
ಮಡಿಕೇರಿ ಸೆ.9 NEWS DESK : ಮಡಿಕೇರಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳೆಂದರೆ ಅದು ಭೂಮಿಪೂಜೆಗಷ್ಟೇ ಸೀಮಿತ ಎನ್ನುವುದಕ್ಕೆ ನಗರದ ದಾಸವಾಳ ಕೆರೆಯ ಉದ್ಯಾನವನದ ಯೋಜನೆಯೇ ಅತ್ಯುತ್ತಮ ಸಾಕ್ಷಿಯಾಗಿದೆ. ಉದ್ಯಾನವನದ ಭಾಗ್ಯ ಕಾಣದ ಕೆರೆ ಜಾಗ ಇಂದು ಮತ್ತೆ ಕಸದ ಕೊಂಪೆಯಾಗಿ ಮಾರ್ಪಟ್ಟಿದೆ. ಸುಮಾರು 4 ವರ್ಷಗಳ ಹಿಂದೆ ನಗರದ ಹೃದಯ ಭಾಗದ 12ನೇ ವಾರ್ಡ್ನ ದಾಸವಾಳ ಕೆರೆ ಜಾಗದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಲೆಂದು ಅಂದಿನ ಬಿಜೆಪಿ ಸರಕಾರ ಭೂಮಿಪೂಜೆಯನ್ನು ನೆರವೇರಿಸಿತು. ಕಳೆದ ಹಲವು ದಶಕಗಳಿಂದ ಕೆರೆಯಾಗಿದ್ದ ಈ ಜಾಗ ನೀರು ಬತ್ತಿ ಹೋದ ಮೇಲೆ ವಾಹನಗಳ ನಿಲ್ದಾಣವಾಗಿ ಮಾರ್ಪಟ್ಟಿತ್ತು. ಕ್ರಮೇಣ ತ್ಯಾಜ್ಯ ವಿಲೇವಾರಿಯ ಪ್ರದೇಶವಾಗಿಯೂ ಅನಧಿಕೃತವಾಗಿ ಗುರುತಿಸಿಕೊಂಡಿತು.
ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಜನವಸತಿ ಇಲ್ಲದ ಸೂಕ್ತ ಜಾಗ ಗುರುತು ಮಾಡಲು ವಿಫಲವಾಗಿದ್ದ ಅಂದಿನ ಆಡಳಿತ ವ್ಯವಸ್ಥೆ ನಗರದ ಮಧ್ಯಭಾಗದ ದಾಸವಾಳ ಕೆರೆ ಪ್ರದೇಶದಲ್ಲೇ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗಿತ್ತು. ಆದರೆ ಈ ಪ್ರದೇಶದ ಸುತ್ತಮುತ್ತ ನೂರಾರು ಮನೆಗಳು, ಶಿಶು ವಿಹಾರ, ಆಸ್ಪತ್ರೆ ಮತ್ತು ಪ್ರಾರ್ಥನಾ ಮಂದಿರ ಇರುವ ಕಾರಣ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದರಿಂದ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಯ ಯೋಜನೆಯನ್ನು ಕೈಬಿಟ್ಟ ನಗರಸಭೆ ಉದ್ಯಾನವನ ಸ್ಥಾಪಿಸಲು ಮುಂದಾಯಿತು. ಅಲ್ಲದೆ ಸಚಿವರಾದಿಯಾಗಿ ಶಾಸಕರುಗಳು ಕೂಡ ಭೂಮಿಪೂಜೆ ನೆರವೇರಿಸಿ ಸುಂದರವಾದ ಉದ್ಯಾನವನದ ಕನಸು ಹುಟ್ಟು ಹಾಕಿದರು. ಭೂಮಿಪೂಜೆಯಾಗಿ 4 ವರ್ಷಗಳೇ ಕಳೆದಿದ್ದರೂ ಇಲ್ಲಿಯವರೆಗೆ ಯಾವುದೇ ಉದ್ಯಾನವನ ನಿರ್ಮಾಣವಾಗಿಲ್ಲ, ದಾಸವಾಳ ಕೆರೆ ಪ್ರದೇಶ ಇಂದಿಗೂ ಖಾಲಿ ಬಿದ್ದಿದೆ. *ನಾಯಿಗಳ ಹಾವಳಿ* ಇದೀಗ ಯಾವುದೇ ಅಭಿವೃದ್ಧಿ ಕಾಣದೆ ಖಾಲಿ ಇರುವ ದಾಸವಾಳ ಕೆರೆ ಜಾಗದಲ್ಲಿ ಕಾಡು ಬೆಳೆದಿದೆ. ನಗರಸಭೆಗೆ ಸೇರಿದ ಕಸ ಮತ್ತು ಶೌಚಾಲಯದ ತ್ಯಾಜ್ಯ ವಿಲೇವಾರಿಯ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ಅಲ್ಲದೆ ಕಸದ ರಾಶಿಯನ್ನು ಕೂಡ ಹಾಕಲಾಗುತ್ತಿದೆ. ಇದರಿಂದ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಕಸದ ರಾಶಿಯನ್ನು ಎಳೆದಾಡುತ್ತಿರುವ ನಾಯಿಗಳಿಂದ ಅಶುಚಿತ್ವದ ವಾತಾವರಣ ಸೃಷ್ಟಿಯಾಗಿದೆ. ಪಾದಾಚಾರಿಗಳಲ್ಲಿ ಆತಂಕವನ್ನು ಸೃಷ್ಟಿಸುತ್ತಿರುವ ನಾಯಿಗಳು ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ತಕ್ಷಣ ಉದ್ಯಾನವನ ನಿರ್ಮಾಣಕ್ಕೆ ನಗರಸಭೆ ಮುಂದಾಗಬೇಕೆಂದು ಒತ್ತಾಯಿಸಿರುವ ಸಾರ್ವಜನಿಕರು, ದಾಸವಾಳ ಕೆರೆ ಜಾಗದ ಅಶುಚಿತ್ವದ ವಾತಾವರಣ ಹೀಗೆ ಮುಂದುವರಿದರೆ ಆಸ್ಪತ್ರೆ, ಪ್ರಾರ್ಥನಾ ಮಂದಿರ, ಶಿಶು ವಿಹಾರ ಮಾತ್ರವಲ್ಲದೆ ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗಲಿದೆ ಎಂದು ಗಮನ ಸೆಳೆದಿದ್ದಾರೆ. *ಅನುದಾನದ ಕೊರತೆ* ದಾಸವಾಳ ಕೆರೆ ಜಾಗ ಒತ್ತುವರಿಯಾಗುತ್ತಿದ್ದ ಹಿನ್ನೆಲೆ ಮೂರು ವರ್ಷಗಳ ಹಿಂದೆ ರೂ.17 ಲಕ್ಷ ವೆಚ್ಚದಲ್ಲಿ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ. ಉದ್ಯಾನವನ ನಿರ್ಮಾಣಕ್ಕಾಗಿ 14 ಲಕ್ಷ ರೂ.ಗಳ ಯೋಜನೆಯನ್ನು ರೂಪಿಸಲಾಗಿದ್ದು, ಅನುದಾನ ಬಿಡುಗಡೆಯಾಗಬೇಕಾಗಿದೆ. ಮುಂದಿನ ನಗರಸಭೆಯ ಸಭೆಯಲ್ಲಿ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯಲಾಗುವುದು. ನಂತರ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು, ಮುಂದಿನ ವರ್ಷ ಮಾರ್ಚ್ ತಿಂಗಳಿನಲ್ಲಿ ಕಾಮಗಾರಿ ಆರಂಭಗೊಳ್ಳಬಹುದು. (ಎಂ.ಎಂ.ಬಷೀರ್ ಅಹಮ್ಮದ್, ನಗರಸಭಾ ಸದಸ್ಯರು, 12 ನೇ ವಾರ್ಡ್)









