
ಮಡಿಕೇರಿ ಮೇ 27 NEWS DESK : ಯಾವುದೇ ಸಮುದಾಯಗಳು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಅಭಿಪ್ರಾಯಪಟ್ಟರು.
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ನ ಕಾರ್ಯಕಾರಿ ಸಮಿತಿ ವತಿಯಿಂದ ಆಡಳಿತ ಮಂಡಳಿ ಪದಾಧಿಕಾರಿಗಳಿಗಾಗಿ ಮತ್ತು ಅವರ ಕುಟುಂಬದವರಿಗಾಗಿ ವಿರಾಜಪೇಟೆ ಸಮೀಪದ ಕದನೂರಿನ ಖಾಸಗಿ ರೆಸಾರ್ಟ್ ನಲ್ಲಿ ಆಯೋಜಿಸಲಾಗಿದ್ದ ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟ-2025 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆಗಳು ಹೆಚ್ಚು ಕ್ರಿಯಾಶೀಲತೆಯಿಂದ ಮುನ್ನಡೆಯಬೇಕಾದರೆ ಅದರ ಪದಾಧಿಕಾರಿಗಳ ಮತ್ತು ಸದಸ್ಯರ ಕೌಟುಂಬಿಕ ಸಹಕಾರ ಅತಿ ಮುಖ್ಯವಾಗುತ್ತದೆ. ಇದರಿಂದ ಸಂಘಟನೆಗಳು ಸಹಜವಾಗಿಯೇ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು. ಸಂಘಟನೆ ಸಮಾಜದ ಶಕ್ತಿಯಾಗಿ ರೂಪುಗೊಳ್ಳಲು ಆಡಳಿತ ಮಂಡಳಿ ಪದಾಧಿಕಾರಿಗಳ ನಿಷ್ಠೆ ಮತ್ತು ಪ್ರಾಮಾಣಿಕತೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಸಂಘಟನೆಗಳಲ್ಲಿ ಪದಾಧಿಕಾರಿಗಳು ಅವರನ್ನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕಾದರೆ ಅವರ ಕುಟುಂಬ ಸದಸ್ಯರ ಸಹಕಾರವೂ ಅತಿ ಮುಖ್ಯ ಎಂದು ತಿಳಿಸಿದರು. ಆಡಳಿತ ಮಂಡಳಿ ಪದಾಧಿಕಾರಿಗಳು ಒಗ್ಗಟ್ಟಿನಿಂದ ಇದ್ದಲ್ಲಿ ಸಂಘಟನೆಗಳ ಅಭಿವೃದ್ಧಿ ಸಾಧ್ಯ. ಅನೇಕ ಏಳು ಬೀಳುಗಳೊಂದಿಗೆ ಮತ್ತು ಅನೇಕ ಮಹನೀಯರ ಶ್ರಮದಿಂದ ಇಂದು ಹೆಮ್ಮರವಾಗಿ ಬೆಳೆದಿರುವ ಕೆಎಂಎ, ತನ್ನ ಸಮುದಾಯ ಸೇವೆಯನ್ನು ಮುಂದುವರಿಸಲು ಪ್ರತಿ ಪದಾಧಿಕಾರಿಗಳ ಬದ್ಧತೆ ಅತ್ಯಗತ್ಯ. ಇದರಿಂದ ಸಂಸ್ಥೆಯ ಸಾಂಖಿಕ ಬೆಳವಣಿಗೆಯೂ ಸಾಧ್ಯ ಎಂದು ಸೂಫಿ ಹಾಜಿ ಹೇಳಿದರಲ್ಲದೆ, ತಮ್ಮ ಆಸಕ್ತಿ, ಶ್ರಮದಿಂದ ಸಮುದಾಯದ ಪ್ರತಿಯೊಬ್ಬರನ್ನು ಒಗ್ಗೂಡಿಸಿ ಪ್ರಾತಿನಿಧಿಕ ಸಂಘಟನೆಯನ್ನು ಸದೃಢಗೊಳಿಸುವ ಮಹತ್ತರವಾದ ಜವಾಬ್ದಾರಿಯನ್ನು ಪದಾಧಿಕಾರಿಗಳು ವಹಿಸಿಕೊಳ್ಳಬೇಕು. ಸಮಾಜದ ಋಣ ತೀರಿಸುವ ಕನಿಷ್ಠ ಪ್ರಯತ್ನಕ್ಕೆ ಪ್ರತಿಯೊಬ್ಬರ ಮನಸ್ಸು ಸಿದ್ಧವಾಗಬೇಕು. ಸಮುದಾಯದ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ಅವರನ್ನು ಸಾಮಾಜಿಕವಾಗಿ ಮೇಲೆತ್ತುವುದು ಪ್ರತಿಯೊಬ್ಬರ ಕರ್ತವ್ಯ ಎಂದುಕೊಳ್ಳಬೇಕು ಎಂದು ಕರೆ ನೀಡಿದರು. ಕೆ.ಎಂ.ಎ ಹಿರಿಯ ಉಪಾಧ್ಯಕ್ಷ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಮಾತನಾಡಿ, ಸಮುದಾಯ ಸಂಘಟನೆಗಳು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದಲು ದೂರದೃಷ್ಟಿಯಿಂದ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬರೂ ತಮ್ಮ ಕಾರ್ಯಚಟುವಟಿಕೆಗಳಲ್ಲಿ ಸೇವಾಮನೋಭಾವನೆ ರೂಢಿಸಿಕೊಂಡಾಗ ಮಾತ್ರ ಸಾಮಾಜಿಕ ಜೀವನದಲ್ಲಿ ಪ್ರಗತಿಯೆಡೆಗೆ ಸಾಗಲು ಸಾಧ್ಯ ಎಂದು ಹೇಳಿದರು. ಕೌಟುಂಬಿಕ ಸಂತೋಷಕೂಟ ಆಯೋಜಿಸುವುದರಿಂದ ಸದಸ್ಯರ ಕುಟುಂಬ ವರ್ಗದವರ ಮಧ್ಯೆ ಪರಸ್ಪರ ಬಾಂಧವ್ಯ ಗಟ್ಟಿಗೊಳ್ಳುತ್ತದೆ. ಇದು ಸಂಘಟನೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಸಂಸ್ಥೆಯ ಉಪಾಧ್ಯಕ್ಷರಾದ ಅಕ್ಕಳತಂಡ ಎಸ್.ಮೊಯ್ದು ಮಾತನಾಡಿ, ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟ ಏರ್ಪಡಿಸುವುದರಿಂದ ಇಡೀ ಆಡಳಿತ ಮಂಡಳಿ ಸದಸ್ಯರೆಲ್ಲಾರೂ ಒಂದೇ ಕುಟುಂಬ ಎಂಬ ಭಾವನೆ ಮೂಡುತ್ತದೆ. ಇದರಿಂದ ಪರಸ್ಪರ ಕೌಟುಂಬಿಕ ಪ್ರೀತಿ ಭಾವನೆ ಹೆಚ್ಚಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮವು ಸಾಂಪ್ರದಾಯಿಕ ‘ಅಬ್ಲ್ ಕೊಯೆ’ (ಅವಲಕ್ಕಿಯಿಂದ ಮಾಡಲಾಗುವ ವಿಶೇಷ ಖಾದ್ಯ) ತಯಾರಿಕೆಗೆ ಚಾಲನೆ ನೀಡುವ ಮೂಲಕ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಜಂಟಿ ಕಾರ್ಯದರ್ಶಿ ಕರ್ತೊರೆರ ಮುಸ್ತಫ, ಹಿರಿಯ ಪದಾಧಿಕಾರಿಗಳಾದ ಚಿಮ್ಮಿಚ್ಚಿರ ಕೆ.