
ಮಡಿಕೇರಿ ನ.22 NEWS DESK : ಸಾಹಿತ್ಯ ಲೋಕದಲ್ಲಿ ಅನುವಾದ ಕೃತಿಗೆ ಅದರದ್ದೇ ಆದ ಮಹತ್ವವಿದೆ. ಅನುವಾದ ಕೃತಿ ಎರಡು ಕಾಲಘಟ್ಟ, ಸಂಸ್ಕøತಿ ಮತ್ತು ಎರಡು ಭಾಷೆಗಳ ನಡುವೆ ಸಂಪರ್ಕ ಸೇತುವೆಯ ರಾಯಭಾರಿಯಾಗಿ ಕೆಲಸ ಮಾಡುತ್ತದೆ ಎಂದು ಲೇಖಕಿ ಐಚಂಡ ರಶ್ಮಿ ಮೇದಪ್ಪ ಅಭಿಪ್ರಾಯಪಟ್ಟಿದ್ದಾರೆ. ಕೊಡವ ಮಕ್ಕಡ ಕೂಟದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ತಾವು ರಚಿಸಿರುವ “ಕೊಡಗ್ ಸಂಸ್ಥಾನ v/s ಬ್ರಿಟಿಷ್ ಸಾಮ್ರಾಜ್ಯ” ಕೊಡವ ಅನುವಾದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೂಲ ಕೃತಿಯ ಲೇಖಕರು ಹಾಗೂ ಅನುವಾದಕರಿಗೂ ಮಹತ್ವ ಇದೆ ಎಂಬುವುದನ್ನು ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ದೀಪಭಾಸ್ತಿಯವರು ತೋರಿಸಿಕೊಟ್ಟಿದ್ದಾರೆ. ಅನುವಾದ ಎಂದರೆ ಮರುಸೃಷ್ಟಿ ಎಂದರ್ಥ, ಮೂಲ ಕೃತಿಯ ತಿರುಳನ್ನು ನಾವು ಬೇರೆ ಬೇರೆ ಭಾಷೆಗಳಲ್ಲಿ ಹೊರತಂದಾಗ ಅದು ಹೆಚ್ಚು ಹೆಚ್ಚು ಜನರನ್ನು ತಲುಪುತ್ತದೆ ಮತ್ತು ಕೃತಿಗೂ ಉತ್ತಮವಾದ ಸ್ಪಂದನೆ ದೊರೆಯುತ್ತದೆ. ಆದರೆ ಅನುವಾದ ಮಾಡುವವರಿಗೆ ಎರಡೂ ಭಾಷೆಗಳ ಮೇಲೆ ಹಿಡಿತವಿರಬೇಕು ಮತ್ತು ಮೂಲಕೃತಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅನುವಾದ ಕೃತಿಗೆ ಪ್ರತಿಯೊಂದು ಕಾಲಘಟ್ಟದಲ್ಲೂ ಮಹತ್ವವಿದೆ, ಕೊಡವ ಭಾಷೆಯಲ್ಲಿ ಅನುವಾದ ಕೃತಿ ಬೆರಳೆಣಿಕೆಯಷ್ಟಿದ್ದರೂ ಕೊಡಗಿನ ಸಾಕಷ್ಟು ಮಂದಿ ಅನುವಾದ ಕೃತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕೊಡವ ಸಾಹಿತ್ಯ ಲೋಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನುವಾದ ಸಾಹಿತ್ಯಗಳು ಬರುವಂತಾಗಬೇಕು ಎಂದರು. ಹರದಾಸ ಅಪ್ಪಚ್ಚ ಕವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ‘ಕೊಡವ ಭಾಷೆಗೆ ತರ್ಜುಮೆ’ ಎಂಬ ವಿಷಯದ ಕುರಿತು ಮಾತನಾಡಲು ಅವಕಾಶ ದೊರೆತಾಗ ತಾನು ಕೃತಿಯನ್ನು ಕೊಡವ ಭಾಷೆಗೆ ತರ್ಜುಮೆ ಮಾಡುವ ಬಗ್ಗೆ ಚಿಂತನೆ ಹುಟ್ಟಿ ಅದರ ಪರಿಣಾಮವೇ ಪುಸ್ತಕವನ್ನು ಹೊರತರಲು ಸಾಧ್ಯವಾಗಿದೆ. ಕೊಡವ ಭಾಷೆಯಲ್ಲಿ ಕೆಲವು ಪದಗಳ ಕೊರತೆ ಇದ್ದು, ಅವುಗಳಿಗೆ ಕನ್ನಡ ಪದಗಳನ್ನೇ ಬಳಕೆ ಮಾಡಲಾಗಿದೆ ಮತ್ತು ಒಂದು ತಿಂಗಳಿನಲ್ಲಿ ಪುಸ್ತಕಗಳನ್ನು ಹೊರತರಲಾಗಿದೆ ಎಂದು ತಿಳಿಸಿದ ರಶ್ಮಿ ಮೇದಪ್ಪ, ಪುಸ್ತಕ ಬಿಡುಗಡೆಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು. ಕೊಡಗ್ ಸಂಸ್ಥಾನ v/s ಬ್ರಿಟಿಷ್ ಸಾಮ್ರಾಜ್ಯ ಪುಸ್ತಕವು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿಗೆ ಭಾಜನರಾದ ಮೂಕೊಂಡ ನಿತಿನ್ ಕುಶಾಲಪ್ಪ ಅವರು ಬರೆದ “Kodagu Principality v/s British Empire” ಇಂಗ್ಲೀಷ್ ಪುಸ್ತಕವನ್ನು ಕೊಡವ ಭಾಷೆಗೆ ತರ್ಜುಮೆ ಮಾಡಿದ್ದು, ಇದು ನನ್ನ 5ನೇ ಪುಸ್ತಕ ಎಂದು ತಿಳಿಸಿದರು.
ಈ ಪುಸ್ತಕದಲ್ಲಿ ಕೊಡಗಿನ ಇತಿಹಾಸ, ಬ್ರಿಟಿಷರ ಕಾಲದ ವಾಸ್ತವ ಸ್ಥಿತಿ, ಅಧಿಕಾರ ದಾಹದಿಂದ ನಿರ್ನಾಮವಾದ ರಾಜರು, ಬ್ರಿಟಿಷರ ವಿರುದ್ಧ ವೀರಾವೇಷದಲ್ಲಿ ಹೋರಾಡಿದ ಕೊಡವರ ಯುದ್ಧ ಕೌಶಲ್ಯ, ಬೇಟೆಗೆ ತೆರಳುವ ಪ್ರಸಂಗ ಮತ್ತಿತರ ವಿಚಾರಗಳನ್ನು ಕಣ್ಣು ಕಟ್ಟುವ ರೀತಿಯಲ್ಲಿ ವಿವರಿಸಲಾಗಿದೆ ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ, ಮುಂದಿನ ವರ್ಷ ಫೆ.13 ರಂದು ಕೊಡವ ಮಕ್ಕಡ ಕೂಟದ 13ನೇ ವರ್ಷಾಚರಣೆಯ ಪ್ರಯುಕ್ತ ಎರಡು ಪುಸ್ತಕಗಳನ್ನು ಹೊರ ತರಲು ನಿರ್ಧರಿಸಲಾಗಿದೆ. ಇನ್ನೂ ಹಲವು ಪುಸ್ತಕಗಳು ಮುದ್ರಣ ಹಂತದಲ್ಲಿವೆ. ಕೂಟದ ವತಿಯಿಂದ ದಾಖಲೀಕರಣ ಪುಸ್ತಕಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಆಸಕ್ತರಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದರು. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಈವರೆಗೆ ಜಿಲ್ಲೆಯ ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಹಲವು ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಮಹಾತ್ವಾಕಾಂಕ್ಷೆಯ 121 ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಲಾಗಿದೆ ಎಂದು ತಿಳಿಸಿದರು. ಕೊಡವ ಮಕ್ಕಡ ಕೂಟ ಸರಕಾರದ ಯಾವುದೇ ಅನುದಾನವನ್ನು ಪಡೆಯದೆ ಅತೀ ಹೆಚ್ಚು ಪುಸ್ತಕ ಪ್ರಕಟಿಸಿರುವ ಕೊಡಗಿನ ಏಕೈಕ ಸಂಸ್ಥೆಯಾಗಿದೆ. ಪುಸ್ತಕವನ್ನು ಮಾರಾಟ ಮಾಡದೆ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಓದುಗರಿಗೆ ಉಚಿತವಾಗಿ ಪುಸ್ತಕಗಳನ್ನು ತಲುಪಿಸುತ್ತಿದ್ದೇವೆ ಎಂದರು. “Kodagu Principality v/s British Empire” ಇಂಗ್ಲೀಷ್ ಪುಸ್ತಕದ ಮೂಲ ಲೇಖಕರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಮೂಕೊಂಡ ನಿತಿನ್ ಕುಶಾಲಪ್ಪ ಮಾತನಾಡಿ, ಅನುವಾದ ಎಂಬುವುದು ಸುಲಭದ ಮಾತಲ್ಲ. ಆದರೂ ಪುಸ್ತಕದ ಮೂಲ ಕೃತಿಗೆ ಚ್ಯುತಿ ಬಾರದ ರೀತಿಯಲ್ಲಿ ಪುಸ್ತವನ್ನು ಕೊಡವ ಭಾಷೆಗೆ ತರ್ಜಮೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕೃತಿಗಳು ಹೊರಬರುವಂತಾಗಲಿ ಎಂದು ಶುಭ ಹಾರೈಸಿದರು.
