
ಮಡಿಕೇರಿ NEWS DESK ಮೇ 31 : ಮೀಸಲಾತಿಯ ಶೇ.50 ರ ಮಿತಿಯನ್ನು ತೆಗೆಯುವ ಮತ್ತು ಖಾಸಗಿ ಕ್ಷೇತ್ರಗಳಲ್ಲು ಮೀಸಲಾತಿಯ ಜಾರಿಗಾಗಿ ಹೋರಾಟಗಳು ರೂಪುಗೊಳ್ಳುವ ಅಗತ್ಯವಿದೆ ಎಂದು ಪ್ರಗತಿಪರ ಚಿಂತಕರು ಹಾಗೂ ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು ತಿಳಿಸಿದ್ದಾರೆ. ಮಾನವ ಬಂಧುತ್ವ ವೇದಿಕೆ, ಮಹಿಳಾ ಬಂಧುತ್ವ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ನಗರದ ಬಾಲಭವನದ ಸಭಾಂಗಣದಲ್ಲಿ ನಡೆದ ‘ಸಮಕಾಲೀನ ಬಿಕ್ಕಟ್ಟುಗಳು ಮತ್ತು ಸವಾಲುಗಳು’ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು, ‘ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ(ಜಾತಿ ಸಮೀಕ್ಷೆ)’ ವಿಷಯದ ಕುರಿತು ಅವರು ಮಾತನಾಡಿದರು. ಪ್ರಸ್ತುತ ಕೇವಲ ಶೇ.2 ರಷ್ಟು ಉದ್ಯೋಗಗಳು ಮಾತ್ರ ಸರ್ಕಾರಿ ಇಲಾಖೆಗಳಲ್ಲಿ ಲಭ್ಯವಿದ್ದರೆ, ಉಳಿದ ಶೇ.98 ರಷ್ಟು ಉದ್ಯೋಗಗಳು ಖಾಸಗಿ ಕ್ಷೇತ್ರಗಳಲ್ಲಿದೆ. ಇಲ್ಲಿನ ಸರ್ಕಾರಗಳ ಮೂಲಕ ಅಗತ್ಯ ಸೌಲಭ್ಯ, ರಿಯಾಯಿತಿಗಳನ್ನು ಪqಯುವ ಖಾಸಗಿ ಸಂಸ್ಥೆಗಳು ಸಾಮಾಜಿಕ ನ್ಯಾಯವನ್ನು ಪರಿಪಾಲಿಸುವ ಮೂಲಕ ಮೀಸಲಾತಿಯನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ನಾವುಗಳು ಧ್ವನಿ ಎತ್ತುವುದು ಅತ್ಯವಶ್ಯ. ಉತ್ತರ ಪ್ರದೇಶದಲ್ಲಿ ಮಾಯಾವತಿ ಸರ್ಕಾರವಿದ್ದ ಹಂತದಲ್ಲಿ, ಸರ್ಕಾರಿ ಸೌಲಭ್ಯ ಪಡೆಯುವ ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ನೀಡಬೇಕೆನ್ನುವ ಆದೇಶವನ್ನು ಮಾಡಿದ್ದರಾದರು, ಆ ವಿಚಾರ ನ್ಯಾಯಾಲಯದ ಮುಂದಿರುವುದಾಗಿ ತಿಳಿಸಿದರು. ಸರ್ಕಾರದ ಯಾವುದೇ ಯೋಜನೆಗಳು ಒಂದಲ್ಲ ಒಂದು ಸಮುದಾಯದ ಕೆಲಸ ಕಾರ್ಯಗಳು ಮತ್ತು ಆ ಮುಖೇನ ಅವರ ಅಭಿವೃದ್ಧಿಯ ದೃಷ್ಟಿಯನ್ನು ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಜಾತಿ ಗಣತಿ ಅತ್ಯವಶ್ಯ. ನಿಜವಾಗಿಯಾದರೆ, ಜಾತಿ ಗಣತಿ ಎನ್ನುವುದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯೇ ಆಗಿದೆಯೆಂದು ತಿಳಿಸಿ, ಈಗಾಗಲೆ ಶೇ.25 ರಷ್ಟು ಮೀಸಲಾತಿಯನ್ನು ಹೊಂದಿರುವ ಎಸ್ಸಿ-ಎಸ್ಟಿ ಸಮುದಾಯ, ಶೇ.18 ರಷ್ಟು ಮೀಸಲಾತಿಯನ್ನು ಹೊಂದಿಕೊಂಡಿರುವ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಗಳ ಅಂಕಿಅಂಶಗಳು ಅದಾಗಲೆ ಲಭ್ಯವಿದೆೆ. ಆದರೆ, ಇವನ್ನು ಹೊರತು ಪಡಿಸಿದ ಇತರೆ ಹಿಂದುಳಿದ ಸಮುದಾಯಗಳ ಅಂಕಿಅಂಶಗಳು ಲಭ್ಯವಿಲ್ಲವೆಂದು ದಿನೇಶ್ ಅಮೀನ್ ಮಟ್ಟು