
ಮಡಿಕೇರಿ NEWS DESK ಸೆ.7 : ಕೊಡವಾಮೆರ ಕೊಂಡಾಟ ಸಂಘಟನೆಯ ಬೇಡಿಕೆಯಂತೆ ಕೊಡಗು ಜಿಲ್ಲೆಗೆ ಪ್ರತ್ಯೇಕ ಅರಣ್ಯ ವಲಯ ಘೋಷಣೆ ಕುರಿತು ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಅನೌಪಚಾರಿಕವಾಗಿ ಮಂಡಿಸಲಾಗಿದೆ. ಮುಂದಿನವಾರ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಯಲಿದೆ. ಅಲ್ಲಿ ಮತ್ತೊಮ್ಮೆ ವಿಚಾರವನ್ನು ವಿವರಿಸಿ, ಮುಂದಿನ ಒಂದು ವರ್ಷದ ಅವಧಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಹೇಳಿದರು. ಈ ಕುರಿತು ಮನವಿ ಮಾಡಿದ್ದ ಕೊಡವಾಮೆರ ಕೊಂಡಾಟ ಸಂಘಟನೆಯ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸಿ ಹೆಚ್ಚಿನ ಮಾಹಿತಿ ಪಡೆದ ಅವರು, ಅರಣ್ಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಇದರ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದರು. ಮುಂದಿನವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮತ್ತೆ ವಿಚಾರ ಮಂಡಿಸಲಾಗುವುದು. ಈ ಯೋಜನೆಯಿಂದ ಕೊಡಗಿನ ಅರಣ್ಯ ಗೊಂದಲ ನಿವಾರಣೆ, ಮಾನವ- ವನ್ಯಪ್ರಾಣಿ ಸಂಘರ್ಷವನ್ನೂ ಕೊನೆಗಾಣಿಸಲು ಸಾಧ್ಯವಾಗಬಹುದು ಎಂದು ತಿಳಿಸಿದರು. ಸಭೆಯಲ್ಲಿ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಮಾತನಾಡಿ, ಕೊಡಗಿನ ಅರಣ್ಯ ವ್ಯಾಪ್ತಿಯು ರಾಜ್ಯದ ಇತರ ಪ್ರದೇಶಗಳಿಗಿಂತ ಭಿನ್ನವಾಗಿದೆ. ಪ್ರತ್ಯೇಕ ಅರಣ್ಯ ವಲಯದೊಂದಿಗೆ ವಿಶೇಷ ಯೋಜನೆಯನ್ನು ರೂಪಿಸಿದರೆ, ಮೂಲನಿವಾಸಿಗಳ ಬದುಕಿಗೆ ಸಹಕಾರಿಯಾಗಲಿದೆ. ಹಾಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಯೋಜನೆಯ ತುರ್ತು ಅನುಷ್ಟಾನಕ್ಕೆ ಮುಂದಾಗಬೇಕು ಎಂದರು. ಸಭೆಯಲ್ಲಿ ಸಂಘಟನೆಯ ಕಾರ್ಯದರ್ಶಿ ಕುಂಞಿರ ಗಿರೀಶ್ ಭೀಮಯ್ಯ, ಸಹಕಾರ್ಯದರ್ಶಿ ಮಲ್ಲಂಡ ದರ್ಶನ್ ಮುತ್ತಪ್ಪ, ಸದಸ್ಯರಾದ ಕರಿನೆರವಂಡ ಡ್ಯಾನಿಕುಶಾಲಪ್ಪ, ಮಂಡೆಪಂಡ ನಿಕಿಲ್ ಅವರುಗಳು ಉಪಸ್ಥಿತರಿದ್ದು ಚರ್ಚಿಸಿದರು.








