
ಗೋಣಿಕೊಪ್ಪ ನ.14 NEWS DESK : ಭಾರತದ ಮೊದಲ ಪ್ರಧಾನಿ ನೆಹರು ಅವರ ಜನ್ಮ ದಿನವನ್ನು ಗೋಣಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಂಭ್ರಮವಾಗಿಸಿದರು. ಶಾರದ ಪೂಜೆ ನೆರವೇರಿಸುವ ಮೂಲಕ ವಿದ್ಯೆಗಾಗಿ ಪ್ರಾರ್ಥಿಸಿದ ವಿದ್ಯಾರ್ಥಿಗಳು, ನಂತರ ಶಾಲೆಯಲ್ಲಿ ಆಯೋಜಿಸಿದ ಜಾದು ಪ್ರದರ್ಶನವನ್ನು ಕಣ್ತುಂಬಿ ಕೊಂಡು ನೆಹರು ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯಾಗಿ ಅರ್ಥಪೂರ್ಣಗೊಳಿಸಿದರು. ನಂತರ ಪೆÇೀಷಕರ ಮಹಾಸಭೆ ಶಾಲೆಯ ಮೇಲುಸ್ತುವರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಭಾಗವಹಿಸಿದರು, ಈ ಸಂದರ್ಭ ಮಾತನಾಡಿದ ಅವರು, ಚಾಚಾ ನೆಹರು ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ಬಹು ಹೆಮ್ಮೆಯ ವಿಚಾರ. ಸರ್ಕಾರಿ ಶಾಲೆಯಲ್ಲಿ ಓದಿದ ಬಹುತೇಕ ವಿದ್ಯಾರ್ಥಿಗಳು, ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಂತಹ ಸ್ಪೂರ್ತಿದಾಯಕ ನಡೆಗಳನ್ನು ಉತ್ತೇಜಿಸಿ, ಮಕ್ಕಳು ದೇಶಕ್ಕಾಗಿ ಸೇವಿ ಸಲ್ಲಿಸುವಂತ, ದೇಶಭಕ್ತಿ ಮತ್ತು ಆತ್ಮವಿಶ್ವಾಸ ಬೆಳೆಸಿ ಓದಿನ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಖಾಸಗಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು, ಬಹುತೇಕ ಖಾಸಗಿ ಸಂಸ್ಥೆಯೊಳಗೆ ಕೆಲಸ ನಿರ್ವಹಿಸಲು ಉತ್ಸಾಹಕರಾಗಿರುತ್ತಾರೆ. ಆದರೆ, ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಮುಕ್ತ ಅವಕಾಶಗಳು ದೊರೆಯುತ್ತದೆ. ಹೀಗಾಗಿ, ಉತ್ತಮ ಹುದ್ದೆಗಳನ್ನು ಅಲಂಕರಿಸುವ ಮೂಲಕ ಈ ಸಮಾಜದ ಕರ್ತವ್ಯವನ್ನು ಎತ್ತಿ ಹಿಡಿಯಬೇಕು ಎಂದು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕ ಹೆಚ್.