


ಕುಶಾಲನಗರ ಜೂ.19 NEWS DESK : ಸೈನಿಕ ಶಾಲೆಗಳ ಅಂತರ ವಲಯದ ರಾಷ್ಟ್ರೀಯ ಮಟ್ಟದ ಸುಬ್ರತೋ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇದೇ ಮೊದಲ ಬಾರಿಗೆ ರನ್ನರ್ ಅಪ್ ಪ್ರಶಸ್ತಿಗೆ ಕೊಡಗು ಸೈನಿಕ ಶಾಲಾ ತಂಡ ಪಾತ್ರವಾದ ಹಿನ್ನೆಲೆ ಆಡಗಾರರೊಂದಿಗೆ ಕೂಡಿಗೆಯಲ್ಲಿ ಭವ್ಯ ವಿಜಯೋತ್ಸವ ಮೆರವಣಿಗೆ ನಡೆಯಿತು. ಜೂ.9 ರಿಂದ 15ರವರೆಗೆ ಒರಿಸ್ಸಾ ರಾಜ್ಯದ ಭುವನೇಶ್ವರದ ಸೈನಿಕ್ ಶಾಲೆಯಲ್ಲಿ ಆಯೋಜಿತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಸೈನಿಕ ಶಾಲೆಯ ಜೂನಿಯರ್ ತಂಡ ಈ ಸಾಧನೆ ಮಾಡಿತ್ತು. ಇದರ ಪ್ರಯುಕ್ತ ಕೂಡಿಗೆ ಸೈನಿಕ ಶಾಲೆಯ ಜೂನಿಯರ್ ಫುಟ್ಬಾಲ್ ತಂಡದ ಆಟಗಾರರು ವಿಜಯಪತಾಕೆಯೊಂದಿಗೆ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷ. ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಾಲೆಯ ಜೂನಿಯರ್ ಪುಟ್ಬಾಲ್ ತಂಡವು, ನಾಯಕ ಕೆಡೆಟ್ ಯಶ್ ಪ್ರತಾಪ್ ನೇತೃತ್ವದಲ್ಲಿ ಕ್ರೀಡಾಕೂಟದ ಕೊನೆಯವರೆಗೂ ಉತ್ತಮ ಪ್ರದರ್ಶನ ನೀಡಿದರೆ, ತಂಡದ ಗೋಲ್ ಕೀಪರ್ ಕೆಡೆಟ್ ಆರ್ಯನ್ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ಇದು ಕೂಡಿಗೆ ಸೈನಿಕ ಶಾಲೆಯ ಇತಿಹಾಸದಲ್ಲೆ ರಾಷ್ಟ್ರಮಟ್ಟದ ವೇದಿಕೆಯಲ್ಲಿ ಮೂಡಿ ಬಂದ ಅಪರೂಪದ ಸಾಧನೆಯಾಗಿದೆ. ವಿಜಯೋತ್ಸವ ಮೆರವಣಿಗೆ ಹಳೇ ಕೂಡಿಗೆಯ ಏಂಜೆಲ್ ಶಾಲೆಯ ಮುಖ್ಯ ರಸ್ತೆಯಿಂದ ಆರಂಭವಾಗಿ ಶಾಲೆಯ ಮುಖ್ಯ ದ್ವಾರದವರೆಗೆ ನಡೆಯಿತು. ಈ ಸಂದರ್ಭ ಶಾಲೆಯ ಸುಮಾರು 600 ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿವರ್ಗ, ಎನ್ಸಿಸಿ ಸಿಬ್ಬಂದಿ, ದೈಹಿಕ ಶಿಕ್ಷಕರು ಹಾಗೂ ಕೂಡಿಗೆ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ವಿಜಯೋತ್ಸವ ಮೆರವಣಿಗೆಯಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪ ಪ್ರಾಂಶುಪಾಲರಾದ ಸ್ಕ್ವಾಡರ್ನ್ ಲೀಡರ್ ಮೊಹಮ್ಮದ್ ಹಾಜಿ, ಶಾಲೆಯ ಪ್ರಥಮ ಮಹಿಳೆ ಶ್ರೀಮತಿ ದಿವ್ಯಾ ಸಿಂಗ್ ಹಾಜರಿದ್ದರು.
ಕೊಡಗಿನ ಸಂಸ್ಕೃತಿಯ ಪ್ರತೀಕವಾಗಿ ಶಾಲೆಯ ಬಾಲಕಿಯರು ಕೊಡವ ಮಹಿಳೆಯರ ಉಡುಪಿನಲ್ಲಿ ಫುಟ್ಬಾಲ್ ಆಟಗಾರರನ್ನು ಪುಷ್ಟಗುಚ್ಛದೊಂದಿಗೆ ಸ್ವಾಗತಿಸಿದರು. ಹಾಗೆಯೇ ಶಾಲೆಯ ಡೊಳ್ಳು ಕುಣಿತ ತಂಡ ಹಾಗೂ ತಮಟೆ ತಂಡಗಳೂ ಸಹ ತಮ್ಮ ಹಸ್ತ ಕೌಶಲ್ಯದ ಪ್ರತಿಭೆಯ ಮೂಲಕ ಮೆರವಣಿಗೆಗೆ ಮೆರಗನ್ನು ತಂದರು. ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ವಿಜೇತ ತಂಡದ ಎಲ್ಲಾ ಆಟಗಾರರಿಗೂ ಪ್ರಶಸ್ತಿಪತ್ರ ಮತ್ತು ಉಡುಗೊರೆ ಪ್ರದಾನ ಮಾಡಿದರು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ, ತಂಡದ ಸಾಂಘಿಕ ಪ್ರದರ್ಶನವನ್ನು ಪ್ರಶಂಸಿಸುವುದರೊಂದಿಗೆ, ತಂಡದ ತರಬೇತುದಾರ ಶೇಕ್ ಅಜ್ಜದ್, (ಎಐಎಫ್ಎಫ್ ಕೋಚ್) ಹಾಗೂ ಶಾಲೆಯ ಕ್ರೀಡೆಗಳ ಮೇಲ್ವಿಚಾರಕರಾದ ವೆಂಕಟರಮಣರವರು ತೋರಿದ ಅವಿರತ ಪ್ರಯತ್ನ ಮತ್ತು ಅರ್ಪಣಾ ಮನೋಭಾವವನ್ನು ಸ್ಮರಿಸಿದರು. ತಂಡಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ಶಾಲಾ ಶಿಕ್ಷಕಿ ವಿ.ಎಸ್.ಶ್ರೀಲೇಖಾ, ಕಾವ್ಯ ಲೋಕೇಶ್, ದೈಹಿಕ ಶಿಕ್ಷಕ ಸಿಎಚ್ಎಂ ವಿಕ್ರಮಜೀತ್ ಸಿಂಗ್ರನ್ನು ಪ್ರಶಂಸಿಸಿದರು. ಶಾಲೆಯ ಉಪಪ್ರಾಂಶುಪಾಲರಾದ ಸ್ಕ್ವಾಡರ್ನ್ ಲೀಡರ್ ಮೊಹಮ್ಮದ್ ಹಾಜಿಯವರು, ಶಾಲಾ ತಂಡದ ಸಾಧನೆಯನ್ನು ಶ್ಲಾಘಿಸಿದರು.










