
ವಿರಾಜಪೇಟೆ ಜೂ.11 NEWS DESK : ವಿರಾಜಪೇಟೆ ಕಾವೇರಿ ವಿದ್ಯಾ ಸಂಸ್ಥೆಯ ಗೇಣಿ ಮತ್ತು ಪಹಣಿ ಪತ್ರವನ್ನು ಶಾಸಕ ಎ.ಎಸ್.ಪೊನ್ನಣ್ಣ ಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಶಾಸಕರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪರವಾಗಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಆರ್.ಸಾಲ್ಡಾನ ಹಾಗೂ ಉಪನ್ಯಾಸಕ ವರ್ಗದವರು ಪತ್ರವನ್ನು ಸ್ವೀಕರಿಸಿದರು.
ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ಶಾಸಕರು ಕಾವೇರಿ ವಿದ್ಯಾ ಸಂಸ್ಥೆ 40 ದಶಕಗಳಿಂದ ಉತ್ತಮ ರೀತಿಯ ವಿದ್ಯಾಭ್ಯಾಸವನ್ನು ನೀಡುತ್ತಿದ್ದು, ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುವಂತಹ ವಿದ್ಯಾರ್ಥಿಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದೇ ರೀತಿ ಸಮಾಜಕ್ಕೆ ಅವರ ಸೇವೆ ಮುಂದುವರೆಯಲಿ ಎಂದರು.
ಗೇಣಿ ಹಾಗೂ ಪಹಣಿ ಪತ್ರಿಕೆಯನ್ನು ಸ್ವೀಕರಿಸಿ ಮಾತನಾಡಿದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬೆನಡಿಕ್ಟ್ ಆರ್ ಸಾಲ್ಡಾನ, 1980ರಲ್ಲಿ ಪಾಂಡಂಡ ನಂಜಪ್ಪ, ಇವರು ತಮ್ಮ ಪತ್ನಿ ಪಾಂಡಂಡ ಸುಬ್ಬಮ್ಮ ನಂಜಪ್ಪನವರ ಜ್ಞಾಪಕಾರ್ಥವಾಗಿ ವಿದ್ಯಾ ಸಂಸ್ಥೆಗೆ ಮೂರು ಲಕ್ಷ ರೂಪಾಯಿ ನೀಡಿದ್ದರು. ಈ ಹಣದಿಂದ ಕೀತಿಯಂಡ ಅಪ್ಪಾಜಿಯವರ ಸ್ವಾಧೀನದಲ್ಲಿದ್ದ ಈ ಸ್ಥಳವನ್ನು ಖರೀದಿ ಮಾಡಲಾಗಿತ್ತು. ಖರೀದಿ ಮಾಡಿ ನಲವತ್ತು ವರ್ಷಗಳು ಕಳೆದರು ಸ್ಥಳದ ಗೇಣಿ ಹಾಗೂ ಪಹಣಿ ಪತ್ರಿಕೆ ಜಾಗದ ಮೊದಲ ಮಾಲೀಕರಾದ ಕೀತಿಯಂಡ ಅಪ್ಪಾಜಿ ಹೆಸರಿನಲ್ಲಿಯೇ ಇತ್ತು. ಸಂಸ್ಥೆ ಎಷ್ಟು ಪ್ರಯತ್ನಿಸಿದರು ಬದಲಾಯಿಸಲಾಗಲಿಲ್ಲ. ಈಗ ದೇಚಮ್ಮ ಕಾಳಪ್ಪನವರ ಕಾಳಜಿ ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಮುತುವರ್ಜಿಯಿಂದ ಗೇಣಿ ಹಾಗೂ ಪಹಣಿ ಪತ್ರಿಕೆ ಕಾವೇರಿ ವಿದ್ಯಾಸಂಸ್ಥೆಯ ಹೆಸರಿಗೆ ವರ್ಗಾವಣೆಗೊಂಡಿದೆ. ಶಾಸಕರು ವಿದ್ಯಾಸಂಸ್ಥೆಗೆ ಮಾಡಿದ ಸೇವೆಗೆ ಆಡಳಿತ ಮಂಡಳಿ ಉಪನ್ಯಾಸಕ ವರ್ಗದ ಪರವಾಗಿ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಂ. ನಾಣಯ್ಯ, ಐ.ಕ್ಯೂ.ಎ.ಸಿ ಸಂಚಾಲಕಿ ಡಾ.ಕೆ.ಜಿ.ವೀಣಾ, ಅಧೀಕ್ಷಕರಾದ ಜಗದೀಶ್ ಬಿ.ಎಸ್, ಸೋಮನಾಥ್, ಉಪನ್ಯಾಸಕರ ರಾಘವೇಂದ್ರ ಎಲ್.ಆರ್, ಅಕ್ಷಿತಾ ನಾಯ್ಕ್.ಟಿ, ಸುನಿಲ್ ಕುಮಾರ್ ಬಿ.ಬಿ. ಪುರಸಭೆ ಸದಸ್ಯರಾದ ದೇಚಮ್ಮ ಕಾಳಪ್ಪ ಡಿ.ಪಿ.ರಾಜೇಶ್, ಎಸ್.ಹೆಚ್. ಮತೀನ್ ಹಾಜರಿದ್ದರು.