ತಿಳಿಸಿದರು. ಜಾತಿ ಗಣತಿಗೆ ಸಂಬಂಧಿಸಿದ ಕಾಂತರಾಜು ಆಯೋಗದ ವರದಿಯನ್ನು ‘ಅವೈಜ್ಞಾನಿಕ’ವೆನ್ನುವ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ, ಜಾತಿ ಗಣತಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಡೆದಿರುವ ಯಾವುದೇ ಗಣತಿಗಳು ‘ಸ್ಯಾಂಪಲ್ ಸಮೀಕ್ಷೆ’ಗಳೇ ಆಗಿವೆ. ಅದೂ ಈ ಹಿಂದೆ ಶೇ.5 ಇಲ್ಲವೆ ಶೇ. 10 ರಷ್ಟು ಜನರನ್ನು ಮಾತ್ರ ಸಂಪರ್ಕಿಸಿ ವರದಿಗಳನ್ನು ಮಾಡಲಾಗಿತ್ತು. ಆದರೆ, ಕಾಂತರಾಜು ವರದಿಯನ್ನು 5.98 ಸ್ಯಾಂಪಲ್ಗಳನ್ನು ಪಡೆದು ನಡೆಸಲಾಗಿದೆ. ಎಂದರೆ ಶೇ.95 ರಷ್ಟು ಜನ ಸಂಪರ್ಕವನ್ನು ಮಾಡುವ ಮೂಲಕ ಮಾಡಲಾಗಿದೆಯೆಂದು ವಿವರಿಸಿದರು. ಕೆಲವು ಸಮುದಾಯಗಳು ವರದಿಯಲ್ಲಿ ತಮ್ಮ ಸಮೂಹದ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಆರೋಪಗಳನನ್ನು ಮಾಡಿರುವುದನ್ನು ಪ್ರಸ್ತಾಪಿಸಿದ ಅವರು, ಲಿಂಗಾಯಿತ ಸಮುದಾಯದೊಳಗಿನ ಉಪ ಪಂಗಡಗಳಲ್ಲಿ ಲಿಂಗಾಯತ ಎಂದು ನಮೂದಾದಲ್ಲಿ ಮೀಸಲಾತಿಯ ಪ್ರಮಾಣ ಕಡಿಮೆಯಾಗುವುದರಿಂದ, ಅವರು ಹಿಂದೂ ಹೂಗಾರ ಮೊದಲಾದ ಹೆಸರುಗಳನ್ನು ನೀಡಿ ಹೆಚ್ಚಿನ ಮೀಸಲಾತಿ ಸೌಲಭ್ಯದತ್ತ ಮುಖ ಮಾಡಿರುವುದರಿಂದ ಲಿಂಗಾಯತ ಸಮುದಾಯದ ಸಂಖ್ಯೆಯ ಕಡಿಮೆಯಾಗಿ ಕಂಡು ಬರುತ್ತಿದೆಯಷ್ಟೆ ಎಂದು ತಿಳಿಸಿದರು.
ಜಾತಿಗಣತಿಯ ವಿರೋಧ ರಾಜಕೀಯ ಮುಖವನ್ನು ವಿಶ್ಲೇಷಿಸಿದ ದಿನೇಶ್ ಅಮೀನ್ಮಟ್ಟು, ಪ್ರಬಲ ಸಮುದಾಯವೆಂದು ಗುರುತಿಸಿಕೊಂಡು ರಾಜಕೀಯ ಶಕ್ತಿಯನ್ನು ಹೊಂದುತ್ತಿದ್ದ ಸಮೂಹ, ಸಂಖ್ಯೆ ಕಡಿಮೆಯಾದಲ್ಲಿ ಆ ಅಧಿಕಾರದಿಂದ ಹೊರಗುಳಿಯುವ ಆತಂಕಗಳಿAದಲೂ ವಿರೋಧಕ್ಕೆ ಮುಂದಾಗಿದೆ ಎಂದರು. ಪ್ರಸ್ತುತ ಒಕ್ಕಲಿಗರ ಮೀಸಲಾತಿಯನ್ನು ಶೇ.4 ರಿಂದ 7 ಕ್ಕೆ ಮತ್ತು ಲಿಂಗಾಯತರ ಮೀಸಲಾತಿಯನ್ನು ಶೇ.5 ರಿಂದ 8ಕ್ಕೆ ಹೆಚ್ಚಿಸಲಾಗಿದೆ. ಮೀಸಲಾತಿಯ ಹೆಚ್ಚಳಕ್ಕೆ ಸಂತೋಷ ಪಡಬೇಕೇ ಹೊರತು, ಸಂಖ್ಯೆ ಕಡಿಮೆಯಾಯಿತೆಂದು ಹೊಡೆದಾಟವೇಕೆಂದು ಪ್ರಶ್ನಿಸಿದರು. ಜಾತಿ ಎನ್ನುವುದೇ ಒಂದು ರೋಗ, ಇಂತಹ ರೋಗವನ್ನು ಗುಣಪಡಿಸಬೇಕಾದರೆ ನಮಗೊಂದು ಜಾತಿ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ ಅವರು, ಇಂತಹ ಜಾತಿ ವ್ಯವಸ್ಥೆಗಳು ನಾಶವಾಗಬೇಕಾದರೆ ಜಾತಿಯೊಳಗಿನ ವಿವಾಹಗಳು ನಿಲ್ಲಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಚಿಂತಕರು ಹಾಗೂ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಕಾಳೆÉÃಗೌಡ ನಾಗವಾರ ಅವರು, ಪ್ರಸ್ತುತ ಸಮಾಜ ವ್ಯವಸ್ಥೆಯಲ್ಲಿ ಅವಿವೇಕ ತುಂಬಿ ತುಳುಕುತ್ತಿದೆ. ಇವುಗಳನ್ನು ಮೀರಿ, ಕವಿ ವಾಣಿಯಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಎಲ್ಲರೂ ಒಂದಾಗಿ ಬಾಳುವ ವಾತಾವರಣ ಸೃಷ್ಟಿಯಾಗಬೇಕಾಗಿದೆಯೆಂದು ತಿಳಿಸಿದರು. ಪ್ರಸ್ತುತ ಅತ್ಯುತ್ತಮವಾದುರೆಡೆಗೆ ಸಾಗುವ, ಸಕಲರ ಏಳಿಗೆಗೆ ಕಾರಣವಾಗುವ ವಿಚಾರಗಳ ಬಗ್ಗೆ ಚಿಂತನೆ ಮತ್ತು ಮರು ಚಿಂತನೆಗಳನ್ನು ನಡೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಂವೇದನಾ ಶೀಲರಾಗುವ ಅಗತ್ಯವಿದೆ. ಬುದ್ಧ, ಬಸವಾದಿ ಶರಣರು ನಾಡಿಗೆ ಈ ಸಂದೇಶ ನೀಡಿದ್ದಾರೆ ಎಂದು ಹೇಳಿದರು. ‘ಮೀಸಲಾತಿ ಎಂದರೇನು ಮತ್ತು ಅದರ ಚರಿತ್ರೆ’ ವಿಷಯದ ಕುರಿತು ಲೇಖಕರು ಮತ್ತು ಪ್ರಾಧ್ಯಾಪಕರಾದ ಡಾ.ರಾಜಪ್ಪ ದಳವಾಯಿ ಅವರು ಮಾತನಾಡಿ, ಮೀಸಲಾತಿಯ ವಿಚಾರವನ್ನು ಪ್ರಸ್ತಾಪಿಸುವ ಸಂದರ್ಭ ಮೊಟ್ಟ ಮೊದಲ ಬಾರಿಗೆ ಮೀಸಲಾತಿಯ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕೊಲ್ಲಾಪುರದ ಶಾಹು ಮಹರಾಜ್, ನಾಲ್ಮಡಿ ಕೃಷ್ಣರಾಜ ಒಡೆಯರ್ ಮತ್ತು ಬರೋಡದ ಗಾಯಕವಾಡ್ರನ್ನು ನೆನಪಿಸಿಕೊಳ್ಳ್ಳುವುದು ಅತ್ಯವಶ್ಯ. ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೀಸಲಾತಿ ನೀಡಿದರೆನ್ನುವ ಮಾತಿದೆ, ಆದರೆ, ಅಂಬೇಡ್ಕರ್ ಅವರು ಸಮಾನತೆಯ ಸಮಾಜಕ್ಕಾಗಿ ಭೂಮಿ, ಕೈಗಾರಿಕೆ, ಶಿಕ್ಷಣ ಮತ್ತು ದೇವಸ್ಥಾನಗಳು ರಾಷ್ಟ್ರೀಕರಣಗೊಳ್ಳಬೇಕೆಂದು ಬಯಸಿದ್ದರಾದರು, ಅದಕ್ಕೆ ಅಂದಿನ ದಿನಮಾನಗಳಲ್ಲಿ ಒಪ್ಪಿಗೆ ದೊರಕದ ಕಾರಣದಿಂದ ಮೀಸಲಾತಿಯನ್ನು ನೀಡಲಾಗಿದೆಯೆಂದು ತಿಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಾನವೀಯ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕರಾದ ಕೆ.ಎಸ್. ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನವೀಯ ಬಂಧುತ್ವ ವೇದಿಕೆಯ ರಾಜ್ಯ ಮಹಿಳಾ ಸಂಚಾಲಕರಾದ ಡಾ.ಲೀಲಾ ಸಂಪಿಗೆ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಸಕರಾದ ಡಾ.ಮಂತರ್ ಗೌಡ, ಸಂಘಟನೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್, ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಡಾ.ಕಾವೇರಿ ಉಪಸ್ಥಿತರಿದ್ದರು.
ವಿಚಾರ ಸಂಕಿರಣದ ಸ್ವಾಗತ ಸಮಿತಿ ಸಂಚಾಲಕ ನೆರವಂಡ ಉಮೇಶ್ ಸ್ವಾಗತಿಸಿದರು. ಗೌರವ ಸಂಚಾಲಕ ರಮಾನಾಥ ಬೇಕಲ್ ಆರಂಭದಲ್ಲಿ ಸಂವಿಧಾನ ಪೀಠಿಕೆ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.