ಪುಸ್ತಕದ ಮೂಲ ಕೃತಿ ರಚನೆಯ ಸಂದರ್ಭ ಅನೇಕ ಗ್ರಂಥಾಲಯಗಳು ಹಾಗೂ ವಿವಿಧಡೆಯಿಂದ ಸಂಶೋಧನೆ ನಡೆಸಲಾಗಿದೆ. ಇತಿಹಾಸ ಮಾತ್ರವಲ್ಲದೆ, ಮಕ್ಕಳ ಕಥೆಗಳ ಪುಸ್ತಕವನ್ನು ಬರೆಯಲಾಗಿದೆ. ಇದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪ್ರಶಸ್ತಿ ದೊರೆತ್ತಿರುವುದಾಗಿ ತಿಳಿಸಿದರು.
ನಿವೃತ್ತ ಸೇನಾಧಿಕಾರಿ ಕರ್ನಲ್ ಕೊಡಂದೇರ ಉತ್ತಯ್ಯ ಅವರು “ಕೊಡಗ್ ಸಂಸ್ಥಾನ v/s ಬ್ರಿಟಿಷ್ ಸಾಮ್ರಾಜ್ಯ” ಕೊಡವ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿ ಬರಹಗಾರರಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಮೂಕೊಂಡ ಪುಷ್ಪ ದಮಯಂತಿ ಪೂಣಚ್ಚ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಉಪಸ್ಥಿತರಿದ್ದರು. *ಐಚಂಡ ರಶ್ಮಿ ಮೇದಪ್ಪ ಪರಿಚಯ* ಮಡಿಕೇರಿ ತಾಲ್ಲೂಕಿನ ಮೂರ್ನಾಡುವಿನ ಬಾಡಗ ಗ್ರಾಮದ ಕೈಪಟ್ಟಿರ ಕುಟುಂಬದ ನಾಣಯ್ಯ ಮತ್ತು ನಿವೃತ್ತ ಮುಖ್ಯೋಪಾಧ್ಯಾಯಿನಿ ದೇವಮ್ಮಾಜಿ ದಂಪತಿಯ ಮೂವರು ಮಕ್ಕಳಲ್ಲಿ ಐಚಂಡ ರಶ್ಮಿ ಮೇದಪ್ಪ ಪ್ರಥಮ ಪುತ್ರಿ. ಕೊಡಗು ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕರಾದ ಐ.ಪಿ.ಮೇದಪ್ಪ ಅವರ ಪತ್ನಿ. ಮಡಿಕೇರಿಯ ಸುಬ್ರಹ್ಮಣ್ಯ ನಗರದಲ್ಲಿ ವಾಸ ಇರುವ ಇವರಿಗೆ ಡಿವಿನ್ ಪೂಣಚ್ಚ ಮತ್ತು ತನಿಶ್ ತಮ್ಮಯ್ಯ ಎಂಬ ಇಬ್ಬರು ಪುತ್ರರಿದ್ದಾರೆ. Environmental Science ನಲ್ಲಿ ಎಂ.ಎಸ್ಸಿ, APTECH Computer Education ನಲ್ಲಿ ಡಿಪ್ಲೋಮೊ ಇನ್ ಕಂಪ್ಯೂಟರ್ ಸೈನ್ಸ್ ಮಾಡಿರುವ ಇವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಕೊಡವ ಭಾಷೆಯಲ್ಲಿ ಎಂ.