
ಸುಂಟಿಕೊಪ್ಪ ಡಿ.23 NEWS DESK : ವಿದ್ಯಾರ್ಥಿಗಳಿಗೆ ಮುಂದಿನ ಗುರಿ, ಏಕಾಗ್ರತೆ ಸಾಧಿಸುವ ಛಲ, ವಿದ್ಯಾರ್ಜನೆಯಲ್ಲಿ ಪರಿಶ್ರಮ ಮುಖ್ಯವಾಗಿದೆ. ಪೋಷಕರು ಮಕ್ಕಳ ವಿದ್ಯಾರ್ಜನೆಗೆ ಒತ್ತು ನೀಡಬೇಕು ಎಂದು ದಾನಿಗಳೂ ಹಾಗೂ ಬೆಂಗಳೂರಿನ ಪುರವಂಕರ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹರಪಳ್ಳಿ ರವೀಂದ್ರ ಕರೆ ನೀಡಿದರು. ಸುಂಟಿಕೊಪ್ಪ ನಾಡು ಪ್ರೌಢಶಾಲೆ ಕೊಡಗರಹಳ್ಳಿ ಶಾಲೆಯ 59ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯವಿದೆ. ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳೂ ಮುಂದಿದ್ದಾರೆ. ಆದರೆ ಶಾಲಾ ಮಕ್ಕಳು ಚಲನಚಿತ್ರ ನಟ, ನಟಿಯರನ್ನು ವೈಭವಿಕರೀಸುವ ಮನೋಭಾವ ತ್ಯಜಿಸಬೇಕು. ಸಮಾಜ ಪರಿವರ್ತಕರಾದ ಸ್ವಾಮಿವಿ ವೇಕಾನಂದ, ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರಭೋಸ್, ಮಾಜಿ ರಾಷ್ಟ್ರಪತಿ ಅಬ್ಧುಲ್ ಕಲಾಂ ಅವರನ್ನು ಆದರ್ಶವಾಗಿ ತೆಗೆದುಕೊಂಡರೆ ಮುಂದಿನ ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲರು ಎಂದು ಅಭಿಮತ ವ್ಯಕ್ತಪಡಿಸಿದರು. ಅಭಿವೃದ್ಧಿ ಪಥದತ್ತ ಸಾಗಿದ ರಷ್ಯಾ, ಚೀನಾ, ಜಪಾನ್ ರಾಷ್ಟ್ರದ ಅಧಿಕಾರ ಚುಕ್ಕಾಣಿ ಹಿಡಿದ ನಾಯಕರುಗಳಿಗೆ ಇಂಗ್ಲೀಷ್ ಬರದಿದ್ದರೂ ಅವರು ದೇಶವನ್ನು ಅಭಿವೃದ್ಧಿ ಮುಂಚೂಣಿಗೆ ತಂದಿದ್ದನ್ನು ನೆನಪಿಸಿದ ರವೀಂದ್ರ, ಭಾಷೆಯಾಗಿ ಇಂಗ್ಲೀಷ್ನ್ನು ಕಲಿಯಿರಿ. ಆದರೆ ಕನ್ನಡಭಾಷೆ ಜ್ಞಾನ ಸಂಸ್ಕೃತಿಯನ್ನು ಕಲಿಸುತ್ತದೆ. ದೇಶವನ್ನು ಆಳಿದ ಶಾಸಕರು, ಸಚಿವರು ವೇದಿಕೆಯಲ್ಲಿ ನುಡಿದ ಶೇ.1 ರಷ್ಟು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿರುವುದು ವಿಷಾದನೀಯ ಎಂದು ಅವರು ಹೇಳಿದರು. ಕಾಫಿ ಬೆಳೆಗಾರರೂ, ಸಮಾಜ ಸೇವಕರಾದ ಟಿ.ಕೆ.ಸಾಯಿಕುಮಾರ್ ಮಾತನಾಡಿ, ಈ ಶಾಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು, ಶಿಕ್ಷಕರುಗಳ ಪರಿಶ್ರಮವನ್ನು ಮರೆಯುವಂತಿಲ್ಲ, ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬರೆದರೆ ತೇರ್ಗೆಡೆಯಾಗುವುದಿಲ್ಲ ಎಂಬುದು ತಪ್ಪು