
ಸುಂಟಿಕೊಪ್ಪ ನ.15 NEWS DESK : ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಪೋಷಕರು, ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ಸಂತೆ ನಡೆಯಿತು. ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆದ ಪೋಷಕರ ಮತ್ತು ಶಿಕ್ಷಕರ ಮಹಾಸಭೆಯಲ್ಲಿ ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಬಾಲಕೃಷ್ಣ ಅವರು ಮಾತನಾಡಿ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಮಕ್ಕಳ ವಿದ್ಯಾರ್ಜನೆಗೆ ಪರಿಶ್ರಮ ವಹಿಸಿದರೆ ಸಾಲದು, ಮಕ್ಕಳ ವ್ಯಾಸಂಗದ ಸಂದರ್ಭದಲ್ಲಿ ಪ್ರಶಾಂತ ವಾತಾವರಣವನ್ನು ಒದಗಿಸಿಕೊಡಬೇಕೆಂದರು. ಆಗ ಮಕ್ಕಳ ಭವಿಷ್ಯವು ಉತ್ತಮವಾಗಿರಲು ಸಾಧ್ಯ ಎಂದರು. ಕಾಲ ಕಲಾಕ್ಕೆ ಪೋಷಕರು ಶಿಕ್ಷಕರೊಂದಿಗೆ ನಿಕಟ ಸಂಪರ್ಕ ಹಾಗೂ ಶಾಲೆಗಳಿಗೆ ಭೇಟಿ ನೀಡುವುದರಿಂದ ಮಕ್ಕಳ ಕಲಿಕೆಯ ಪ್ರಮಾಣವು ಅಭಿವೃದ್ಧಿಗೊಳ್ಳಲು ಸಹಕಾರಿಯಾಗುತ್ತದೆ ಎಂದು ಬಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು. :: ಮಕ್ಕಳ ಸಂತೆ :: ಇದೇ ಸಂದರ್ಭ ಶಾಲೆಯಲ್ಲಿ ಮಕ್ಕಳ ಸಂತೆ ಗಮನ ಸೆಳೆಯಿತು. ನಿತ್ಯ ಪಾಠ ಪ್ರವಚನದ ಶಬ್ಧ ಕೇಳಿ ಬರುತ್ತಿದ್ದ ಶಾಲೆಯ ಆವರಣದಲ್ಲಿ ಮಕ್ಕಳ ವ್ಯವಹಾರಿಕ ಜ್ಞಾನವನ್ನು ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ಮಕ್ಕಳು ಮನೆ ಹಾಗೂ ತೋಟಗಳಲ್ಲಿ ಬೆಳೆದು ನಿಂತಿದ್ದ ಸೊಪ್ಪು, ಕಾಯಿ, ತರಕಾರಿಗಳು, ಪಾನಿಪೂರಿ, ಚುರುಮುರಿ ಸೇರಿದಂತೆ ಇನ್ನಿತರ ಖ್ಯಾದ್ಯವಸ್ತುಗಳನ್ನು ಮಾರಾಟ ಮಾಡಿದರು. ಮಕ್ಕಳು ಗ್ರಾಹಕರನ್ನು ಆಕರ್ಷಿತವಾಗಿ ತಮ್ಮಡೆಗೆ ಸೆಳೆಯುತ್ತ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿರಿಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಲಾ ಸಹಶಿಕ್ಷಕರುಗಳಾದ ಚಿತ್ರ, ಲಿಯೋನಾ, ಸುನಂದ, ಪ್ರಕಾಶ, ಶಾಂತ ಹೆಗ್ಡೆ, ಜಯಶ್ರೀ ಪ್ರಥಮದರ್ಜೆ ಸಹಾಯಕಿ ಯಶೋಧ ಮತ್ತು ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಇದ್ದರು.









