
ಮಡಿಕೇರಿ ಜೂ.3 NEWS DESK : ತೀವ್ರವಾದ ಮಳೆ-ಗಾಳಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1442 ಸಂಖ್ಯೆ ಕಂಬಗಳು, 11 ಸಂಖ್ಯೆ ವಿದ್ಯುತ್ ಪರಿವರ್ತಕಗಳು ಹಾಗೂ 13.105 ಕಿ.ಮೀ ವಾಹಕಗಳು ಹಾನಿಗೊಳಗಾಗಿರುತ್ತದೆ. ಈಗಾಗಲೇ 1091 ಸಂಖ್ಯೆ ಕಂಬಗಳನ್ನು ಹಾಗೂ 09 ಸಂಖ್ಯೆ ಪರಿವರ್ತಕಗಳನ್ನು ದುರಸ್ತಿಗೊಳಿಸಿ ಬದಲಾಯಿಸಲಾಗಿದೆ. ದೈನಂದಿನ ಚಟುವಟಿಕೆಯಲ್ಲಿ ಸರಾಸರಿ 100 ಕಂಬಗಳ ಬದಲಾವಣೆಯ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಮಳೆ ಗಾಳಿಯ ತೀವ್ರತೆ ಹೆಚ್ಚಾಗಿರುವುದರಿಂದ ವಿದ್ಯುತ್ ಕಂಬಗಳ ಮುರಿಯುವಿಕೆ ಮುಂದುವರಿಯುತ್ತಿದೆ. ವಿದ್ಯುತ್ ಜಾಲದ ದುರಸ್ತಿ ಕಾರ್ಯವನ್ನು ಚುರುಕಗೊಳಿಸಲು, ವಿದ್ಯುತ್ ಜಾಲವನ್ನು ಪುನಃ ಸ್ಥಾಪಿಸಲು ಮಡಿಕೇರಿ ವಿಭಾಗದ 231 ಸಂಖ್ಯೆಯ ಸಿಬ್ಬಂದಿ, ಇತರೆ ವಿಭಾಗಗಳಿಂದ 52 ಸಂಖ್ಯೆ ಸಿಬ್ಬಂದಿ ಹಾಗೂ ಹೊರಗುತ್ತಿಗೆಯಿಂದ 75 ಸಂಖ್ಯೆ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಇವರ ಜೊತೆ 124 ಸಂಖ್ಯೆ ವಿದ್ಯುತ್ ಗುತ್ತಿಗೆದಾರ ಸಿಬ್ಬಂದಿಗಳು ವಿವಿಧ ಸಲಕರಣೆಗಳೊಂದಿಗೆ ನಿರಂತರವಾಗಿ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ 10 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ವಿಪರೀತ ಗಾಳಿಯಿಂದ ಕಂಬದ ಬದಲಾವಣೆ ಕಾಮಗಾರಿ ಹಾಗೂ ಮಾರ್ಗದ ವಿಫಲತೆಯನ್ನು ಸರಿಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಮಳೆಗಾಳಿಯಿಂದ ಪದೇ ಪದೇ ವಿದ್ಯುತ್ ಜಾಲಕ್ಕೆ ಹಾನಿ ಉಂಟಾಗುತ್ತಿರುವುದರಿಂದ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ. ಜಿಲ್ಲೆಯಾದ್ಯಂತ ಮಳೆ ಗಾಳಿಯಿಂದಾಗಿ ಶಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿದ್ಯುತ್ ಜಾಲದ ಮರು ಸ್ಥಾಪನೆಯಲ್ಲಿ ನಿರತರಾಗಿರುತ್ತಾರೆ. ಶಾಖಾಧಿಕಾರಿಗಳು ಬ್ರೇಕ್ಡೌನ್ ನಿರ್ವಹಣೆ ಕಾಮಗಾರಿಗಳಲ್ಲಿ ನಿರತರಾಗಿದ್ದು, ಕೆಲವೊಂದು ಸಂದರ್ಭಗಳಲ್ಲಿ ಗ್ರಾಹಕರ ದೂರವಾಣಿ ಕರೆಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿರುವುದಿಲ್ಲ. ಆದ್ದರಿಂದ ಗ್ರಾಹಕರ ದೂರುಗಳನ್ನು ದಾಖಲಿಸಿ ನಿವಾರಿಸುವ ನಿಟ್ಟಿನಲ್ಲಿ ಮಡಿಕೇರಿ ವಿಭಾಗಕ್ಕೆ ಪ್ರತ್ಯೇಕವಾಗಿ ಟೋಲ್ ಫ್ರೀ ಸಂಖ್ಯೆ “1800-599-0061” ನೀಡಲಾಗಿದ್ದು, ವಿದ್ಯುತ್ ಜಾಲದ ಯಾವುದೇ ಸಮಸ್ಯೆ ಇದ್ದಲ್ಲಿ ಗ್ರಾಹಕರು ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ರಾಮಚಂದ್ರ ತಿಳಿಸಿದ್ದಾರೆ.