ಎ. ಮೊದಲ ತಂಡದಲ್ಲಿ ಒಬ್ಬರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಇವರು ಹಾಡು, ಕತೆ, ನಾಟಕ ಬರೆಯುವ ಹವ್ಯಾಸ ಹೊಂದಿದ್ದಾರೆ. ಇವರ ವಿವಿಧ ಬರಹಗಳು ಪತ್ರಿಕೆಯಲ್ಲಿ ಪ್ರಕಟವಾಗಿದೆ. ಕೊಡವ ಜನಪದ ಆಟ್-ಪಾಟ್ನಲ್ಲಿ ಆಸಕ್ತಿ ಹೊಂದಿದ್ದಾರೆ. ಕೊಡವಾಮೆ ಬುಡಕಟ್ಟ್ ಸಂಸ್ಕøತಿ ಅಧ್ಯಯನ ವತಿಯಿಂದ ಏರ್ಪಡಿಸಿದ ಮೋಪ್ಕೂಟದಲ್ಲಿ ಭಾಗವಹಿಸಿ ‘ಕೊಡವರ ಐನ್ ಮನೆ’ಯ ಬಗ್ಗೆ ವಿಚಾರ ಮಂಡನೆ ಮಾಡಿದ್ದಾರೆ. ಅಲ್ಲದೆ ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್, ಕೊಡವ ಎಂ.ಎ ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ಮತ್ತು ಕೊಡವ ಮಕ್ಕಡ ಕೂಟದ ಸಂಯುಕ್ತಾಶ್ರಯದಲ್ಲಿ ನಡೆದ ಮೋಪುಕೂಟದಲ್ಲಿ ‘ನಂಗಡ ಮಕ್ಕಳ ಸಂಸ್ಕಾರವಂತಗಳಾಯಿತ್ ಬೋಳ್ತುವಲ್ಲಿ ಅವ್ವಂಗಡ ಪಾತ್ರ, ಪೊಮ್ಮಕ್ಕಡ ನಾಳ್ ಪಿಂಞ ಕೊಡವ ಸಮಾಜತ್ ಪೊಮ್ಮಕ್ಕಕುಳ್ಳ ಸ್ಥಾನಮಾನ, ಕೊಡವಡ ಮಾಲ್ ಮಟ, ಎನ್ನುವ ವಿಷಯದಲ್ಲಿ ವಿಚಾರ ಮಂಡನೆ ಮಾಡಿದ್ದಾರೆ. ಕಕ್ಕಡ ಅಂದ್ ಇಂದ್, ಕೊಡವ ಸಂಸ್ಕೃತಿ ಪಿಂಞ ಪಾಜೆನ ಬೊಳ್ತುವಾತ್ ಪೊಮ್ಮಕಡ ಪಾತ್ರ ವಿಚಾರ ಮಂಡನೆ ಮಾಡಿದ್ದಾರೆ. ಅಲ್ಲದೇ ಇವರ ‘ಚೆರ್ಕತೆ ಪಿಂಞ ಚೆರ್ನಾಟಕ’, ಸಾಂಸ್ಕೃತಿಕ ಪಿಂಞ ಧಾರ್ಮಿಕ ಹಿನ್ನಲೆಲ್ ಕೊಡವಡ ಐನ್ಮನೆ (ಅಧ್ಯಯನ ಪುಸ್ತಕ) ಬಿಡುಗಡೆಗೊಂಡಿದೆ. ಕೊಡವ ಎಂ.ಎ ತಂಡ ಬಿಡುಗಡೆಗೊಳಿಸಿದ ದೇವತೆಯಡ ಪಿಂಞ ಕೇಳಿ ಪೋನಯಿಂಗಡ ಹಾಡಿನ ಕಥಾರೂಪ ಮತ್ತು ‘ಜಾನಪದ ಕತೆ ಜೊಪ್ಪೆ’ ಎನ್ನುವ ಎರಡು ಪುಸ್ತಕದಲ್ಲಿ ಇವರ ಲೇಖನಗಳಿವೆ. ಇದೀಗ ಇವರು ಕೊಡವ ಮಕ್ಕಡ ಕೂಟದ ಸಲಹೆಗಾರರಾಗಿ ಮತ್ತು ಎಫ್ಎಂಕೆಎಂಸಿ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ರಚಿಸಿದ ಹಾಡನ್ನು ವಿವಿಧ ಹಾಡುಗಾರರ ಧ್ವನಿಯಲ್ಲಿ ಕೇಳಬಹುದಾಗಿದ್ದು, ಯುಟ್ಯೂಬ್ನಲ್ಲಿ ದೊರೆಯಲಿದೆ. ಪಳೆ ತಾಲ್ಲೂಕು (ನಾಪೋಕ್ಲು ಊರಿನ ಕೊಡವ ಒಕ್ಕಡೊಕ್ಕಡ ಭೀರ್ಯ) ಅಧ್ಯಯನ ಪುಸ್ತಕ, ಇವರ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿನ್ನಲೆಯಲ್ಲಿ ಕೊಡವರ ಐನ್ಮನೆ ಪುಸ್ತಕಕ್ಕೆ 2023-24ನೇ ಸಾಲಿನ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ ದೊರೆಕಿದೆ.