ಇಬ್ರಾಹಿಂ (ಉಮ್ಮಣಿ) ಹಾಜಿ, ಪೊಯಕೆರ ಎಸ್.ಮೊಹಮ್ಮದ್ ರಫೀಕ್, ಮಂಡೇಂಡ ಎ.ಮೊಯ್ದು, ಪುದಿಯಾಣೆರ ಎಂ.ಹನೀಫ್, ಕುಪ್ಪೋಡಂಡ ಎ.ಅಬ್ದುಲ್ ರಶೀದ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಎಂ.ಎಂ. ಇಸ್ಮಾಯಿಲ್ ವಂದಿಸಿದರು. ಸನ್ಮಾನ :: ಕಳೆದ ನವದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ವಿಶೇಷ ಅತಿಥಿಯಾಗಿ ಆಯ್ಕೆಗೊಂಡಿದ್ದ ಕೆ.ಎಂ.ಎ. ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್, ವಿರಾಜಪೇಟೆ ತಾಲೂಕು ಕೆಡಿಪಿ ಸದಸ್ಯರಾಗಿ ಸರಕಾರದಿಂದ ನಾಮನಿರ್ದೇಶನಗೊಂಡ ನಿರ್ದೇಶಕರಾದ ಕೋಳುಮಂಡ ರಫೀಕ್, ಕೆದಮುಳ್ಳೂರು ವಿ.ಎಸ್.ಎಸ್.ಎನ್ ನಿರ್ದೇಶಕರಾಗಿ ಚುನಾಯಿತರಾದ ಕುವೇಂಡ ವೈ.ಆಲಿ, ಕೊಂಡಂಗೇರಿ ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ನಿರ್ದೇಶಕ ಪುಡಿಯಂಡ ಇ.ಶಾದುಲಿ ಹಾಗೂ ಹಳ್ಳಿಗಟ್ಟು ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಆಯ್ಕೆಗೊಂಡ ನಿರ್ದೇಶಕರಾದ ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಿರ್ದೇಶಕರಾದ ಕೊಂಡಂಗೇರಿಯ ಪುಡಿಯಂಡ ಇ.ಶಾದುಲಿ ಅವರು ಕೆ.ಎಂ.ಎ. ಗೆ ವಾರ್ಷಿಕವಾಗಿ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ರೋಲಿಂಗ್ ಪಾರಿತೋಷಕ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಬಹುಮಾನ ವಿತರಣೆ :: ಕೆ.ಎಂ.