
ಮಡಿಕೇರಿ NEWS DESK ಏ.22 : ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ-2025 ಅನ್ನು ವಿರೋಧಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಪಕ್ಷದ ಅಲ್ಪಸಂಖ್ಯಾತರ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಾಮೀಯ ಮಸೀದಿ ಮುಂಭಾಗದಿಂದ ಗಾಂಧಿ ಮೈದಾನದವರೆಗೆ ಘೋಷಣೆಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕೇಂದ್ರದ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಗಾಂಧಿ ಮೈದಾನದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು, ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಕಾನೂನಾತ್ಮಕ ಹೋರಾಟ ರೂಪಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ವಕ್ಫ್ಗೆ ಸಂಬಂಧಿಸಿದ ಸುಮಾರು 6.50 ಲಕ್ಷ ಏಕರೆ ಜಾಗವಿದ್ದರೆ, ದೇಶದಾದ್ಯಂತ ಸುಮಾರು 37 ಲಕ್ಷ ಏಕರೆ ಜಾಗವಿದೆ. ಇದರ ಒಟ್ಟು ಮೌಲ್ಯ 20 ಲಕ್ಷ ಕೋಟಿ ರೂ.ಗಳಾಗಿದೆ. ಈ ಆಸ್ತಿಯನ್ನು ವಕ್ಫ್ಗೆ ಇಲ್ಲದಂತೆ ಮಾಡಲು ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ಮುಂದಾಗಿದೆ. ಇದರಿಂದ ಶೇ.90ರಷ್ಟು ಜಾಗ ಸರಕಾರದ ಸುಪರ್ದಿಗೆ ಹೋಗಲಿದೆ ಎಂದು ಆರೋಪಿಸಿದರು. ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದಿಲ್ಲ ಎಂದು ಈಗಾಗಲೆ ನೆರೆಯ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ತಿಳಿಸಿವೆ. ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರ ಹಿತ ಕಾಪಾಡಲು ಕಾಯ್ದೆಯನ್ನು ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಇದರ ಸಾಧಕ ಬಾಧಕಗಳು ಮುಂದೆ ತಿಳಿಯಲಿದೆ ಎಂದು ಹೇಳಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ವಕ್ಫ್ ಅಧೀನದಲ್ಲಿ ರಾಜ್ಯ ವ್ಯಾಪಿ ಲಕ್ಷಾಂತರ ಏಕರೆ ಆಸ್ತಿ ಇದೆ. ಈ ಎಲ್ಲಾ ಆಸ್ತಿಗಳು ನೂರಾರು ವರ್ಷಗಳ ಹಿಂದೆ ದೇವರ ಹೆಸರಿನಲ್ಲಿ ದಾನವಾಗಿ ನೀಡಿದ ಜಾಗವಾಗಿದೆ. ಮಸೀದಿ, ಮದರಸಗಳು ಇಂತಹ ಜಾಗವನ್ನು ಹೊಂದಿಕೊಂಡಿವೆ. ಕೇಂದ್ರದ ಬಿಜೆಪಿ ಸರಕಾರ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಮಾಡುವ ಮುನ್ನ ಯಾವುದೇ ಚರ್ಚೆ ನಡೆಸದೆ ಸರ್ವಾಧಿಕಾರಿ ಧೋರಣೆಯಿಂದ ಜಾರಿಗೆ ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಹನೀಫ್ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಮುಸ್ಲಿಮರನ್ನು ಗುರಿಯಾಗಿಸಿ ವಕ್ಫ್ ತಿದ್ದುಪಡಿ ಎಂಬ ಕರಾಳ ಕಾನೂನನ್ನು ಜಾರಿಗೆ ತರುತ್ತಿದೆ, ಮಾತ್ರವಲ್ಲದೆ ವಕ್ಫ್ ಎಂಬ ಹೆಸರನ್ನೇ ಬದಲಾಯಿಸಿ ಉಮ್ಮೀದ್ ಎಂದು ನಾಮಕರಣ ಮಾಡಿದೆ. ಇಂತಹ ಬಿಜೆಪಿ ಸರಕಾರವನ್ನು ಅಲ್ಪ ಸಂಖ್ಯಾತ ಸಮುದಾಯ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡರುಗಳಾದ ವಿ.ಪಿ.ಶಶಿಧರ್, ನಾಪಂಡ ಮುತ್ತಪ್ಪ, ನೆರವಂಡ ಉಮೇಶ್ ಅವರುಗಳು ಮಾತನಾಡಿ ವಕ್ಫ್ ತಿದ್ದುಪಡಿ ಕಾಯಿದೆಗೆ ವಿರೋಧ ವ್ಯಕ್ತಪಡಿಸಿದರು. ಪ್ರತಿಭಟನೆಯ ನಂತರ ಪ್ರಮುಖರು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಮೂಡ ಅಧ್ಯಕ್ಷ ಬಿ.ವೈ.ರಾಜೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಪಕ್ಷದ ಪ್ರಮುಖರಾದ ಅಬ್ದುಲ್ ರಜಾಕ್, ಅಬ್ದುಲ್ ರೆಹಮಾನ್, ಟಿ.ಪಿ.ರಮೇಶ್, ಪಟ್ಟಡ ರಂಜಿ ಪೂಣಚ್ಚ, ರಾಶೀದ್, ಇಸ್ಮಾಯಿಲ್, ಹಂಸ ಮತ್ತಿತ್ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










