ಮಡಿಕೇರಿ ಆ.9 NEWS DESK : ರಾಷ್ಟ್ರೀಯ ಸಮಗ್ರತೆ ಮತ್ತು ಶಾಂತಿಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಜುಲೈನಲ್ಲಿ ಕೊಡಗಿನಿಂದ ಕನ್ಯಾಕುಮಾರಿಯವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ವಯನಾಡಿನ ತುರ್ತು ಪರಿಸ್ಥಿತಿಯಿಂದ ರದ್ದುಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಉಡುಪಿಯ ಕಡೆಕಾರ್ ನಿವಾಸಿ ಜಯಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.20 ರಂದು ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿಯ ಬಿಜಿಎಸ್ ಶಾಲೆಯಿಂದ ಆರಂಭಗೊಂಡ ಪಾದಯಾತ್ರೆಗೆ ಆಸ್ಕರ್ ಫರ್ನಾಂಡಿಸ್ ಅವರ ಅಭಿಮಾನಿಗಳು ಹಾಗೂ ಶಾಲಾ ಮುಖ್ಯೋಪಾಧ್ಯರಾದ ರತ್ನಾ ದೇವೇಗೌಡ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಚಾಲನೆ ನೀಡಿದ್ದು, ಶನಿವಾರಸಂತೆ, ಸೋಮವಾರಪೇಟೆ, ಕುಶಾಲನಗರ, ಪಿರಿಯಾಪಟ್ಟಣ, ಆನೇಚೌಕೂರು, ಗೋಣಿಕೊಪ್ಪಲು, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ, ತೌಳಪಟ್ಟಿ, ಕಾಟಿಕುಳ್ಳ, ಮಾನಂದವಾಡಿ ಮೂಲಕ 190 ಕಿ.ಮೀ ಕ್ರಮಿಸಿದ ಪಾದಯಾತ್ರೆಯು ಜು.29 ರಂದು ಸಂಜೆ ಕಲ್ಪೆಟ್ಟ, ವಯನಾಡು ತಲುಪಿತು. ಆದರೆ, ಜು.30 ರಂದು ಬೆಳಿಗ್ಗೆ 7 ಗಂಟೆಗೆ ಚೂರಲ್ಮಲಾದಲ್ಲಿ ಭೂಕುಸಿತದಿಂದಾಗಿ ನಿಧಾನಗೊಂಡಿದ್ದು, ಕಲ್ಪೆಟ್ಟಾ ಮತ್ತು ವಯನಾಡ್ ತುರ್ತುವಿನಲ್ಲಿ ತುರ್ತು ಪರಿಸ್ಥಿತಿ ಇದ್ದ ಕಾರಣ ನಾನು ನನ್ನ ಪಾದಯಾತ್ರೆಯನ್ನು ರದ್ದುಗೊಳಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವುದಾಗಿ ತಿಳಿಸಿದರು. ಪಾರುಗಾಣಿಕಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ನಾನು ಏಕೈಕ ಮುಂಬೈಕರ್ ಮತ್ತು ಕೆಲವೇ ಕನ್ನಡಿಗರಲ್ಲಿ ಒಬ್ಬನಾಗಿದ್ದು, ಚೂರಲ್ಮಲಾ ಮತ್ತು ಮೆಪ್ಪಾಡಿ, ವಯನಾಡ್ ಬೇಗ ಸಹಜ ಸ್ಥಿತಿಗೆ ಮರಳಲಿ ಎಂದ ಅವರು, ಇದೀಗ ವಯನಾಡು ಶೋಕದಲ್ಲಿರುವ ಕಾರಣ ಮುಂದಿನ ಒಂದೆರಡು ತಿಂಗಳಲ್ಲಿ ವಯನಾಡಿನಿಂದ ನನ್ನ ಪಾದಯಾತ್ರೆಯನ್ನು ಮುಂದುವರೆಸುವುದಾಗಿ ಜಯಪ್ರಕಾಶ್ ಶೆಟ್ಟಿ ಹೇಳಿದರು.







