
ಮಡಿಕೇರಿ NEWS DESK ಡಿ.11 : ಭಾರತ ದೇಶ ಕಂಡ ಸರ್ವ ಶ್ರೇಷ್ಠ ಸೇನಾನಿಗಳಾದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದು ರಾಷ್ಟ್ರದ್ರೋಹಿ ಕೃತ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಡಿ.12ರ ಕೊಡಗು ಬಂದ್ ಗೆ ನೈತಿಕ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಶಾಂತವಾದ ಕೊಡವಲ್ಯಾಂಡ್ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಭಂಗಗೊಳಿಸುವ ಈ ಪ್ರಯತ್ನವು ದೇಶದ್ರೋಹ, ಪ್ರಭುತ್ವ ದ್ರೋಹ, ವಿದ್ರೋಹ ಹಾಗೂ ಬುಡಮೇಲು ಕೃತ್ಯದಂತಹ ದ್ರೋಹ ಚಿಂತನೆಯನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
ಪಿತೂರಿಯ ಆಳ ಅಗಲವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೂಲಂಕುಷವಾಗಿ ತನಿಖೆ ನಡೆಸಬೇಕು. ಕಿಡಿಗೇಡಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಬಂಧಿಸಬೇಕು ಮತ್ತು ಮಂಪರು ಪರೀಕ್ಷೆ (ಬ್ರೈನ್ ಮ್ಯಾಪಿಂಗ್) ನಡೆಸಬೇಕು. ತಪ್ಪಿತಸ್ಥನೆಂದು ಕಂಡುಬಂದರೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಡಿ.12ರ ಬಂದ್ಗೆ ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದಾರೆ.
::: ದೇವಟ್ ಪರಂಬುವಿನಲ್ಲಿ ಸ್ಮರಣೆ :::
ಆದಿಮಸಂಜಾತ ಕೊಡವರ ಜೀವನ ಚಕ್ರದಲ್ಲಿ, ಪೂರ್ವಜರು, ಪಿತಾಮರು ಮತ್ತು ಜಲದೇವಿ ಕಾವೇರಿ ನದಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ 1785 ರ ಡಿಸೆಂಬರ್ 12 ರಂದು ಘಟಿಸಿದ ಕೊಡವ ನರಮೇಧದ ದುರಂತ ಸಮಯದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ನಮ್ಮ ಪೂರ್ವಜರು ಮತ್ತು ಕುಲಪಿತಾಮರನ್ನು ಗೌರವಿಸಲು ನಾವು ಪುಷ್ಪ ನಮನಗಳನ್ನು ಅರ್ಪಿಸುವುದರೊಂದಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತೇವೆ. ಈ ಸಂಸ್ಮರಣೆಯು ಡಿ.12 ರಂದು ಬೆಳಿಗ್ಗೆ 8 ಗಂಟೆಗೆ ದೇವಟ್ ಪರಂಬ್ನಲ್ಲಿ ನಡೆಯುತ್ತದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.









