
ಮಡಿಕೇರಿ, ಡಿ.9 NEWS DESK : ವಿದ್ಯಾರ್ಥಿಗಳು ಶಿಸ್ತಿನೊಂದಿಗೆ ಮುನ್ನಡೆದರೆ ಸಾಧನೆ ಸಾಧ್ಯವಾಗುತ್ತದೆ ಎಂದು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಸಲಹೆ ನೀಡಿದರು. ಮಂಗಳೂರು ಮತ್ತು ಕೊಡಗು ವಿಶ್ವವಿದ್ಯಾಲಯ ಅಧೀನದ ಫೀ.ಮಾ. ಕೆ.ಎಂ.ಕಾರ್ಯಪ್ಪ ಕಾಲೇಜಿನ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘವನ್ನು ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ, ಅವರು ಮಾತನಾಡಿದರು. ಭವ್ಯ ಇತಿಹಾಸವನ್ನು ಫೀ.ಮಾ. ಕಾರ್ಯಪ್ಪ ಕಾಲೇಜು ಹೊಂದಿದ್ದು, ವಿದ್ಯಾಸಂಸ್ಥೆಗೆ ಅಗೌರವ ತರುವ ಯಾವುದೇ ಕೆಲಸ ವಿದ್ಯಾರ್ಥಿಗಳು ಮಾಡಬಾರದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ವಿದ್ಯಾರ್ಥಿ ಸಂಘದ ನಾಯಕರು ತಮ್ಮ ಜವಾಬ್ದಾರಿ ಅರಿತು ಮುನ್ನಡೆಯಬೇಕು. ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವಪಡೆಯ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು. ಸಂಘದ ಸಲಹೆಗಾರ ಬಿ.ಹೆಚ್.ತಳವಾರ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಪ್ರೊ.ತಿಪ್ಪೇಸ್ವಾಮಿ, ಮಹಿಳಾ ಕ್ಷೇಮಾಭಿವೃದ್ಧಿ ಘಟಕ ಸಂಚಾಲಕಿ ಡಾ.ನಯನ ಕಾಶ್ಯಪ್, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಂದನ್ ನಂದರುಬೆಟ್ಟು, ಪ್ರಮುಖರಾದ ಡಾ.ಮಹದೇವಯ್ಯ, ಡಾ.ಶೃಂಗಾರ್, ರಾಜೀವ್, ಹೆಚ್.ರಮೇಶ್ ಉಪಸ್ಥಿತರಿದ್ದರು.









