
ಮಡಿಕೇರಿ ಜು.29 NEWS DESK : ಅಸ್ಸಾಂ ರಾಜ್ಯಕ್ಕೆ ಸೇರಿದವರು ಎಂದು ಹೇಳಿಕೊಂಡು ನಕಲಿ ದಾಖಲೆಗಳ ಮೂಲಕ ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಬಾಂಗ್ಲಾ ದೇಶಿಗರನ್ನು ತಕ್ಷಣ ಗಡಿಪಾರು ಮಾಡಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಕಾರ್ಮಿಕರ ಸೋಗಿನಲ್ಲಿ ಅಸ್ಸಾಂ ಮೂಲದವರೆಂದು ಹೇಳಿಕೊಂಡು ಕೊಡಗು ಜಿಲ್ಲೆಯಲ್ಲಿ ಅನೇಕರು ನೆಲೆಸಿದ್ದಾರೆ. ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತ ಕಾರ್ಮಿಕರ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಅವುಗಳು ನಕಲಿಯಾಗಿದ್ದರೆ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನುಸುಳುಕೋರರಿಂದ ಗೋ ಸಾಗಾಟ, ಕಳ್ಳತನ, ಹಲ್ಲೆ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಮತ್ತು ಆಯಾ ಗ್ರಾಮ ಪಂಚಾಯ್ತಿಗಳು ಜಂಟಿಯಾಗಿ ತಮ್ಮ ವ್ಯಾಪ್ತಿಯಲ್ಲಿರುವ ಹೊರ ರಾಜ್ಯದ ಕಾರ್ಮಿಕರ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಅಕ್ರಮವಾಗಿ ಜಿಲ್ಲೆಯಲ್ಲಿ ನೆಲೆಸಿರುವವರನ್ನು ಗಡಿಪಾರು ಮಾಡಬೇಕು, ನಿರ್ಲಕ್ಷ್ಯ ವಹಿಸಿದರೆ ಮುಂದೊಂದು ದಿನ ಅನಾಹುತ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು. *ಮೂಡ ಮಾಹಿತಿ ನೀಡಲಿ* ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ(ಮೂಡ)ದಲ್ಲಿ ಭೂ ಪತಿವರ್ತನೆಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ. ಏಕರೆಯೊಂದರ ಭೂ ಪರಿವರ್ತನೆಗೆ ಲಕ್ಷಾಂತರ ವೆಚ್ಚವಾಗುತ್ತಿದೆ. ಇದನ್ನು ಸ್ಥಳೀಯರಿಂದ ಭರಿಸಲು ಸಾಧ್ಯವಾಗುತ್ತಿಲ್ಲ, ಈ ಹಿನ್ನೆಲೆ ಭೂ ಪರಿವರ್ತನೆಯ ಯಾವೆಲ್ಲ ಕೆಲಸಗಳಿಗೆ ಎಷ್ಟು ಶುಲ್ಕ ಎನ್ನುವುದನ್ನು ಸಂಬಂಧಪಟ್ಟವರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ತಿಳಿಸಿದರು. ಮೂಡವು ಸರ್ಕಾರದ ನಿಯಮಗಳಂತೆ ಪ್ರತಿ 5 ವರ್ಷಕ್ಕೊಮ್ಮೆ ನಡೆಸಬೇಕಾದ ಭೂ ಉಪಯೋಗ ವಲಯ(ಸಿಡಿಪಿ ಪ್ಲಾನ್)ವನ್ನು ಪರಿಷ್ಕರಿಸಬೇಕು ಮತ್ತು ತನ್ನ ವ್ಯಾಪ್ತಿಗೆ ಒಳಪಡುವ ಮಡಿಕೇರಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರೀನ್ ಜೋನ್ನಿಂದ ಎಲ್ಲೋ ಜೋನ್ ಆಗಿ ಪರಿವರ್ತನೆಯಾದ ಜಾಗದ ಬಗ್ಗೆ ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕೆಂದು ರವಿ ಕಾಳಪ್ಪ ಆಗ್ರಹಿಸಿದರು. *ರಾಜಾಸೀಟ್ ಗೆ ಗ್ಲಾಸ್ ಬ್ರಿಡ್ಜ್ ಬೇಡ* ಮಡಿಕೇರಿ ನಗರದಲ್ಲಿರುವ ಪ್ರಖ್ಯಾತ ಪ್ರವಾಸಿತಾಣ ರಾಜಾಸೀಟ್ ಉದ್ಯಾನವನ ವ್ಯಾಪಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಗ್ಲಾಸ್ ಬ್ರ್ರಿಡ್ಜ್’ ಯೋಜನೆಗೆ ಬಿಜೆಪಿಯ ವಿರೋಧವಿದೆ. ಯಾವುದೇ ಕಾರಣಕ್ಕೂ ‘ಗ್ಲಾಸ್ ಬ್ರ್ರಿಡ್ಜ್’ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ರವಿ ಕಾಳಪ್ಪ ತಿಳಿಸಿದರು. ಗ್ಲಾಸ್ ಬ್ರಿಡ್ಜ್ಗೆ ಸಂಬಂಧಿಸಿದಂತೆ ಯಾರ ಗಮನಕ್ಕೂ ತಾರದೆ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಈ ವಿಚಾರವನ್ನು ನಗರಸಭೆಯ ಗಮನಕ್ಕೂ ತಂದಿಲ್ಲ. ಗ್ಲಾಸ್ ಬ್ರಿಡ್ಜ್ನ ಸಾಧಕ ಬಾಧಕಗಳ ಬಗ್ಗೆ ಅಗತ್ಯ ಚರ್ಚೆಗಳು ಇಲ್ಲಿಯವರೆಗೆ ನಡೆದಿಲ್ಲ. ಈ ಯೋಜನೆ ಕೇವಲ ಹಣ ಮಾಡುವ ಒಂದು ದಂಧೆಯಷ್ಟೆ ಎಂದು ಆರೋಪಿಸಿದ ಅವರು, ಕಾನೂನು ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ಗ್ಲಾಸ್ ಬ್ರಿಡ್ಜ್ ನಿರ್ಮಿಸುವುದಾದರೆ ಅದಕ್ಕೆ ನಗರಸಭೆಯ ಒಪ್ಪಿಗೆಯ ಅಗತ್ಯವಿದೆ. ಹೀಗಿದ್ದೂ ನಗರಸಭೆಯ ಗಮನಕ್ಕೂ ತಾರದೆ ಗಾಜಿನ ಸೇತುವೆ ನಿರ್ಮಿಸುವ ಪ್ರಯತ್ನ ನಡೆಯುತ್ತಿದ್ದು, ಇದು ಸರಿಯಾದ ಕ್ರಮವಲ್ಲ ಎಂದರು.
ಬಿಜೆಪಿ ನಗರಾಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ ಗ್ಲಾಸ್ ಬ್ರಿಡ್ಜ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿಲನ್, ಜಿಲ್ಲಾ ವಕ್ತಾರರಾದ ತಳೂರು ಕಿಶೋರ್ ಕುಮಾರ್ ಹಾಗೂ ಬಿ.ಕೆ.ಅರುಣ್ ಕುಮಾರ್ ಉಪಸ್ಥಿತರಿದ್ದರು.








