
ಮಡಿಕೇರಿ ಜೂ.1 NEWS DESK : ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಗೆ ಮರ ಬಿದ್ದು ಮೃತಪಟ್ಟ ಅಮ್ಮತ್ತಿ ಹೋಬಳಿಯ ಬಾಡಗ- ಬಾಣಂಗಾಲ ಗ್ರಾಮದ ಪಿ.ಸಿ.ವಿಷ್ಣು ಬೆಳ್ಯಪ್ಪ ಅವರ ಮನೆಗೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಈಗಾಗಲೇ ಸರ್ಕಾರದ ನಿರ್ದೇಶನದಂತೆ 5 ಲಕ್ಷ ರೂ ಪರಿಹಾರವನ್ನು ಆನ್ ಲೈನ್ ಮೂಲಕ ಪಾವತಿಸಲಾಗಿದೆ ಎಂದು ತಹಶಿಲ್ದಾರ್ ಅನಂತ ಶಂಕರ ಅವರು ತಿಳಿಸಿದರು. ಹಾಗೆಯೇ ಕಳೆದ ವಾರ ಸುರಿದ ಮಳೆ ಹಾಗೂ ಬಿರುಗಾಳಿಗೆ ಮರ ಬಿದ್ದು ಮೃತರಾದ ಆರ್ಜಿ ಗ್ರಾಮದ ಗೌರಿ ಅವರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರದ ಆದೇಶ ಪತ್ರವನ್ನು ಭಾನುವಾರ ಶಾಸಕರು ತಮ್ಮ ಕಚೇರಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಹಶಿಲ್ದಾರ್ ಅನಂತ ಶಂಕರ ಇದ್ದರು.