ಎ. ಕೌಟುಂಬಿಕ ಸಂತೋಷಕೂಟದ ಅಂಗವಾಗಿ ಪದಾಧಿಕಾರಿಗಳ ಕುಟುಂಬದವರಿಗಾಗಿ ವಿವಿಧ ಸ್ಪರ್ಧಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಪುಟಾಣಿಗಳ ಬಕೇಟಿಗೆ ಬಾಲ್ ಹಾಕುವ ಸ್ಪರ್ಧೆಯಲ್ಲಿ ಕರತೊರೆರ ಶಯಾನ್ ಶರ್ಫುದ್ದೀನ್ (ಪ್ರಥಮ), ಈತಲತಂಡ ರಿಫಾನ್ ರಫೀಕ್ (ದ್ವಿತೀಯ) ಮತ್ತು ಪುದಿಯಾಣೆರ ಆದಿಲ್ ಹನೀಫ್ (ತೃತೀಯ), ಬಾಲಕರ ವಿಭಾಗದ ‘ಪಾಸಿಂಗ್ ದ ಬಾಲ್’ ಸ್ಪರ್ಧೆಯಲ್ಲಿ ದುದ್ದಿಯಂಡ ಮನ್ನಾನ್ ಮೊಯ್ದು (ಪ್ರಥಮ), ಮಂಡೆಂಡ ಮುಜ್ತಬ ಮೊಯ್ದು (ದ್ವಿತೀಯ) ಮತ್ತು ಕುಂಡಂಡ ರಜ್ಹಿನ್ ರಜಾಕ್ (ತೃತೀಯ) ಬಹುಮಾನ ಪಡೆದುಕೊಂಡರು. ಪುರುಷರ ಸಂಗೀತ ಕುರ್ಚಿ ವಿಭಾಗದಲ್ಲಿ ಕರ್ತೊರೆರ ಎಸ್. ಶರ್ಪುದ್ದೀನ್ (ಪ್ರಥಮ), ಕುಪ್ಪೋಡಂಡ ಅಬ್ದುಲ್ ರಶೀದ್(ದ್ವಿತೀಯ) ಮತ್ತು ಕುವೇಂಡ ವೈ. ಆಲಿ (ತೃತೀಯ), ಮಹಿಳೆಯರ ಸಂಗೀತ ಕುರ್ಚಿ ವಿಭಾಗದಲ್ಲಿ ದುದ್ದಿಯಂಡ ಅಲ್ಫಿಯಾ ಮಾಶೂಕ್ (ಪ್ರಥಮ), ಅಕ್ಕಳತಂಡ ಫಿದಾ ಮೊಯ್ದು (ದ್ವಿತೀಯ) ಮತ್ತು ಚೆರುಮಾನಿಕಾರಂಡ ಜ್ಹರೀನಾ ಅಹಮದ್ (ತೃತೀಯ) ಸ್ಥಾನ ಪಡೆದುಕೊಂಡರು. ಪುರುಷರ ಹೌಸಿ ಹೌಸಿ (ತಾಂಬೋಲ) ಸ್ಪರ್ಧೆಯ ಫುಲ್ ಹೌಸ್ ವಿಭಾಗದಲ್ಲಿ ಕರತೊರೆರ ಕೆ. ಮುಸ್ತಫಾ (ಪ್ರಥಮ), ಫಾಸ್ಟ್ ಫೈವ್ ವಿಭಾಗದಲ್ಲಿ ಮಂಡೇಂಡ ಮುಶ್ರಫ್ ಮೊಯ್ದು (ಪ್ರಥಮ), ಮೊದಲ ಸಾಲು ವಿಭಾಗದಲ್ಲಿ ಕುಂಡಂಡ ರಜ್ಹಾಕ್ (ಪ್ರಥಮ), 2ನೇ ಸಾಲು ವಿಭಾಗದಲ್ಲಿ ಹರಿಶ್ಚಂದ್ರ ಎ. ಹಂಸ (ಪ್ರಥಮ) ಮತ್ತು 3ನೇ ಸಾಲು ವಿಭಾಗದಲ್ಲಿ ಕರತೊರೆರ ಕೆ. ಮುಸ್ತಫಾ (ಪ್ರಥಮ)ಬಹುಮಾನ ಪಡೆದರೆ, ಮಹಿಳೆಯರ ಹೌಸಿ ಹೌಸಿ ಸ್ಪರ್ಧೆಯ ಫುಲ್ ಹೌಸ್ ವಿಭಾಗದಲ್ಲಿ ಕುವೇಂಡ ನಜ್ಮಾ ಆದಿಲ್ (ಪ್ರಥಮ), ಫಾಸ್ಟ್ 5 ವಿಭಾಗದಲ್ಲಿ ಮಂಡೇಂಡ ರಶೀದ (ಪ್ರಥಮ), ಮೊದಲ ಸಾಲು ವಿಭಾಗದಲ್ಲಿ ಹರಿಶ್ಚಂದ್ರ ಶಮಾ ಹಂಸ (ಪ್ರಥಮ), 2ನೇ ಸಾಲು ವಿಭಾಗದಲ್ಲಿ ಸೂಫಿಯಾ ಮರಿಯಂ (ಪ್ರಥಮ) ಮತ್ತು 3ನೇ ಸಾಲು ವಿಭಾಗದಲ್ಲಿ ಅಕ್ಕಳತಂಡ ಫಿದಾ ಮೊಯ್ದು (ಪ್ರಥಮ) ಸ್ಥಾನ ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.










