ಮಡಿಕೇರಿ ನ.17 NEWS DESK : ಕಲೆ, ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಅಭಿರುಚಿ ಹೆಚ್ಚಿಸಬೇಕು ಮತ್ತು ಪರಿಸರದ ಕುರಿತು ಜಾಗೃತಿ ಮೂಡಿಸಬೇಕು ಎಂದು ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷರಾದ ಶ್ರೀಸದಾಶಿವ ಸ್ವಾಮಿ ಕರೆ ನೀಡಿದ್ದಾರೆ. ಮಡಿಕೇರಿ ನಗರದ ಮಹದೇವಪೇಟೆಯ ಎಸ್.ಎಸ್ ಆಸ್ಪತ್ರೆ ಮತ್ತು ಆರ್ಕೆ ಲ್ಯಾಬ್ ವತಿಯಿಂದ ವಿದ್ಯಾರ್ಥಿಗಳಿಗಾಗಿ 3ನೇ ವರ್ಷದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ 3 ವಿಭಾಗಗಳಲ್ಲಿ ನಡೆಯಿತು. ಎಎಲ್ಜಿ ಕ್ರೆಸೆಂಟ್ ಶಾಲೆಯಲ್ಲಿ ನಡೆದ ಸ್ಪರ್ಧೆಯ ಸಮಾರೋಪ ಮತ್ತು ಬಹುಮಾನ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಇಂತಹ ಕಾರ್ಯಚಟುವಟಿಕೆಗಳಿಂದ ಮಕ್ಕಳಲ್ಲಿ ಕಲೆ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿ ಹೆಚ್ಚಾಗುತ್ತದೆ, ಅಲ್ಲದೆ ಪ್ರಕೃತಿಯ ಮೇಲೆ ಪ್ರೀತಿ ಮೂಡುತ್ತದೆ ಎಂದರು. ದಿನದಿಂದ ದಿನಕ್ಕೆ ಪ್ರಕೃತಿಯಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ, ಅದೇ ರೀತಿ ನಮ್ಮ ಜೀವನ ಶೈಲಿಯೂ ಬದಲಾವಣೆಯಾಗುತ್ತಿದೆ. ಅದು ಸಹಜ ಪ್ರಕ್ರಿಯೆ, ಆದರೆ ಬದಲಾವಣೆಗಳು ಮಾದರಿಯುಕ್ತವಾದಾಗ ಮಾತ್ರ ಒಂದು ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು. ನಾವು ಪಡೆದ ಶಿಕ್ಷಣದಿಂದ ಸಮಾಜದಲ್ಲಿ ಉತ್ತಮ ಬದಲಾವಣೆಗಳಾಗಬೇಕು ಮತ್ತು ಸಾಮಾಜಿಕ ಸುಧಾರಣೆಗಳಾಗಬೇಕು ಎಂದು ಶ್ರೀಸದಾಶಿವ ಸ್ವಾಮಿಗಳು ಹೇಳಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಗರಸಭಾ ಅಧ್ಯಕ್ಷರಾದ ಪಿ.ಕಲಾವತಿ ಅವರು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಮುಂದೆಯೂ ಉತ್ತಮ ಕಾರ್ಯಕ್ರಮಗಳನ್ನು ನಡೆಸಿದರೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ಎಸ್ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಶಿಲ್ಪಾ ಸತೀಶ್ ಮಾತನಾಡಿದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಪ್ರತಿವರ್ಷ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಇನ್ನು ಮುಂದೆಯೂ ವೈವಿಧ್ಯಮಯ ಕಾರ್ಯಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಗುವುದು ಎಂದರು. ಪೋಷಕರು ಹಾಗೂ ವಿದ್ಯಾರ್ಥಿಗಳು ನಿರಂತರವಾಗಿ ನಮ್ಮ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಮುಂದಿನ ಯೋಜನೆಗಳಿಗೆ ಸ್ಫೂರ್ತಿ ತುಂಬುತ್ತಿದ್ದಾರೆ. ಇವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್, ಹಿರಿಯ ವೈದ್ಯ ಡಾ.