
ಕೊಳ್ಳೇಗಾಲ ಜೂ.21 NEWS DESK : ಇಡೀ ವಿಶ್ವಕ್ಕೆ ಯೋಗವನ್ನು ಕೊಡುಗೆಯಾಗಿ ನೀಡಿ ಪರಿಚಯಿಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಕೊಳ್ಳೇಗಾಲದ ಕಾಮಗೆರೆ ಸಂತ ಫ್ರಾನ್ಸಿಸ್ ಕ್ಷೇವಿಯರ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಐಸಾಕ್ ರತ್ನಾಕರ್ ಅಭಿಪ್ರಾಯಪಟ್ಟರು. ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2014ರಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಎಲ್ಲಾ ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಜೂ.21 ನ್ನು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನಾಗಿ ವಿಶ್ವದಾದ್ಯಂತ ಆಚರಿಸಲು ಮನವಿ ಸಲ್ಲಿಸಿದ್ದರು. ಅದಕ್ಕೆ ಪೂರಕವಾಗಿ ವಿಶ್ವಸಂಸ್ಥೆಯು ಜೂ.21 ನ್ನು ವಿಶ್ವದಾದ್ಯಂತ ಯೋಗ ದಿನಾಚರಣೆ ಆಚರಿಸಲು ಕರೆ ನೀಡಿದೆ ಎಂದರು. ನಮ್ಮ ರಾಷ್ಟ್ರದಲ್ಲಿ 11ನೇ ವರ್ಷದ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದು, ಮಹತ್ವದ್ದಾಗಿದೆ ಎಂದರು. ಈ ಭಾರಿ ಯೋಗವು ಒಂದು ಭೂಮಿ ಹಾಗೂ ಒಂದು ಅರೋಗ್ಯಕ್ಕಾಗಿ ಎಂಬ ದ್ಯೇಯವಾಗಿದ್ದು, ಯೋಗದಿಂದ ಆರೋಗ್ಯದ ಸ್ಥಿರತೆ ಸಾಧ್ಯ ಎಂದು ಹೇಳಿದರು. ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕರಾದ ನವೀನ್ ಹಾಗೂ ಶಶಿಧರ್ ನೇತೃತ್ವದಲ್ಲಿ ಯೋಗಾಭ್ಯಾಸವು ಜರುಗಿತು. ಸೂರ್ಯ ನಮಸ್ಕಾರ, ಪದ್ಮಾಸನ, ವೃಕ್ಷಾಸನ, ತಾಡಸನ, ಮಕಾರಾಸನ ಸೇರಿದಂತೆ ವಿವಿಧ ಯೋಗ ಆಸನಗಳನ್ನು ಮಾಡಲಾಯಿತು. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಯೋಗಾಭ್ಯಾಸವನ್ನು ಮಾಡಿದರು. ಈ ಸಂದರ್ಭ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಅಂತೋಣಿರಾಜ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಕುಮಾರಿ, ಸಹ ಶಿಕ್ಷಕರುಗಳು, ಸಿಬ್ಬಂದಿಗಳು ಹಾಜರಿದ್ದರು.










