
ವಿರಾಜಪೇಟೆ ಸೆ.3 NEWS DESK : ಸಮಾಜ ಸೇವೆಯನ್ನೇ ದ್ಯೇಯವಾಗಿಟ್ಟಿರುವ ಮದರ್ ತೆರೇಸಾ ಸೇವಾ ಕೇಂದ್ರದ ಸಾಮಾಜಿಕ ಕಳಕಳಿಯು ಶ್ಲಾಘನೀಯವಾಗಿದೆ ಎಂದು ವಿರಾಜಪೇಟೆಯ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಗುರುಗಳು ಹಾಗೂ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ.ಜೇಮ್ಸ್ ಡೊಮಿನಿಕ್ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಮದರ್ ತೆರೇಸಾ ಸೇವಾ ಕೇಂದ್ರದ ವತಿಯಿಂದ ಸಂತ ಅನ್ನಮ್ಮ ದ್ವಿಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಮದರ್ ತೆರೇಸಾ ಜನ್ಮ ದಿನಾಚರಣೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿರಿಯರನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಹಿರಿಯರು ಮಕ್ಕಳಲ್ಲಿ ವಿಶ್ವಾಸವನ್ನು ತುಂಬಬೇಕು. ಪ್ರೀತಿಯನ್ನು ಪರಸ್ಪರ ಹಂಚಬೇಕು. ಆ ನಿಟ್ಟಿನಲ್ಲಿ ಮದರ್ ತೆರೇಸಾ ಸೇವಾ ಕೇಂದ್ರದ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅಲ್ಲದೆಸಂಘಕ್ಕೆ ಸಂಪೂರ್ಣ ಸಹಕಾರವನ್ನು ಸದಾ ನೀಡುವುದಾಗಿ ಹೇಳಿದರು. ಸಂತ ಅನ್ನಮ್ಮ ಪಿಯು ಕಾಲೇಜಿನ ಪ್ರಾಂಶುಪಾಲ ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು ಮಾತನಾಡಿ, ಮದರ್ ತೆರೇಸಾ ಸೇವಾ ಕೇಂದ್ರದ ಸದಸ್ಯರು ಹಿರಿಯರಿಗೆ ಎಲ್ಲಾ ರೀತಿಯಲ್ಲಿಯೂ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಸೇವೆಯಲ್ಲಿ ತೊಡಗಿಕೊಳ್ಳುವುದರಿಂದ ಆತ್ಮ ತೃಪ್ತಿ ದೊರಕುತ್ತದೆ. ಮಾತ್ರವಲ್ಲದೆ ದೇವರ ಆಶೀರ್ವಾದವು ಲಭಿಸುತ್ತದೆ ಎಂದು ಹೇಳಿದರು. ಹಿರಿಯರು ಮಕ್ಕಳಿಗಾಗಿ ಪ್ರಾರ್ಥಿಸಿ ಎಂದು ಕರೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮದರ್ ತೆರೇಸಾ ಸೇವಾ ಕೇಂದ್ರದ ಅಧ್ಯಕ್ಷ ಪೆರಿಗ್ರಿನ್ ಮಚ್ಚಾಡೋ, ಎರಡು ವರ್ಷಗಳ ಹಿಂದೆ ಆರಂಭವಾದ ಈ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸೇವಾ ಮನೋಭಾವನೆಯ ಜೊತೆಗೆ ಪ್ರಾರ್ಥನೆಯು ಅತ್ಯಂತ ಮುಖ್ಯವಾಗಿದೆ. ಮನುಷ್ಯನಿಗೆ ವ್ಯಕ್ತಿತ್ವ ಅತೀ ಮುಖ್ಯವಾಗಿದ್ದು ಒಟ್ಟಾಗಿ ಸಮಾಜ ಸೇವೆಗೆ ಕೈ ಜೋಡಿಸೋಣ ಎಂದರು. ಕಾರ್ಯಕ್ರಮದಲ್ಲಿ 75 ವರ್ಷ ಮೇಲ್ಪಟ್ಟ 50ಕ್ಕೂ ಅಧಿಕ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಧರ್ಮಗುರುಗಳಾದ ಫಾ. ಜೇಮ್ಸ್ ಡೊಮಿನಿಕ್, ಫಾ. ಮದಲೈ ಮುತ್ತು ಹಾಗೂ ಉಪನ್ಯಾಸಕ, ಪತ್ರಕರ್ತರಾದ ಬಿ.ಎನ್.ಶಾಂತಿಭೂಷಣ್ ಅವರನ್ನು ಸನ್ಮಾನಿಸಲಾಯಿತು. ಒಟ್ಟು ಆರು ಜನರಿಗೆ ಆರೋಗ್ಯ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಯಿತು. ವಿನಿಷಾ ಡಿಸೋಜಾ ಅವರಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಂಘದ ವತಿಯಿಂದ ಸ್ಕಾಲರ್ ಶಿಪ್ ನೀಡಲಾಯಿತು. ಈ ಸಂದರ್ಭ ಹಿರಿಯ ನಾಗರಿಕರಿಗೆ ಮನೋರಂಜನಾ ಕ್ರೀಡೆಗಳನ್ನು ನಡೆಸಿ ಬಹುಮಾನವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಟ್ರಸ್ಟಿಗಳಾದ ಲವೀನಾ, ಚೋಪಿ ಜೋಸೆಫ್, ಜೋಕಿಮ್ ರಾಡ್ರಿಗಸ್, ಮಾರ್ಟಿನ್ ಬರ್ನಾಡ್, ಮರ್ವಿನ್ ಲೋಬೋ, ಜಾನಿ ಮೆನೇಜೆಸ್ ಹಾಗೂ ಜೇಮ್ಸ್ ಮೆನೇಜೆಸ್ ಹಾಜರಿದ್ದರು. ಫ್ಲೋರ ಡಿಸೋಜಾ ಮತ್ತು ಪ್ರೆಸಿಲ್ಲ ಪ್ರಾರ್ಥಿಸಿದರು, ಚಾರ್ಲ್ಸ್ ಡಿಸೋಜಾ ಸ್ವಾಗತಿಸಿದರು, ಪಾಯಿಲೇಟ್ ಡಿಸೋಜ ನಿರೂಪಿಸಿದರು, ಬೆನೆಡಿಕ್ಟ್ ಸಾಲ್ಡಾನ್ಹಾ ವಂದಿಸಿದರು.








