
ಮಡಿಕೇರಿ ಮೇ 20 NEWS DESK : ಭಾರತದ ಸಿಂಧೂರ ಜಮ್ಮು ಕಾಶ್ಮೀರದಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದಕರು ಧರ್ಮದ ಹೆಸರಿನಲ್ಲಿ ನಡೆಸಿದ ಪೈಶಾಚಿಕ ಕೃತ್ಯದಿಂದ ಅಮಾಯಕ ಮಹಿಳೆಯರ ಸಿಂಧೂರ ಅಳಿಸಿ ಹೋದುದಕ್ಕೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ನಡೆಸಿದ ‘ಆಪರೇಷನ್ ಸಿಂಧೂರ’ದ ಯಶಸ್ಸಿನ ಹಿನ್ನೆಲೆಯಲ್ಲಿ ಮೇ 23 ರಂದು ನಗರದಲ್ಲಿ ‘ಸಿಂಧೂರ ವಿಜಯೋತ್ಸವ’ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಸಿಂಧೂರ ವಿಜಯೋತ್ಸವ ಸಮಿತಿ ಸಂಚಾಲಕ ಕೆ.ಕೆ.ದಿನೇಶ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ಅಂದು ಬೆಳಗ್ಗೆ 10.30ರಿಂದ ನಗರದ ಎವಿ ಶಾಲೆಯ ಬಳಿಯ ಬನ್ನಿ ಮಂಟಪದಿಂದ ಪಕ್ಷ, ಧರ್ಮ ಭೇದವಿಲ್ಲದೆ ಆಯೋಜಿತ ಸಿಂಧೂರ ವಿಜಯೋತ್ಸವ ಗಾಂಧಿ ಮೈದಾನದವರೆಗೆ ನಡೆಯಲಿದೆ. ಇದರಲ್ಲಿ ಜಿಲ್ಲಾ ವ್ಯಾಪ್ತಿಯ ಸಹಸ್ರಾರು ದೇಶ ಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ. ಈ ಬೃಹತ್ ವಿಜಯೋತ್ಸವದ ಮೆರವಣಿಗೆಯಲ್ಲಿ 300 ಅಡಿ(100ಮೀ.)ಯ ಬೃಹತ್ ರಾಷ್ಟ್ರ ಧ್ವಜ ಕೊಂಡೊಯ್ಯಲಾಗುತ್ತದೆಂದು ತಿಳಿಸಿದರು. ಮುಂಚೂಣಿಯಲ್ಲಿ ನಿವೃತ್ತ ಸೇನಾಧಿಕಾರಿಗಳು :: ಸಿಂಧೂರ ವಿಜಯೋತ್ಸವದ ಮೆರವಣಿಗೆಯಲ್ಲಿ ಜಿಲ್ಲೆಯ ಮಾಜಿ ಸೈನ್ಯಾಧಿಕಾರಿಗಳು, ಸೈನಿಕರು ತಮ್ಮ ಸಮವಸ್ತ್ರಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ. ಇವರು ಮೆರವಣಿಗೆ ಮುಂಚೂಣಿಯಲ್ಲಿದ್ದರೆ, ಇವರ ನಂತರ ಮಹಿಳೆಯರು, ನಂತರ ಬೃಹತ್ ರಾಷ್ಟ್ರಧ್ವಜ, ಇದನ್ನು ಹಿಂಬಾಲಿಸಿಕೊಂಡು ಸಹಸ್ರಾರು ದೇಶಭಕ್ತ ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರಮುಖರು, ಸದಸ್ಯರುಗಳು ಪಾಲ್ಗೊಳ್ಳಲಿದ್ದಾರೆಂದು ಮಾಹಿತಿಯನ್ನಿತ್ತರು. ‘ತಿರಂಗ ಯಾತ್ರೆ’ :: ಆಪರೇಷನ್ ಸಿಂಧೂರ್ನಲ್ಲಿ ಪಾಲ್ಗೊಂಡು, ಪಾಕ್ಗೆ ದಿಟ್ಟ ಉತ್ತರವನ್ನು ನೀಡಿ, ಮತ್ತೆಂದಿಗೂ ಭಾರತದತ್ತ ತಿರುಗಿ ನೋಡದಂತೆ ತನ್ನ ಸಾಮರ್ಥ್ಯ ಪ್ರದರ್ಶಿಸಿದ ಭಾರತೀಯ ಸೈನ್ಯಕ್ಕೆ, ಹುತಾತ್ಮರಾದ ವೀರ ಯೋಧರಿಗೆ, ಭಯೋತ್ಪಾದಕರ ದಾಳಿಯಿಂದ ಕೊನೆಯುಸಿರೆಳೆದ ಅಮಾಯಕರಿಗೆ ಗೌರವವನ್ನು ಸಲ್ಲಿಸುವ ಹಾಗೂ ಸೈನ್ಯದ ಪರಾಕ್ರಮದಿಂದ ದೊರೆತ ಮಹತ್ತರ ಯಶಸ್ಸನ್ನು ಸ್ಮರಿಸುವ ‘ಸಿಂಧೂರ ವಿಜಯೋತ್ಸವ’ದಲ್ಲಿ ರಾಷ್ಟ್ರ ಭಕ್ತಿಯ ಘೋಷಣೆಗಳಿಗಷ್ಟೆ ಅವಕಾಶವಿದ್ದು, ಯಾವುದೇ ಪಕ್ಷದ ಧ್ವಜಗಳಿಗು ಅವಕಾಶವಿರುವುದಿಲ್ಲ. ಇದಕ್ಕೆ ಬದಲಾಗಿ ತಿರಂಗ ಧ್ವಜದೊಂದಿಗಿನ ಯಾತ್ರೆ ಇದಾಗಿರಲಿದೆಯೆಂದು ಕೆ.ಕೆ. ದಿನೇಶ್ ಕುಮಾರ್ ಸ್ಪಷ್ಟಪಡಿಸಿದರು. ಗಾಂಧಿ ಮೈದಾನದಲ್ಲಿ ಜನಜಾಗೃತಿ ಸಭೆ :: ಸಿಂಧೂರ ವಿಜಯೋತ್ಸವದ ಬಳಿಕ ಮಧ್ಯಾಹ್ನ 12 ಗಂಟೆಗೆ ಗಾಂಧಿ ಮೈದಾನದಲ್ಲಿ ಜನಜಾಗೃತಿ ಸಭೆ ಕರ್ನಲ್ ಚೋಂದಮ್ಮ(ನಿವೃತ್ತ) ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಇದರಲ್ಲಿ ನಿವೃತ್ತ ಸೇನಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಅಖಿಲ ಕರ್ನಾಟಕ ನಿವೃತ್ತ ಯೋಧರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ನಿವೃತ್ತ ವಾಯು ಸೇನಾ ಅಧಿಕಾರಿ ಕೊಟ್ಟುಕತ್ತೀರ ಸೋಮಣ್ಣ ಅವರು ಮಾತನಾಡಲಿದ್ದಾರೆ. ಇವರೊಂದಿಗೆ ಪ್ರಮುಖರೊಬ್ಬರು ದಿಕ್ಸೂಚಿ ಭಾಷಣ ಮಾಡಲಿದ್ದು, ಇನ್ನೂ ಅವರ ಹೆಸರು ಅಂತಿಮವಾಗಿಲ್ಲವೆಂದು ತಿಳಿಸಿದರು. ನಾವು ಗೆದ್ದಿದ್ದೇವೆ :: ಪೆಹಲ್ಗಾಮ್ನಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದಕ ದಾಳಿಯ ಬಳಿಕ ಇಡೀ ದೇಶದಲ್ಲಿ ಪಾಕ್ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳಬೇಕೆನ್ನುವ ಅನಿಸಿಕೆ ದೇಶ ವಾಸಿಗಳಲ್ಲಿ ವ್ಯಕ್ತವಾಗಿತ್ತು.