
ಗೋಣಿಕೊಪ್ಪ ಜೂ.16 NEWS DESK : ತೀವ್ರ ಮಳೆಯಿಂದ ಮನೆಯ ಹಿಂಬದಿ ಗೋಡೆ ಕುಸಿದು ಅಪಾರ ನಷ್ಟ ಅನುಭವಿಸಿದ ಪೊನ್ನಂಪೇಟೆ ಕೃಷ್ಣ ನಗರದ ಹೆಚ್.ಕೆ.ರವಿ ಅವರ ಕುಟುಂಬಕ್ಕೆ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಲಪ್ಪ ನೀಡಿದರು. ಮನೆ ಗೋಡೆ ಕುಸಿದು ಸಂಕಷ್ಟದಲ್ಲಿರುವ ಕುಟುಂಬದವರನ್ನು ಭೇಟಿ ಮಾಡಿದ ಸುಜಾಕುಶಲಪ್ಪ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಮಳೆ ಹನಿ ಪರಿಹಾರ ಅನುದಾನದಿಂದ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಆತಂಕ ಎದುರಾಗಿದೆ. ಸಾಮಾನ್ಯ ಜನರ ಬದುಕು ಸಂಕಷ್ಟಕ್ಕೆ ತಂದಿದೆ. ಅಲ್ಲಲ್ಲಿ ಮರಗಳು ಬಿದ್ದು ಹಾನಿ ಉಂಟು ಮಾಡುತ್ತಿದ್ದರೆ, ಮತ್ತೊಂದೆಡೆ ಮನೆಯ ಗೋಡೆಗಳು ಕುಸಿದು ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ತಾಲೂಕಿನ ಆಡಳಿತ ಅಧಿಕಾರಿಗಳು ಮುಂಜಾಗೃತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಪ್ರಧಾನ ಕಾರ್ಯದರ್ಶಿಗಳಾದ ಕುಟ್ಟಂಡ ಅಜಿತ್ ಕರಂಬಯ್ಯ, ಮುದ್ದಿಯಡ ಮಂಜು ಗಣಪತಿ, ಮತ್ರಂಡ ಕಬೀರ್ ದಾಸ್, ಮಾಪಂಗಡ ಯಮುನಾ ಚಂಗಪ್ಪ, ಎಂ.ಎಂ ರವೀಂದ್ರ, ಮಧು ದೇವಯ್ಯ, ಮೂಕಳೇರ ಮದು, ಕಂದಾಯ ಪರಿವೀಕ್ಷಕ ಸುಧೀಂದ್ರ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಗೋಪಿ, ಸದಸ್ಯ ನಿಲನ್, ಗಿರಿಜಾ ವೆಂಕಟೇಶ್ ಇದ್ದರು.