ಹೆಚ್.ವಿ.ದೇವದಾಸ್, ಕಾರ್ಯನಿರ್ವಾಹಕ ವ್ಯವಸ್ಥಾಪಕ ಡಾ.ಸತೀಶ್, ಕ್ರೆಸೆಂಟ್ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಗೂ ಆರ್.ಕೆ ಲ್ಯಾಬ್ ನ ನಿರ್ದೇಶಕ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
*ಚಿತ್ರಕಲಾ ಸ್ಪರ್ಧೆಯ ವಿಜೇತರು*
*ಮೊದಲನೇ ವಿಭಾಗ*
ಎಲ್ಕೆಜಿ ಯಿಂದ 1ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆ
*ವಿಷಯ : ನಮ್ಮ ಶಾಲೆಯ ಆಟದ ಮೈದಾನ* ಪ್ರಥಮ ಬಹುಮಾನ ಮಡಿಕೇರಿಯ ಯುರೋ ಕಿಡ್ಸ್ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಜಾಗೃತಿ ಎ. (ರೂ.2000), ದ್ವಿತೀಯ ಸಂತ ಜೋಸೆಫರ ಶಾಲೆಯ 1ನೇ ತರಗತಿಯ ವಿದ್ಯಾರ್ಥಿನಿ ಬ್ರಿಯಾ ಕೆ.ಪಿ (ರೂ.1500), ತೃತೀಯ ಬಹುಮಾನ ಸಂತ ಜೋಸೆಫರ ಶಾಲೆಯ 1ನೇ ತರಗತಿಯ ವಿದ್ಯಾರ್ಥಿ ಜಗನ್ ರಾವ್ ಎಂ.ಸಿ (ರೂ.1000)
*2ನೇ ವಿಭಾಗ*
2ನೇ ತರಗತಿಯಿಂದ 6ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆ *ವಿಷಯ : ಮಳೆಗಾಲದಲ್ಲಿ ಕೊಡಗು* ಪ್ರಥಮ ಬಹುಮಾನ ಸಂತ ಜೋಸೆಫರ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ರಚಿತ ವೈ.ಹೆಚ್ (ರೂ.3500), ದ್ವಿತೀಯ ಬಹುಮಾನ ಸಂತ ಮೈಕಲರ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ತುಷಿಕಾ (ರೂ.3000), ತೃತೀಯ ಬಹುಮಾನ ಸಂತ ಜೋಸೆಫರ ಶಾಲೆಯ 4ನೇ ತರಗತಿಯ ವಿದ್ಯಾರ್ಥಿನಿ ಶಿವಾನಿ ಎಂ.ಬಿ (ರೂ.2500),
*3ನೇ ವಿಭಾಗ*
7ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ನಡೆದ ಸ್ಪರ್ಧೆ
*ವಿಷಯ : ನೀರಿಗಾಗಿ ಹಾಹಾಕಾರ*
ಪ್ರಥಮ ಬಹುಮಾನ ಸಂತ ಮೈಕಲರ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪಿ.ಎನ್.ಸಚಿನ್ (ರೂ.5000), ದ್ವಿತೀಯ ಬಹುಮಾನ ಸಂತ ಜೋಸೆಫರ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹರ್ಷಿತ್ ಪೊನ್ನಪ್ಪ (ರೂ.4500), ತೃತೀಯ ಬಹುಮಾನ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿ ಮೋಹಿತ್ ಟಿ.ಎಸ್ (ರೂ.4000) ಪಡೆದುಕೊಂಡರು. ಎಲ್ಲಾ ವಿಜೇತರಿಗೆ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಯಿತು. ತೀರ್ಪುಗಾರರಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಕಲಾವಿದೆ ಕುಮಾರಿ ಅಕ್ಷತಾ ಕಾರ್ಯನಿರ್ವಹಿಸಿದರು.










