
ಸೋಮವಾರಪೇಟೆ ಏ.17 NEWS DESK : ಜಾತಿ ಜನಗಣತಿ ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತಿ ಒಡೆದು ಆಳುವ ಹುನ್ನಾರ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯ ಸರ್ಕಾರ ಜಾತಿ ಜನಗಣತಿ ನಡೆಸಿರುವುದೇ ಸೋಜಿಗದ ಸಂಗತಿಯಾಗಿದೆ ಏಕೆಂದರೆ ಈ ರಾಜ್ಯದಲ್ಲಿ ಯಾರು, ಯಾವಾಗ ಜಾತಿ ಜನಗಣತಿ ನಡೆಸಿದರು ಎಂಬುದು ಯಾರಿಗೂ ಗೊತ್ತಿಲ್ಲಾ, ನಮ್ಮ ಮನೆಗೂ ಯಾರು ಬಂದು ಜಾತಿ ಜನಗಣತಿ ನಡೆಸಿಲ್ಲ ಹೀಗಿರುವಾಗ ಮಾಹಿತಿ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ ಅವರು, ಜಾತ್ಯಾತೀತ ರಾಷ್ಟ್ರ ಎಂಬುವವರೇ ಜಾತಿಯ ವಿಷಬೀಜ ಬಿತ್ತಿ ಒಡೆದು ಆಳುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಇವರು ಜಾತಿ ಜನಗಣತಿ ನಡೆಸಿದ್ದರೆ ಅದು ಅಸಮರ್ಪಕ ವಾಗಿದ್ದು, ಅದನ್ನು ಕೈ ಬಿಟ್ಟು ಹೊಸದಾಗಿ ನಡೆಸಿ ಎಂದು ಮಹೇಶ್ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚಾಗಿರುವ ವೀರಶೈವ ಲಿಂಗಾಯತ ಜನಾಂಗವನ್ನು ಉಪ ಪಂಗಡಗಳಾಗಿ ವಿಂಗಡಿಸಿ ಸಂಖ್ಯೆಯಲ್ಲಿ ಕಡಿಮಯಾಗುವಂತೆ ಜಾಣ್ಮೆ ತೋರಿಸಿದ್ದಾರೆ, ಬಲಿಷ್ಠ ಜನಾಂಗ ಒಗ್ಗಟ್ಟಾಗಿರಬಾರದು, ಹೆಚ್ಚು ಜನಸಂಖ್ಯೆ ಕಾಣಬಾರದು ಆ ಮೂಲಕ ಜನಾಂಗಗಳನ್ನು ಮಾನಸಿಕವಾಗಿ ಕುಗ್ಗಿಸಲು ಹೊರಟಿರುವ ಇವರ ತಂತ್ರ ಪಲಿಸದು ಎಂದಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆಯವರು ನೀದ್ದಾರೆನ್ನಲಾದ ವರದಿಯಲ್ಲಿ ವೀರಶೈವ ಲಿಂಗಾಯತ ಒಳಪಂಗಡಗಳೆಲ್ಲಾ ಸೇರಿ 1,27,66,378 ಇದ್ದಿದ್ದು , ಕಾಂತರಾಜು ರವರು ನೀಡಿದ ವರದಿಯಲ್ಲಿ ಕೇವಲ 75,43,613ಆಗಿದೆ ಹಾಗಾದರೆ ಉಳಿದ ವೀರಶೈವ ಲಿಂಗಾಯತರು ಎಲ್ಲಿ ಹೋದರು ಎಂದು ಪ್ರಶ್ನಿಸಿದ್ದಾರೆ. ಸಮುದಾಯಕ್ಕೆ ವಿರುದ್ಧವಾದ ತೀರ್ಮಾನವನ್ನು ಸರ್ಕಾರ ತೆಗೆದುಕೊಳ್ಳುವುದಾದರೆ ಆಡಳಿತಪಕ್ಷ, ವಿರೋಧ ಪಕ್ಷಗಳಲ್ಲಿರುವ ವೀರಶೈವ ಲಿಂಗಾಯತ ಮಂತ್ರಿಗಳು,ಶಾಸಕರುಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬನ್ನಿ ಎಂದು ಆಗ್ರಹಿಸಿದ್ದಾರೆ. ಜಾತಿ ಜನಗಣತಿ ವರದಿಯ ಬಗ್ಗೆ ಬಹುತೇಕ ಎಲ್ಲಾ ಜನಾಂಗಗಳು ವಿರೋಧ ವ್ಯಕ್ತ ಪಡಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ತಮ್ಮ ನಿರ್ಧಾರ ಕೈ ಬಿಟ್ಟು ಹೊಸದಾಗಿ ಸಮೀಕ್ಷೆ ನಡೆಸಿ ಇಲ್ಲವಾದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.









