
ಮಡಿಕೇರಿ ಮಾ.4 NEWS DESK : ಗಣಕ ವಿಜ್ಞಾನದ ಹೊಸ ಆವಿಷ್ಕಾರವಾಗಿರುವ ಕೃತಕ ಬುದ್ಧಿಮತ್ತೆ (ಎ. ಐ.) ಇದೀಗ ವೇಗವಾಗಿ ಬೆಳೆಯುತ್ತಿದೆ. ಇದರಿಂದ ಕೃತಕತೆಯ ಹೊಸ ಪ್ರಪಂಚವೇ ಸೃಷ್ಟಿಯಾಗತೊಡಗಿದೆ. ಈ ಕೃತಕ ಬುದ್ಧಿಮತ್ತೆಯ ಲೋಕದಲ್ಲಿ ಪತ್ರಿಕೋದ್ಯಮವನ್ನು ಮುಂದುವರಿಸುವುದು ಬಹುದೊಡ್ಡ ಸವಾಲಿನ ಕೆಲಸ ಎಂದು ಹಿರಿಯ ಪತ್ರಕರ್ತ ಹಾಗೂ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ ಅಭಿಪ್ರಾಯಪಟ್ಟಿದ್ದಾರೆ. ಮಡಿಕೇರಿಯ ಸತ್ಕಾರ ಸಭಾಂಗಣದಲ್ಲಿ ನಡೆದ ಪತ್ರಕರ್ತ ಯಜಾಸ್ ದುದ್ದಿಯಂಡ ಸಂಪಾದಕತ್ವದಲ್ಲಿ ನೂತನವಾಗಿ ಆರಂಭಗೊಂಡಿರುವ ಕೂರ್ಗ್ ಬಝ್ ಎಂಬ ಸುದ್ದಿಜಾಲದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಎ.ಐ.ಮೂಲಕ ಸುಳ್ಳನ್ನೇ ಸತ್ಯವಾಗಿಸುವ ವಾತಾವರಣ ಸೃಷ್ಟಿಯಾಗಿದೆ. ಮನುಷ್ಯನ ಬುದ್ಧಿಮತ್ತೆಯ ಎಲ್ಲಾ ಸಾಮರ್ಥ್ಯಗಳನ್ನು ಮರು ರಚಿಸಲು ಎ.ಐ. ಗೆ ಸಾಧ್ಯವಾಗುತ್ತಿದೆ. ಇದು ಪತ್ರಿಕೋದ್ಯಮಕ್ಕೆ ಬಹುದೊಡ್ಡ ಸವಾಲೊಡ್ಡುತ್ತದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಿ ತನ್ನ ಮೂಲ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಾಗಿರುವುದು ಪತ್ರಿಕೋದ್ಯಮದ ಇಂದಿನ ಅನಿವಾರ್ಯತೆಯಾಗಿದೆ ಎಂದು ಹೇಳಿದರು. ‘ಕಿತ್ತಳೆನಾಡು’ ಕನ್ನಡ ವಾರಪತ್ರಿಕೆಯ ಪ್ರಧಾನ ಸಂಪಾದಕ ಕುವೇಂಡ ವೈ.ಹಂಝತುಲ್ಲಾ ಮಾತನಾಡಿ, ಇಂದಿನ ವಿದ್ಯಾವಂತರೆಲ್ಲಾರನ್ನು ಸುಶಿಕ್ಷಿತರೆಂದು ಹೇಳಲು ಸಾಧ್ಯವಿಲ್ಲ. ಮಾನವೀಯತೆ ಮತ್ತು ಸಂಸ್ಕಾರವಿಲ್ಲದ ಯಾವುದೇ ಶಿಕ್ಷಣ ಅರ್ಥಹೀನವಾಗಿರುತ್ತದೆ. ಇದು ಪತ್ರಿಕೋದ್ಯಮವನ್ನೂ ಹೊರತುಪಡಿಸಿಲ್ಲ ಎಂದು ಅಭಿಪ್ರಾಯಪಟ್ಟರಲ್ಲದೆ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೊಡಗಿನ ಪ್ರತಿಭಾವಂತ ಯುವಕರಾದ ಏಜಾಸ್ ದುದ್ದಿಯಂಡ ನೂತನವಾಗಿ ಆರಂಭಿಸಿರುವ ಸುದ್ದಿಜಾಲ ಜಿಲ್ಲೆಯ ಜನರ ಸಂಗಾತಿಯಾಗಲಿ. ನೂತನ ಈ ಸುದ್ದಿಜಾಲವು ತಾಜಾ ಸುದ್ದಿಯ ಜೊತೆಗೆ ಕೃಷಿ ಮತ್ತು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಮಾತನಾಡಿ, ಅತಿ ವೇಗವಾಗಿ ಬೆಳೆಯುತ್ತಾ ಜನಪ್ರಿಯತೆ ಗಳಿಸುತ್ತಿರುವ ಅಂತರ್ಜಾಲ ಸುದ್ದಿತಾಣಗಳು ವಸ್ತುನಿಷ್ಠ ವರದಿಗೆ ಪ್ರಥಮ ಆದ್ಯತೆ ನೀಡಬೇಕು. ದೃಶ್ಯ ಮತ್ತು ಮುದ್ರಣ ಮಾಧ್ಯಮ ಸೇರಿದಂತೆ ಆನ್ಲೈನ್ ಸುದ್ದಿ ಜಾಲಗಳಲ್ಲಿ ಬರುವ ವರದಿಗಳನ್ನು ನಂಬುವುದು ಕೊಡಗಿನ ಜನರ ವಾಡಿಕೆಯಾಗಿದೆ. ಆದ್ದರಿಂದ ಯಾವುದೇ ಸುದ್ದಿ ಜಾಲಗಳು ಕೊಡಗಿನ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕು. ಪತ್ರಕರ್ತರು ಯಾವುದೇ ಸಿದ್ಧಾಂತಗಳಿಗೆ ಜೋತುಬೀಳದೆ ನಿಷ್ಪಕ್ಷಪಾತವಾಗಿ ಸತ್ಯದ ವರದಿ ನೀಡಬೇಕು. ಜೊತೆಗೆ ತಮ್ಮ ವರದಿಗಾರಿಕೆಯಲ್ಲಿ ಮಾನವೀಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನೂತನ ಸುದ್ದಿ ಜಾಲವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪತ್ರಿಕೋದ್ಯಮ ಉಪನ್ಯಾಸಕರಾಗಿದ್ದ ಪೊನ್ನಂಪೇಟೆಯ ಐನಂಡ ಸೋಮಣ್ಣ, ಆಧುನಿಕತೆಯಲ್ಲಿ ಪತ್ರಿಕೋದ್ಯಮದ ರೂಪ ಬದಲಾದಂತೆ ಇಂದು ಓದುಗರ ಮನಸ್ಥಿತಿಯು ಬದಲಾಗಿದೆ. ಪುಟಗಟ್ಟಲೆ ಓದಬೇಕಾದ ಉದ್ದನೆಯ ವರದಿಗಳನ್ನು ಇಂದು ಓದುಗರು ಇಷ್ಟ ಪಡುತ್ತಿಲ್ಲ. ಬದಲಿಗೆ ಚಿಕ್ಕದಾಗಿರುವ ತುಂಡು ತುಂಡು ವರದಿಗಳನ್ನಷ್ಟೇ ಓದುಗರು ನಿರೀಕ್ಷಿಸುತ್ತಾರೆ. ಇದನ್ನು ಇಂದಿನ ಪತ್ರಕರ್ತರು ತಿಳಿದುಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರಲ್ಲದೆ, ಮುದ್ರಣ ಮಾಧ್ಯಮಗಳ ಪ್ರಸರಣ ವ್ಯಾಪ್ತಿಯನ್ನು ಮೀರಿ ಸ್ಥಳೀಯ ಸುದ್ದಿಗಳನ್ನು ಜಾಗತಿಕವಾಗಿ ತಲುಪಿಸುವಲ್ಲಿ ಇಂದಿನ ಸುದ್ದಿಜಾಲಗಳ ಪಾತ್ರ ಅಪಾರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಗಿಟ್ಟಿಸಿಕೊಳ್ಳಲು ವಿದ್ಯೆ, ವಿನಯತೆ, ವಿಧೇಯತೆ, ಶ್ರದ್ಧೆ, ತಂತ್ರಜ್ಞಾನದ ಬಳಕೆ ಅಗತ್ಯ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮಾಧ್ಯಮ ಲೋಕದಲ್ಲಿ ಯಶಸ್ಸು ಕಾಣಬೇಕಾದರೆ ಜ್ಞಾನ ಸಂಪಾದನೆಯ ಜತೆಗೆ ಪದಸಂಪದ, ಬರವಣಿಗೆ, ಬಹುಭಾಷಾ ಕೌಶಲ್ಯ ಬಹು ಮುಖ್ಯ. ತಂತ್ರಜ್ಞಾನ ಬಳಕೆಯಿಂದ ಕನ್ನಡ ಪತ್ರಿಕೋದ್ಯಮ ಶರವೇಗದಲ್ಲಿ ಬೆಳೆದಿದ್ದು, ಇಂದಿನ ಸುದ್ದಿಜಾಲಗಳು ಕ್ಷಣಾರ್ಧದಲ್ಲಿ ಸುದ್ದಿಗಳನ್ನು ಜಗತ್ತಿಗೆ ಮುಟ್ಟಿಸಲಾಗುತ್ತಿದೆ. ಆದರೆ ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನದ ವೇಗ ಹೆಚ್ಚಿದೆ ಹೊರತು ಮೂಲ ಸಂವಹನ ಬದಲಾಗಿಲ್ಲ ಎಂದರು. ಸಮಾರಂಭದಲ್ಲಿ ಮಡಿಕೇರಿಯ ಶ್ರೀಕ್ಷೇತ್ರ ರಾಜರಾಜೇಶ್ವರಿ ದೇವಾಲಯ ಧರ್ಮದರ್ಶಿಗಳಾದ ಹೆಚ್.ಎನ್ .ಗೋವಿಂದಸ್ವಾಮಿ, ಉದ್ಯಮಿ ರೂಪಕ್ ರೈ, ಕೊಡವ ಮುಸ್ಲಿಂ ಅಸೋಸಿಯೇಷನ್ ಕೋಶಾಧಿಕಾರಿ ಹೆಚ್. ಎ. ಹಂಸ, ವಿಸ್ತಾರ ಟಿವಿಯ ನಿರೂಪಕಿ ಅಪೇಕ್ಷಾ, ಸುವರ್ಣ ನ್ಯೂಸ್ ನ ನಿರೂಪಕಿ ಶುಭಶ್ರೀ, ಒನ್ ಇಂಡಿಯಾ ಸುದ್ದಿಜಾಲದ ಹಿರಿಯ ಪತ್ರಕರ್ತ ಅಭಿಷೇಕ್ ಮೊದಲಾದವರು ಮಾತನಾಡಿದರು. ಸುದ್ದಿಜಾಲದ ಪ್ರಧಾನ ಸಂಪಾದಕರಾದ ಏಜಾಸ್ ದುದ್ದಿಯಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಂಎ ಮಾಜಿ ಅಧ್ಯಕ್ಷರಾದ ದುದ್ದಿಯಂಡ ಎಸ್.ಆಲಿ, ಬೇಟೋಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಎಂ.ಎ.ಮೊಯ್ದು, ಕದನೂರು ಗ್ರಾ. ಪಂ. ಮಾಜಿ ಸದಸ್ಯರಾದ ಪಿ.ಎಚ್. ಸಂಸುದ್ದೀನ್ ಮೊದಲಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹರ್ಷಿತ ಸ್ವಾಗತಿಸಿದರು. ಗಾಯತ್ರಿ ಕಾರ್ಯಕ್ರಮ ನಿರ್ವಹಿಸಿದರು.









