
ಮಡಿಕೇರಿ NEWS DESK ಜೂ.1 : ಸೋಮವಾರಪೇಟೆ ಸಮೀಪದ ನಳಂದ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪಳಿಯಂಡ ಸೂರ್ಯ ಗಣಪತಿ ಐಎಂಯುಸಿಇಟಿ ಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 3641 ನೇ ರ್ಯಾಂಕ್ ಗಳಿಸುವ ಮೂಲಕ ಕಾಲೇಜಿಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ. ಇಂಡಿಯನ್ ಮೆರಿಟೈನ್ ವಿಶ್ವ ವಿದ್ಯಾಲಯದವರು ಕೇವಲ ಕೆಲವೇ ಕೆಲವು ಐಐಟಿ ಕಾಲೇಜುಗಳನ್ನು ಕೇಂದ್ರೀಕರಿಸಿ ನಡೆಸುವ ಐಎಂಯುಸಿಇಟಿ (IMUCET) ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸಿರುವುದಕ್ಕೆ ಸೂರ್ಯಗಣಪತಿ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಕೋಚಿಂಗ್ ಪಡೆಯದೇ ಕಾಲೇಜಿನಲ್ಲಿ ಕಲಿತ ಜ್ಞಾನಾರ್ಜನೆಯೊಂದಿಗೆ ಕೇವಲ 30 ದಿನಗಳ ಅವಧಿಯಲ್ಲಿ ಸಾಮಾನ್ಯ ಜ್ಞಾನ, ಇಂಗ್ಲೀಷ್ ಹಾಗೂ ಭೌತಶಾಸ್ತ್ರ ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಿದ್ದರ ಫಲವಾಗಿ ನಾನು ಅಂದುಕೊಂಡ ರ್ಯಾಂಕ್ ಗಳಿಸಲು ಸಾಧ್ಯವಾಯಿತು ಎಂದು ಸಾಧಕ ಸೂರ್ಯ ಗಣಪತಿ ಹೇಳುತ್ತಾರೆ. ಇಡೀ ದೇಶದಲ್ಲಿ ಇರುವ ಕೆಲವೇ ಕೆಲವು ಕಾಲೇಜುಗಳ ಪೈಕಿ ಚೆನ್ನೈನಲ್ಲಿ ಇರುವ ಎಎಂಇಟಿ ವಿಶ್ವವಿದ್ಯಾಲಯದಲ್ಲಿ ಸೀಟು ಗಿಟ್ಟಿಸುವ ತವಕದಲ್ಲಿದ್ದಾರೆ. ನಾನು ಪ್ರೌಢ ಶಿಕ್ಷಣ ಹಂತದಿಂದಲೇ ಭಾರತೀಯ ಸೇನಾ ವಿಭಾಗಕ್ಕೆ ಸೇರುವ ಮೂಲಕ ದೇಶಸೇವೆಗೆ ತೊಡಗಬೇಕು ಎಂಬ ಕನಸು ಈ ಮೂಲಕ ನನಸಾಗಿದೆ ಎಂದು ಪಳಿಯಂಡ ಸೂರ್ಯ ಗಣಪತಿ ಹೇಳಿದ್ದಾರೆ. ನಳಂದ ಇಂಟರ್ ನ್ಯಾಷನಲ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.90 ಅಂಕಗಳಿಸಿದ್ದಾರೆ. ಸೋಮವಾರಪೇಟೆ ಬಳಿಯ ನೇರಳೆ ಗ್ರಾಮದಲ್ಲಿ ವಾಸವಿರುವ ಕೃಷಿಕ ಪಳಿಯಂಡ ಗಣಪತಿ ಹಾಗೂ ನಳಂದ ಶಾಲೆಯ ಜೀವಶಾಸ್ತ್ರ ಉಪನ್ಯಾಸಕಿ ಅಶ್ವಿನಿ ಗಣಪತಿ ಅವರ ಪುತ್ರ ಈ ಸೂರ್ಯಗಣಪತಿ.








