
ನಾಪೋಕ್ಲು ಜು.31 NEWS DESK : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಚೇರಂಬಾಣೆ ಗೌಡ ಸಮಾಜ ಮತ್ತು ಗೌಡ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಅರೆ ಭಾಷೆಲಿ ಕಥೆ ಬರೆಮೋ ಒಂದು ದಿನದ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಪುಟಾಣಿ ಕೂಡಕಂಡಿ ಅನ್ವಿತ ಸುದೀಪ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ, ಸಮಾಜದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಒಂದು ಅಪರೂಪದ ಸುವರ್ಣ ಅವಕಾಶ. ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ನುಡಿದರು. ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಚೇರಂಬಾಣೆ ಗೌಡ ಸಮಾಜ ಕೇವಲ ಮದುವೆ ಸಮಾರಂಭಗಳಿಗೆ ಮೀಸಲಾಗಿರದೆ ಕಲೆ, ಕ್ರೀಡೆ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೂ ನೆರಳಾಗಬೇಕು ಎಂಬ ಉದ್ದೇಶದಿಂದ ಮಹಿಳಾ ಒಕ್ಕೂಟವನ್ನು ರಚಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ಇದು ಚೊಚ್ಚಲ ಕಾರ್ಯಕ್ರಮವಾಗಿದ್ದು, ಮುಂದೆ ಯುವ ಸಮೂಹಕ್ಕೆ ಹಾಗೂ ಮಹಿಳೆಯರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಅಕಾಡಮಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮವನ್ನು ಶ್ಲಾಘಿಸಿ ಎಂದ ಅವರು, ಮುಂದಿನ ಕಾರ್ಯಕ್ರಮಕ್ಕೆ ಅಕಾಡೆಮಿಯ ಸಹಕಾರವನ್ನು ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಸದಸ್ಯೆ ಚಂದ್ರಾವತಿ ಬಡ್ಡಡ್ಕ, ಮಕ್ಕಳನ್ನು ಭವಿಷ್ಯದ ಸಾಂಸ್ಕೃತಿಕ ರೂವಾರಿಗಳನ್ನಾಗಿಸಬೇಕು. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಿದರೆ ಅವರು ಮುಂದಿನ ತಲೆಮಾರಿಗೆ ಆಸ್ತಿಯಾಗುತ್ತಾರೆ. ಮಕ್ಕಳು ಮತ್ತು ಯುವ ಜನತೆಯಲ್ಲಿ ಅರೆಭಾಷೆ ಮತ್ತು ಸಂಸ್ಕೃತಿಯ ಒಲವು ಮೂಡಿಸಿ ಅದರಲ್ಲಿ ತೊಡಗಿಕೊಳ್ಳುವಂತೆ ಮಾಡಿದಾಗ ಅವರಿಂದ ಭಾಷೆಯ ಉಳಿವು ಮತ್ತು ಬೆಳವಣಿಗೆ ಸಾಧ್ಯ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಅಕಾಡೆಮಿ ಸದಸ್ಯ ವಿನೋದ್ ಮೂಡಗದ್ದೆ, ಮಕ್ಕಳ ಸ್ವರಚಿತ ಕತೆಗಳನ್ನು ಅಕಾಡೆಮಿಯು ಪ್ರಕಟಿಸುವ ತ್ರೈಮಾಸಿಕ ‘ಹಿಂಗಾರ’ದಲ್ಲಿ ಪ್ರಕಟಿಸುವುದಾಗಿ ನುಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಬಾರಿಯಂಡ ಜೋಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯ ಚಪ್ಪರದ ಕಂಬಗಳಿದ್ದಂತೆ. ಅವರಲ್ಲಿ ಸಾಹಿತ್ಯದ ಗಂಧ ತೀಡಿದಲ್ಲಿ ಮುಂದಕ್ಕೆ ಅವರು ಪ್ರತಿಭಾವಂತರಾಗುವಲ್ಲಿ ಸಂಶಯವಿಲ್ಲ ಎಂದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಡಾ.ಪುನೀತ್ ರಾಘವೇಂದ್ರ ಕುಂಟುಕಾಡು ಮಾತನಾಡಿ, ವಿದ್ಯಾರ್ಥಿಗಳಿಗೆ ಉಚ್ಛರಣೆಯಲ್ಲಿ ಸ್ಪಷ್ಟತೆ, ಕಥೆಯ ಸ್ವರೂಪ, ಶೀರ್ಷಿಕೆ, ಕಥಾವಸ್ತುಗಳ ಆಯ್ಕೆ ಕುರಿತು ಮನಮುಟ್ಟುವಂತೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಿಂದ ಸ್ವತಹ ಕಥೆಗಳನ್ನು ಬರೆಸಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಾಂಸನ ಪತ್ರ ನೀಡಲಾಯಿತು. ಮಳೆಯ ನಡುವೆಯೂ ವಿದ್ಯಾರ್ಥಿಗಳು ಆಸಕ್ತಿಯಿಂದ ಪೋಷಕರೊಂದಿಗೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗಳಿಸಿದರು. ಈ ಸಂದರ್ಭ ಗೌಡ ಸಮಾಜದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಕಾಳೇರಮ್ಮನ ರಶಿ ಅಶೋಕ್ ಪ್ರಾರ್ಥಿಸಿದರು, ಕೊಡಪಾಲು ತೀರ್ಥ ಗಣಪತಿ ಸ್ವಾಗತಿಸಿದರು, ಕೇಕಡ ಪೂಜಾ ನಾಗೇಂದ್ರ ವಂದಿಸಿದರು.
ವರದಿ : ದುಗ್ಗಳ ಸದಾನಂದ.