ಕೆ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಭದ್ರತೆಯ ಬಗ್ಗೆ ಮತ್ತು ಹೆಣ್ಣು ಮಕ್ಕಳ ಸುರಕ್ಷತೆಗೆ ಇರುವ ಕಾನೂನು ವ್ಯವಸ್ಥೆಗಳ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಿದರು. ವಿದ್ಯಾರ್ಥಿಗಳಲ್ಲಿ ಉತ್ತಮ ನಡೆ ನುಡಿಗಳು ಬೆಳೆಸಲು ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು ಸರ್ಕಾರಿ ಶಾಲೆಯಲ್ಲಿ ಸಿಗುವ ಸವಲತ್ತುಗಳು, ನುರಿತ ಶಿಕ್ಷಕರ ಶಿಕ್ಷಣದ ವ್ಯವಸ್ಥೆಗಳನ್ನು ಪೋಷಕರಿಗೆ ತಿಳಿಸಿಕೊಡಲಾಯಿತು. ಖಾಸಗಿ ಶಾಲೆಯ ಶಿಕ್ಷಕರಿಗಿಂತ ಸರಕಾರಿ ಶಾಲೆಯ ಶಿಕ್ಷಕರು ಉತ್ತಮ ತರಬೇತಿಯನ್ನು ಹೊಂದಿ ಮಕ್ಕಳ ಶೈಕ್ಷಣಿಕಕ್ಕೆ ಪೂರಕವಾದ ಬೋಧನೆಗೆ ಸಿದ್ದರಾಗಿರುತ್ತಾರೆ. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಜೀವನವನ್ನು ಎದುರಿಸುವ ಆತ್ಮವಿಶ್ವಾಸ ಬಳಸಿಕೊಂಡಿರುತ್ತಾರೆ ಅಂತಹ ವಾತಾವರಣವನ್ನು ಶಾಲೆಯ ಶಿಕ್ಷಕರು ಕಟ್ಟಿಕೊಡುತ್ತಾರೆ. ಸರಕಾರಿ ಶಾಲೆಯ ಮೇಲೆ ಭರವಸೆಯನಿಟ್ಟು ಮಕ್ಕಳನ್ನು ದಾಖಲಿಸುವ ಮೂಲಕ ಮಕ್ಕಳ ವೈಯಕ್ತಿಕ ಪ್ರಗತಿಯ ಕಡೆ ಪೋಷಕರ ಪ್ರೋತ್ಸಹ ಸಿಗಬೇಕು ಎಂದು ಮನವಿ ಮಾಡಿದರು. ಶಾಲೆಯ ಅಭಿವೃದ್ಧಿ ಸಮಿತಿ ಜತೆಗೆ ಪೋಷಕರು ಶಾಲೆಯ ಕಡೆ ಮಕ್ಕಳನ್ನು ಕರೆತರಲು ಮತ್ತು ಶೈಕ್ಷಣಿಕ ವರ್ಷಕ್ಕೆ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಜನರಲ್ಲಿ ಜಾಗೃತಿ ಕ್ರಮ ಕೈಗೊಳ್ಳಬೇಕು ಈ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಕ್ರಮ ತೆಗೆದುಕೊಳ್ಳಬೇಕು ಎಂಬಂತಹ ಹಲವಾರು ಮಾಹಿತಿಗಳನ್ನು ಹಂಚಿಕೊಂಡರು. ಶಿಕ್ಷಕರುಗಳಾದ ಬಿ.ಆರ್ ಸತೀಶ್ ಹಾಗೂ ಸ್ನೇಹ ಕಾವೇರಮ್ಮ ಪ್ರೋಜೆಕ್ಟರ್ ಮೂಲಕ ಪೋಷಕರಿಗೆ ಶಾಲೆಯ ಪ್ರಗತಿಗಳ ಬಗ್ಗೆ ತಿಳಿಸಿಕೊಟ್ಟರು. ಸಭೆಯ ನಂತರ ವಿದ್ಯಾರ್ಥಿಗಳಿಗೆ ಗೋಣಿಕೊಪ್ಪ ಶಿವಾಜಿ ಯುವ ಸೇನೆ ಸಮಿತಿ ವತಿಯಿಂದ ಸಿಹಿ ಹಚ್ಚಲಾಯಿತು. ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕುಣಿಯಂಡ ಬೋಜಮ್ಮ, ಬಿ ಎನ್ ಪ್ರಕಾಶ್, ಶಾಲೆ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ದಿವ್ಯ ರೈ, ಶಾಲೆಯ ಸಮೂಹ ಸಂಪನ್ಮೂಲ ವ್ಯಕ್ತಿ ರಾಧಾ, ಶಾರದಾ ಪೂಜೆ ನೆರವೇರಿಸಿದ ಅರ್ಚಕ ಪ್ರಸಾದ್, ಜಾದು ಕಲಾವಿದ, ಹಾಗೂ ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.









