತಾವಿಕ ಮಾತನಾಡಿ, ಮೊದಲ ಹಂತದಲ್ಲಿ ಒಂದು ಬಡಹೆಣ್ಣುಮಕ್ಕಳ ವಿವಾಹವನ್ನು ನೆರವೇರಿಸಿಕೊಟ್ಟಿದ್ದೇವೆ. ಮುಂದಿನ ದಿಗಳಲ್ಲಿ ಎರಡು ಬಡಹೆಣ್ಣುಮಕ್ಕಳ ವಿವಾಹವನ್ನು ಸಂಘದಿಂದ ನೆರವೇರಿಸಿಕೊಡುತ್ತೇವೆ. ಕಳೆದ ಮೂರು ವರ್ಷಗಳಿಂದ ಗಾಂಧಿ ಯುವಕ ಸಂಘವು ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ. ಬಡರೋಗಿಗಳಿಗೆ ಹಾಗೂ ಬಡವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಂಘವು ನೆರವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಗಳು ನಿರಂತರವಾಗಿ ನಡೆಯಲಿದೆ. ಕಳೆದ ಮೂರು ವರ್ಷಗಳ ಕಾಲ ಗಾಂಧಿ ಯುವಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ ಪ್ರತಿಯೊಬ್ಬರಿಗೂ ಕೂಡ ನಾನು ಅಭಾರಿಯಾಗಿದ್ದೇನೆ ಎಂದು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಎಂ.ಷರೀಫ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟ್ಟಿಕೊಪ್ಪ, ಕೊಡಗು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಕಟದ ಅಧ್ಯಕ್ಷ ಜಾಸೀರ್ ಮೂರ್ನಾಡು, ಕೊಡಗು ಜಿಲ್ಲಾ ಎಸ್.ಡಿ.ಪಿ.ಐ ಅಧ್ಯಕ್ಷ ಅಬ್ದುಲ್ ಅಡ್ಕರ್, ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಸಿ.ಇ.ತೀರ್ಥಕುಮಾರ್, ಎಸ್.ಎಸ್.ಎಫ್ ಕಂಡಕರೆ ಯೂನಿಟ್ ಅಧ್ಯಕ್ಷ ಬಿ.ಎಂ.ಇಬ್ರಾಹಿಂ ಸಖಾಫಿ ಮಾತನಾಡಿದರು.
ವೇದಿಕೆಯಲ್ಲಿ ಕಂಡಕರೆ ಯೂನಿಟ್ ಎಸ್ಕೆಎಸ್ಎಸ್ಎಫ್ ಅಧ್ಯಕ್ಷ ಹಾಗೂ ಗುತ್ತಿಗೆ ಸಿ.ಕೆ.ಶಂಸುದ್ದೀನ್, ಪ್ರಧಾನ ಕಾರ್ಯದರ್ಶಿ ಹಾರಿಸ್ ಬಾಖವಿ, ಪೊನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ಪೆರ್ಲ್ ಅಲ್ಯೂಮಿನಿಯಂ ಮಾಲೀಕ ಕೆ.ಎಂ.ಫೈಜಲ್, ಸುಂಟ್ಟಿಕೊಪ್ಪ ಗ್ರಾ.ಪಂ ಸದಸ್ಯ ಜಿನಾಸುದ್ದೀನ್, ಕಂಡಕರೆ ಮಹಲ್ ಅಧ್ಯಕ್ಷ ಕೆ.ಹೆಚ್.ಗಫೂರ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫಿ, ಕಂಡಕರೆ ಬಿಜೆಪಿ ಬೂತ್ ಅಧ್ಯಕ್ಷ ಜಗನ್ ನೂಜಿಬೈಲು, ಪತ್ರಕರ್ತ ಜಯಪ್ರಕಾಶ್ (ಜೆಪಿ), ಗ್ರಾ.ಪಂ ಸದಸ್ಯ ಮುಸ್ತಫಾ, ಗ್ರಾ.ಪಂ ಮಾಜಿ ಸದಸ್ಯ ಆಬಿದ್ ಕಂಡಕರೆ ಇದ್ದರು.
ಕಾರ್ಯಕ್ರಮವನ್ನು ರಾಹುಲ್ ನಿರೂಪಿಸಿದರು. ಮಹಲ್ ಖತೀಬರಾದ ಮುಸ್ತಫಾ ಸಖಾಫಿ ನಿಖಾಹ್ ನೇತೃತ್ವ ವಹಿಸಿದ್ದರು.
ಸಾಮೂಹಿಕ ವಿವಾಹ ಕಾರ್ಯಕ್ರಮದ ಮೊದಲ ಹಂತದಲ್ಲಿ ಒಂದು ಜೋಡಿ ಹೆಣ್ಣಿಗೆ ಗಾಂಧಿ ಯುವಕ ಸಂಘದಿಂದ 5 ಪವನ್ ಚಿನ್ನ(40ಗ್ರಾಂ) ಹಾಗೂ ವಧುವಿಗೆ ಮದುವೆ ಬಟ್ಟೆಯನ್ನು ನೀಡಲಾಯಿತು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ::
ಭರವಸೆಯ ನಾಯಕ ಪ್ರಶಸ್ತಿ: ಅಂತರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಹಾಗೂ ವಿರಾಜಪೇಟೆ ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ,
ಮಾದರಿ ಸಮಾಜ ಸೇವಕ ಪ್ರಶಸ್ತಿ:ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಸಲಹೆಗಾರ ಹಾಗೂ ಮಡಿಕೇರಿ ಎಸ್.ಎನ್.ಡಿ.ಪಿ ಅಧ್ಯಕ್ಷ ಟಿ.ಆರ್ ವಾಸುದೇವ್.
ಬಡವರ ಬೆಳಕು ಪ್ರಶಸ್ತಿ: ಸೇವ್ ದಿ ಡ್ರೀಮ್ಸ್ ಮುಖ್ಯಸ್ಥರ ಜಾಬಿರ್ ನಿಝಾಮಿ, ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ; ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ,ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಝೈನುಲ್ ಆಬಿದ್.
ಮಾದರಿ ಜನಪ್ರತಿನಿಧಿ ಪ್ರಶಸ್ತಿ: ಕೂಡಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಕೆ.ಬಿ ಶಂಸುದ್ದೀನ್, ಕೆ.ನಿಡುಗಣೆ ಗ್ರಾಮ ಪಂಚಾಯತಿ ಸದಸ್ಯ ಜಾನ್ಸನ್ ಪಿಂಟೋ.
ಮಾದರಿ ಸಮಾಜ ಸೇವಕಿ: ಫ್ರೀ ಬ್ರೈಡಲ್ ಬೋಟಿಕ್ ಸಂಸ್ಥೆಯ ಶಹರಬಾನು ಅವರು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಂಡಕರೆ ಗ್ರಾಮಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿದ ಫಾತಿಮತ್ ಶಂನಾ ಸಿ.ಎನ್, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿದ ಕೆ.ಜೆ.ಅಜನ್ಯ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಹಾಗೂ ಉಡುಪಿ-ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಕಾಲ್ಚೆಂಡು ಪಂದ್ಯವಾಳಿಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ತಂಡವನ್ನು ಪ್ರತಿನಿಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಗಾಂಧಿ ಯುವಕ ಸಂಘದ ಸದಸ್ಯ ಕೆ.ವೈ ಸಮ್ಮಾಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.








