
ಮಡಿಕೇರಿ ಏ.18 NEWS DESK : ಐನ್ಮನೆಗಳು ಕೊಡವ ಕುಟುಂಬಗಳ ಕೇಂದ್ರಸ್ಥಾನವಾಗಿದ್ದು, ಇಡೀ ಕುಟುಂಬದ ಸಾಂಸ್ಕೃತಿಕ ಶಕ್ತಿಯಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟರು. ಕಾಕೋಟುಪರಂಬು ಮಂಡೇಟಿರ ಕುಟುಂಬಸ್ಥರ ಗುರು-ಕಾರೋಣರಿಗೆ ಮೀದಿ ಹಾಗೂ ಮಂದಣಮೂರ್ತಿಗಳ ಭಾರಣಿ ನಡೆದ ಸಂದರ್ಭದಲ್ಲಿ ಕುಟುಂಬಸ್ಥರಿಂದ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದ್ಮನೆ, ಬಲ್ಯಮನೆ, ಗುರುಮನೆ, ಐನ್ಮನೆಗಳೆಂದು ಕರೆಯಲ್ಪಡುವ ಇವುಗಳು ಕೊಡವ ಕುಟುಂಬಗಳಿಗೆ ದೇವನೆಲೆ ಇದ್ದಂತೆ. ಇವುಗಳಿಗೆ ದೇವಾಲಯಗಳಷ್ಟೇ ಪ್ರಾಮುಖ್ಯತೆ ಇದ್ದು, ಕುಟುಂಬ ಸದಸ್ಯರ ಆಧ್ಯಾತ್ಮಿಕ ಕೇಂದ್ರ ಇದಾಗಿದೆ. ಇಂತಹ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯುಳ್ಳ ಐನ್ಮನೆಗಳನ್ನು ಕಾಪಾಡಿಕೊಂಡು ಹೋಗಬೇಕಾದದ್ದು ಪ್ರತಿಯೊಂದು ಕುಟುಂಬಸ್ಥರ ಕರ್ತವ್ಯವಾಗಿರಬೇಕಾಗಿದೆ ಎಂದರು. ಐನ್ಮನೆಗಳ ಪ್ರಾಮುಖ್ಯತೆ ಹಾಗೂ ದೈವಿಕ ಹಿನ್ನಲೆಯನ್ನು ಅರ್ಥೈಸಿಕೊಂಡಿರುವ ಪ್ರಸಕ್ತ ಸರ್ಕಾರ ಸಹಾಯಧನ ನೀಡುವುದರ ಮೂಲಕ ಐನ್ಮನೆ, ಮುಂದ್ಮನೆಗಳ ರಕ್ಷಣೆಗೆ ಮುಂದಾಗಿರುವುದು ಅಭಿನಂದನಾರ್ಹ. ಐನ್ಮನೆಗಳಿಲ್ಲದ ಕೊಡವ ಕುಟುಂಬಗಳಲ್ಲಿ ಒಂದೊಂದು ಐನ್ಮನೆಗಳನ್ನು ನಿರ್ಮಿಸಿಕೊಳ್ಳಬೇಕಾದ ಅನಿವಾರ್ಯತೆ ಕಾಣುತ್ತಿದೆ. ಪ್ರತಿಯೊಂದು ಕುಟುಂಬದ ಸದಸ್ಯರು ಹೊರನಾಡು, ವಿದೇಶದಲ್ಲಿದ್ದರೂ ವರ್ಷಕೊಮ್ಮೆಯಾದರೂ ತಾಯ್ನಾಡಿಗೆ ಬರಲು ಐನ್ಮನೆಗಳಿದ್ದರೆ ಮನಸ್ಸು ಬರುವಂತಾಗುತ್ತದೆ. ಕುಟುಂಬದೊಳಗೆ ಇರುವ ಬಿನ್ನಾಭಿಪ್ರಾಯಗಳನ್ನು ಮರೆತು ಎಲ್ಲಾರೂ ಪ್ರೀತಿ-ವಿಶ್ವಾಸದಿಂದ, ಸಹಬಾಳ್ವೆ-ಸಾಮರಸ್ಯವನ್ನು ಕಾಣುವಂತಾಗಬೇಕೆಂದು ಕರೆ ನೀಡಿದರು. ಕುಟುಂಬದ ಪಟ್ಟೆದಾರ ಮಂಡೇಟಿರ ಚಂಗಪ್ಪ (ಬಬ್ಬು) ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಕುಟುಂಬದ ಹಿರಿಯರಾದ ಬಬ್ಬು ಚಂಗಪ್ಪ, ಹ್ಯಾರಿ ಪೆಮ್ಮಯ್ಯ, ಕಳೆದ 25 ವರ್ಷಗಳಿಂದ ಕೌಟುಂಬಿಕ ಹಾಕಿ ಉತ್ಸವದಲ್ಲಿ ಆಟಗಾರರಾಗಿ ಪಾಲ್ಗೊಳ್ಳುತ್ತಿರುವ ಮಂಡೇಟಿರ ವಿನ್ಯಾಸ್ ಅಪ್ಪಯ್ಯ, ವಿಶು ಸುಬ್ಬಯ್ಯ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪತ್ನಿ ಪ್ರಮೀಳ ನಾಚಯ್ಯರನ್ನು ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು. ಮಂಡೇಟಿರ ಸುನಿಲ್ ಪೊನ್ನಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಡೇಟಿರ ಮಾಪು ಮಂದಣ್ಣ, ರಘು ಮುತ್ತಣ್ಣ ಹಾಗೂ ಕುಟುಂಬದ ಆಡಳಿತ ಮಂಡಳಿ ಸದಸ್ಯರು ಸರ್ವರನ್ನೂ ಸ್ವಾಗತಿಸಿದರು. ಸಮಾರಂಭದಲ್ಲಿ ಕುಟುಂಬದ ಬಹುತೇಕ ಸದಸ್ಯರು ಹಾಗೂ ತವರುಮನೆ ಹೆಂಗಸರು-ಸಂಸಾರ, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಗುರು ಕಾರೋಣ ಸುಬ್ಬಯ್ಯ ಹಾಗೂ ಮಂದಣಮೂರ್ತಿಗಳ ಆಶೀರ್ವಾದ ಪಡೆದರು.