ಅದರಂತೆ ಅತ್ಯಂತ ಯೋಜನಾಬದ್ಧವಾದ ದಾಳಿಯ ಮೂಲಕ ಪಾಕ್ಗೆ ತಕ್ಕ ಪಾಠವನ್ನು ಕಲಿಸಲಾಗಿದೆ. ಈ ನಡುವೆ ಯುದ್ಧ ವಿರಾಮ ಘೋಷಿತವಾಯಿತಾದರು, ಇದೆಂದಿಗೂ ಭಾರತದ ಹೋರಾಟಕ್ಕೆ ಹಿನ್ನಡೆಯಲ್ಲವೆಂದು ದೃಢವಾಗಿ ನುಡಿದ ದಿನೇಶ್, ಆಪರೇಷನ್ ಸಿಂಧೂರದ ಮೂಲಕ ಭಾರತ ವಿಜಯನ್ನು ಸಾಧಿಸಿದೆಯೆಂದು ಹೇಳಿದರು. ವಾಹನ ನಿಲುಗಡೆ :: ಸಿಂಧೂರ ವಿಜಯೋತ್ಸವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಜನಸಾಗರ ಹರಿದು ಬರಲಿದ್ದು, ಈ ಹಿನ್ನೆಲೆ ವಾಹನ ನಿಲುಗಡೆಗೆ ನಗರದ ಮೈಸೂರು ರಸ್ತೆಯ ಆರ್ಎಂಸಿ ಮೈದಾನ, ಸೈಂಟ್ ಜೋಸೆಫ್ ಕಾನ್ವೆಂಟ್ ಮೈದಾನ, ಖಾಸಗಿ ಬಸ್ ನಿಲ್ದಾಣ, ರಾಜಾಸೀಟು ಬಳಿಯ ರಸ್ತೆಗಳಲ್ಲಿ ಅಗತ್ಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆಯೆಂದು ತಿಳಿಸಿದರು.
ಮನೆ ಮನೆಗಳಿಂದ ಜನ ಹರಿದು ಬರಲಿ :: ಸಿಂಧೂರ ವಿಜಯೋತ್ಸವ ಸಮಿತಿ ಸದಸ್ಯರಾದ ವಿ.ಕೆ.ಲೋಕೇಶ್ ಮಾತನಾಡಿ, ಸಿಂಧೂರ ವಿಜಯೋತ್ಸವದಲ್ಲಿ ಜಿಲ್ಲೆಯ ಪ್ರತಿ ಮನೆ ಮನೆಗಳಿಂದ ಜನರು ಬಂದು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಗೋಣಿಕೊಪ್ಪಲಿನಿಂದ ಬೈಕ್ ಜಾಥ-ಸಮಿತಿ ಸದಸ್ಯ ಪುದಿಯೊಕ್ಕಡ ರಮೇಶ್ ಮಾತನಾಡಿ, ಸಿಂಧೂರ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗೋಣಿಕೊಪ್ಪಲಿನಿಂದ ನೂರಾರು ಮಂದಿ ಬೈಕ್ ಜಾಥ ಮೂಲಕ ವಿರಾಜಪೇಟೆಯನ್ನು ಹಾದು ಮಡಿಕೇರಿಗೆ ಆಗಮಿಸಲಿದ್ದಾರೆಂದರು. ಸುದ್ದಿಗೋಷ್ಠಿಯಲ್ಲಿ ಸಿಂಧೂರ ವಿಜಯೋತ್ಸವ ಸಮಿತಿ ಸದಸ್ಯ ಕುಕ್ಕೇರ ಅಜಿತ್ ಉಪಸ್ಥಿತರಿದ್ದರು.









