
ಸಿದ್ದಾಪುರ ಮಾ.5 NEWS DESK : ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD) -ಬೆಂಗಳೂರು ಹಾಗೂ ಓ.ಡಿ.ಪಿ. ಸಂಸ್ಥೆ ಮೈಸೂರು ಸಹಭಾಗಿತ್ವದಲ್ಲಿ ಬಾಳೆಗುಂಡಿ ಹಾಡಿಯಲ್ಲಿ ಬುಡಕಟ್ಟು ಸಮುದಾಯದ ಅಭಿವೃದ್ಧಿ ಕಾರ್ಯಕ್ರಮದಡಿ ಸೋಲಾರ್ ದೀಪಗಳು, ತೋಟಗಾರಿಕೆ ಗಿಡಗಳು ಹಾಗೂ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮ ನಡೆಯಿತು. ಬಾಳೆಗುಂಡಿ, ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯ 50 ಜನ ಫಲಾನುಭವಿಗಳಿಗೆ,
ಸೋಲಾರ್ ಮನೆದೀಪಾ, ಹಣ್ಣಿನ ಗಿಡ, ಅಡಕೆಗಿಡ, ತೆಂಗಿನ ಸಸಿಗಳು, ಮೆಣಸು ಬಳ್ಳಿ, ಹಾಗೂ ತರಕಾರಿ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು. ಸಾವಯವ ಕೃಷಿ, ಮಣ್ಣು ಮತ್ತು ನೀರು ಪರೀಕ್ಷೆ, ಜಾಲಬಂಧ, ಸರ್ಕಾರಿ ಸೌಲಭ್ಯಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಓ.ಡಿಪಿ ಸಂಸ್ಥೆಯ ನಿರ್ದೇಶಕರಾದ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಮಾತನಾಡಿ ವಾಲ್ನೂರು, ಬಾಳೆಗುಂಡಿ, ತ್ಯಾಗತ್ತೂರು ಹಾಡಿಗಳಲ್ಲಿ ನಬಾರ್ಡ್ ಬೆಂಗಳೂರು ಹಾಗೂ ಓ.ಡಿ.ಪಿ ಸಂಸ್ಥೆಯ ಸಹಕಾರದಿಂದ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲೂ ಜನರ ಸಹಕಾರ ಮುಖ್ಯವಾಗಿದೆ. ಇಲ್ಲಿಯ ಜನರನ್ನು ಒಗ್ಗೂಡಿಸಿ, ಮಹಿಳೆಯರಿಗೆ 3 ಮಹಿಳಾ ಸ್ವ-ಸಹಾಯ ಸಂಘಗಳನ್ನು ರಚಿಸಿ, ವಿವಿಧ ತರಬೇತಿಗಳ ಮೂಲಕ ಅರಿವನ್ನು ಮೂಡಿಸಿದೆ. ಗ್ರಾಮಕ್ಕೆ ಭೇಟಿ ನೀಡಿ ಅವರ ಕಷ್ಟಸುಖಗಳಿಗೆ ಓ.ಡಿ.ಪಿ. ಸಂಸ್ಥೆಯು ಸ್ಪಂದಿಸಿದೆ. ಇಲ್ಲಿಯ ಜನರ ಜೀವನೋಪಾಯ ಅಭಿವೃದ್ಧಿಗಾಗಿ ಈಗಾಗಲೇ 20 ಕುಟುಂಬಗಳಿಗೆ ಆದಾಯೋತ್ಪನ್ನ ಚಟುವಟಿಕೆ ನಡೆಸಲು ಕೋಳಿ ಮರಿಗಳು, ಹಂದಿ ಮರಿಗಳನ್ನು ನೀಡಲಾಗಿದ್ದು, ಜೀವನಕ್ಕೆ ಆರ್ಥಿಕ ಸಹಾಯವಾಗುತ್ತಿದೆ. ಪಶು ಸಂಗೋಪನಾ ಇಲಾಖೆ ಮೂಲಕ ಹಂದಿ ಹಾಗೂ ಕೋಳಿಗಳಿಗೆ ಚುಚ್ಚು ಮದ್ದು ನೀಡಿ ಸಾಕಾಣಿಕೆ ಬಗ್ಗೆ ಶಿಬಿರಗಳನ್ನು ನಡೆಸಿದೆ. ನಬಾರ್ಡ್ ಹಾಗೂ ಓ.ಡಿ.ಪಿ ಸಂಸ್ಥೆಯು ಜನರ ಸಮಸ್ಯೆಗಳಿಗೆ ಸ್ವಂದಿಸಿ ಎಲ್ಲಾ ಕುಟುಂಬಗಳು ಅಭಿವೃದ್ಧಿ ಹೊಂದಿ ತಮ್ಮ ಜೀವನದಲ್ಲಿ ಉತ್ತಮ ಬದಲಾವಣೆ ಕಂಡುಕೊಳ್ಳಲಿ ಎಂದು ಹಾರೈಸಿದರು. ವಾಲ್ಲೂರು -ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅಭಿವೃದ್ಧಿಯೊಂದಿಗೆ ಮುಂದೆ ತರಲು ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ. ಇದರೊಂದಿಗೆ ಸರ್ಕಾರಗಳ ಯೋಜನೆಗಳನ್ನ ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಮತ್ತಷ್ಟು ಅಭಿವೃದ್ಧಿಯೊಂದಿಗೆ ಮುಂದೆ ಬರಲು ಸಾಧ್ಯವಾಗಲಿದೆ. ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮುಖ್ಯ ವಾಹಿನಿಗೆ ಬರಬೇಕೆಂದರು. ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ,ಲಿಂಗರಾಜು ಮಾತನಾಡಿ ಇಲಾಖೆಯಿಂದ ಸಿಗುವ ಸೌಲಭ್ಯಗಳು ಹಾಗೂ ಹಂದಿ, ಕೋಳಿ, ಹಸುಗಳ ಸಾಕಣಿಕೆ ಬಗ್ಗೆ ಅದಕ್ಕೆ ಬರುವ ಖಾಯಿಲೆಗಳು, ಅದಕ್ಕಾಗಿ ದೊರೆಯುವ ಚುಚ್ಚುಮದ್ದು ಹಾಗೂ ಔಷಧಿಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮೇದಪ್ಪ, ಕಾರ್ಯದರ್ಶಿ ರವಿ, ಓ.ಡಿ.ಪಿ.ಸಂಯೋಜಕ ಜಯರಾಮು, ಮೆಲ್ವಿನ್, ಹಾಡಿಯ ಅಧ್ಯಕ್ಷ ರಮೇಶ್, ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮೆನೇಜಸ್, ಪ್ರಮುಖರಾದ ಪ್ರಜ್ವಲ್, ಧನುಕುಮಾರ್, ಮಮತಾ ಅಂಗನವಾಡಿ ಶಿಕ್ಷಕಿ ರೇಷ್ಮೆ ಸೇರಿದಂತೆ ಫಲಾನುಭವಿಗಳು ಸ್ಥಳೀಯರು ಹಾಜರಿದ್ದರು.









