
ಸುಂಟಿಕೊಪ್ಪ ಸೆ.9 NEWS DESK : ಮಾತೆ ಮರಿಯಮ್ಮ ನವರ ಜನ್ಮದಿನ (ಮೊಂತಿಪೆಸ್ತ್) ಅಂಗವಾಗಿ ಸಂತ ಅಂತೋಣಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ, ಅಡಂಬರ ದಿವ್ಯ ಬಲಿಪೂಜೆ, ಮೊಂಬತ್ತಿ ಹಿಡಿದು ಮಾತೆ ಮರಿಯಮ್ಮನವರ ಸ್ವರೂಪದೊಂದಿಗೆ ಮೆರವಣಿಗೆಯ ಮೂಲಕ ಸಂತ ಮೇರಿ ಶಾಲಾ ಆವರಣದಲ್ಲಿ ಇರಿಸಿ ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಪುಷ್ಪನಮನ ಸಲ್ಲಿಸಿ, ನೂತನ ಭತ್ತದ ತೆನೆಯನ್ನು ವಿತರಿಸುವ ಮೂಲಕ ಮಾತೆ ಮರಿಯಮ್ಮನವರ ಜಯಂತಿ ಸಂಭ್ರಮದಿಂದ ಆಚರಿಸಿದರು. ಮುಂಜಾನೆ ವಿಶೇಷ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಮಡಿಕೇರಿ ಸಂತ ಮೈಕಲರ ಶಾಲೆಯ ವ್ಯವಸ್ಥಾಪಕರಾದ ರೇ.ಫಾ.ಸಂಜಯ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾಧರ್ ವಿಜಯಕುಮಾರ್ ಅಡಂಬರ ದಿವ್ಯ ಬಲಿಪೂಜೆ, ಪ್ರಭೋದನೆಯನ್ನು ಸಮರ್ಪಿಸಿದರು. ಯೇಸುಕ್ರಿಸ್ತರ ತಾಯಿ ಮೇರಿ ಮಾತೆಯವರ ಜನ್ಮ ಜಯಂತಿ ಮತ್ತು ತೆನೆಹಬ್ಬ (ಮೊಂತಿಪೆಸ್ತ್) ಜಗತ್ತಿನಾದದ್ಯಾಂತ ಆಚರಿಸುತ್ತಾರೆ. ಇದಕ್ಕೆ ಪೂರ್ವಭಾವಿಯಾಗಿ ದೇವಾಲಯದಲ್ಲಿ 9 ದಿನಗಳ ಕಾಲ ವಿವಿಧ ಧರ್ಮ ಕೇಂದ್ರಗಳ ಧರ್ಮಗುರುಗಳಿಂದ ದಿವ್ಯಬಲಿಪೂಜೆ, ಪ್ರಭೋದನೆ ಹಾಗೂ ನೊವೇನಾ ಪ್ರಾರ್ಥನೆ ಪುಷ್ಪಾನಮನಗಳನ್ನು ಸಲ್ಲಿಸಲಾಯಿತು. ಹೊಸ ತೆನೆಗಳ ‘ಮೊಂತಿ ಪೆಸ್ತ್’ ಹಬ್ಬವನ್ನು ಎಲ್ಲಾ ದೇವಾಲಯಗಳಲ್ಲಿ ಸಾಮೂಹಿಕವಾಗಿ ಆಚರಿಸಿ ಪ್ರಾರ್ಥನೆ ಮಾಡಲಾಗುತ್ತದೆ. ಮನೆ ಮನೆಗಳಲ್ಲಿ ನೂತನವಾಗಿ ನೀಡಲಾದ ಭತ್ತದ ತೆನೆಗಳನ್ನು ತಾವು ತಯಾರಿಸುವ ಖಾದ್ಯ ಭೋಜನಗಳೊಂದಿಗೆ ಸೇರಿಸಿ ಸೇವಿಸುವುದು ಈ ಹಬ್ಬದ ವಾಡಿಕೆಯಾಗಿದೆ. ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಫಾಧರ್ ವಿಜಯಕುಮಾರ್ ಹಾಗೂ ಸಂತ ಅಂತೋಣಿ ಬಲಿಪೂಜೆ ಪ್ರವಚನಗಳನ್ನು ನೀಡಿದರಲ್ಲದೆ ಮೊಂತಿಪೆಸ್ತ್ ಅಂಗವಾಗಿ ನೂತನ ತೆನೆಗಳನ್ನು ಆರ್ಶಿವಚಿಸಿ ವಿತರಿಸಿದರು. ಕ್ರೈಸ್ತ ಬಾಂಧವರು ಮನೆ ಮನೆಗಳಿಂದ ತಂದಿದ ಬಗೆ ಬಗೆಯ ಪುಷ್ಪಗಳನ್ನು ಎಲ್ಲಾರೂ ಕನ್ಯಾಮಾತೆ ಮಯರಿಮ್ಮನವರಿಗೆ ಸಮರ್ಪಿಸಿ, ನಂತರ ಪರಸ್ಪರ ಒಬ್ಬರಿಗೊಬ್ಬರು ಮಾತೆ ಮರಿಯ್ಮನವರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬದ ಸಡಗರಕ್ಕೆ ಮುನ್ನುಡಿ ಇಟ್ಟರು.