ಭಾವನೆ ಸರಿಯಲ್ಲ. ಸತತ ಪರಿಶ್ರಮ, ಶ್ರದ್ಧೆಯಿಂದ ಮಕ್ಕಳು ಜಿವನದಲ್ಲಿ ಸಾಧಿಸಬಹುದು 2025 ನೇ ಇಸವಿಯಲ್ಲಿ ಈ ಶಾಲೆಯ ವಿದ್ಯಾರ್ಥಿಗಳಿಗೆ 1 ಜತೆ ಸಮವಸ್ತ್ರವನ್ನು ತಾನು ಉದಾರವಾಗಿ ನೀಡುವುದಾಗಿ ಭರವಸೆ ನೀಡಿದರು. ಮಕ್ಕಳು ಮೊಬೈಲ್ನಿಂದ ದೂರವಿರಬೇಕು. ಓದು ಮುಖ್ಯವಾಗಿ ಪರಿಗಣಿಸಲು ಪೋಷಕರು ಮಕ್ಕಳ ಬಗ್ಗೆ ಸದಾ ನಿಗಾವಹಿಸಬೇಕು ಎಂದು ಹೇಳಿದರು. ಕೊಡಗರಹಳ್ಳಿ ನಾಡು ಪ್ರೌಢಶಾಲೆಯ ಎಜುಕೇಷನ್ ಸೊಸೈಟಿ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಮಾತನಾಡಿ, ಶಾಲಾ ಕಟ್ಟಡ ಅಭಿವೃದ್ಧಿಗೆ 58 ಲಕ್ಷ ಬೇಕಾಗಿದ್ದು, ಸರಕಾರದಿಂದ ಅನುದಾನ ಲಭಿಸುತ್ತಿಲ್ಲ. 25 ಕ್ಕಿಂತ ಕಡಿಮೆ ಸಂಖ್ಯೆ ಇರುವ ಅನುದಾನಿತ ಪ್ರೌಢಶಾಲೆಯನ್ನು ಮುಚ್ಚಿಸಲು ಸರಕಾರ ಆದೇಶ ನೀಡಿದೆ. ಸರಕಾರದಿಂದ ಅನುದಾನ ಒದಗಿಸಲು ಮುಂದಾಗಬೇಕು. 60 ವರ್ಷದಿಂದ ನಡೆಸಿಕೊಂಡ ಶಾಲೆ ಅಭಿವೃದ್ಧಿಗೆ ದಾನಿಗಳು ಸಹಕಾರ ಒದಗಿಸಬೇಕೆಂದರು. ಕೃಷಿಕ ಈ ಶಾಲೆಯ ಹಳೆಯ ವಿದ್ಯಾರ್ಥಿ ಅಜರಂಗಳ ಎಸ್.ರಾಮಣ್ಣ ಮಾತನಾಡಿ ಶಾಲಾ ಮಕ್ಕಳಿಗೆ ಕ್ರೀಡಾಕೂಟಕ್ಕೆ ಬೇಕಾದ ಕ್ರಿಡಾ ಸಾಮಾಗ್ರಿಗಳನ್ನು ಒದಗಿಸುವ ಬಗ್ಗೆ ಭರವಸೆ ನೀಡಿದರು. ಕೊಡಗರಹಳ್ಳಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎಸ್.ಬಿ.ಶಂಕರ್, ಜಿ.ಪಂ ಸೋಮವಾರಪೇಟೆಯ ಅಭಿಯಂತರ ಕೊಲಿಂಗನ ಹೆಚ್.ಕೀರ್ತನ್, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಡುವಂಡ ಎಸ್.ಚಂಗಪ್ಪ, ಬಿಬಿಎಂಪಿ ಹಿರಿಯ ಆರೋಗ್ಯ ಪರಿವೀಕ್ಷಕರಾದ ಕೆ.ಬಿ.ಸಂಧ್ಯಾ, ಸಂಸ್ಥೆಯ ಉಪಾಧ್ಯಕ್ಷರಾದ ಕುಟ್ಟಪ್ಪ, ಸದಸ್ಯರುಗಳಾದ ಲಕ್ಷ್ಮೀ ನಾರಾಯಣ, ನಿರ್ದೇಶಕ ಸುರೇಶ್ ಚಂಗಪ್ಪ, ತಾ.ಪಂ.ಮಾಜಿ ಅಧ್ಯಕ್ಷೆ ಗೀತಾ ಬಸಪ್ಪ, ಪೆಲಿಕ್ಸ್ ಪಿಂಟೋ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ಶಾಲಾ ಮಕ್ಕಳು ಗೌರವ ವಂದನೆಯನ್ನು ಅತಿಥಿಗಳಿಗೆ ನೀಡಿದರು. ಅರ್ಚನಾ ತಂಡ ಪ್ರಾರ್ಥಿಸಿದರು, ಶಿಕ್ಷಕ ಗುರ್ಕಿಬ ನಿರೂಪಿಸಿದರು, ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ.ಎಸ್.ಇಂದಿರಾ ವರದಿ ವಾಚಿಸಿ, ಸ್ವಾಗತಿಸಿದರು.









